Skip to main content

4125.ನಾನು_ಮೊದಲ_ಬಾರಿಗೆಜೋಗ_ಜಲಪಾತ_ನೋಡಿದ್ದು_1977.


ನಾನು_ಮೊದಲ_ಬಾರಿಗೆ
ಜೋಗ_ಜಲಪಾತ_ನೋಡಿದ್ದು_1977.

  ಅವತ್ತು ಜೋಗ್ ಫಾಲ್ಸ್ ಎದುರು ಅಗಾದ ಪ್ರಮಾಣದ ನೀರು ರಭಸದಲ್ಲಿ ದುಮ್ಮಿಕ್ಕುವ ಶಬ್ದ -ಕಂಪನ ಭಯ ಉಂಟು ಮಾಡಿದ್ದು ಮರೆಯಲಾರೆ ...

   ಆ ವರ್ಷ ಲಿಂಗನಮಕ್ಕಿ ಅಣೆಕಟ್ಟಿನ ಎಲ್ಲಾ ಕ್ರಸ್ಟ್ ಗೇಟ್ ಗಳನ್ನು
ತೆರೆದು ಅಗಾಧ ಪ್ರಮಾಣದ ನೀರನ್ನು ಹೊರ ಬಿಡಲಾಗಿತ್ತು.

ಸಾಗರದ ಅಂದಿನ ಎಲ್ ಬಿ ಕಾಲೇಜಿನ ಬ್ಯಾಡ್ಮಿಂಟನ್ ತಾರೆ ನಮ್ಮೂರಿನ #ಗಣಪತಿಶೇಟ್ ನಮಗೆ ಜೋಗ್ ಫಾಲ್ಸ್ ತೋರಿಸಿದ ಮಿತ್ರ.

   ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ಹರಿಯುವ ಶರಾವತಿ ನದಿ, ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ಗೇರುಸೊಪ್ಪ ಕೊಳ್ಳದಲ್ಲಿ ಜೋಗ್ ಜಲಪಾತವಾಗಿ ಧಮ್ಮಿಕ್ಕುತ್ತದೆ.

  ಸಾಗರ ಮತ್ತು ಸಿದ್ದಾಪುರ ತಾಲೂಕಿನ ಎಲ್ಲರೂ ಜೋಗ ಜಲಪಾತ ನೋಡಿದ್ದಾರೆಂದು ಎಲ್ಲರೂ ಭಾವಿಸುತ್ತಾರೆ ಕಾರಣ ಅಷ್ಟು ಸಮೀಪದ ವಿಶ್ವ ವಿಖ್ಯಾತ ಜೋಗ ಜಲಪಾತ ನೋಡದೇ ಇರಲು ಹೇಗೆ ಸಾಧ್ಯ? ಎಂಬುದು ಅವರ ಭಾವನೆ.

 ಆದರೆ ಸಮೀಪದವರು ಈ ಜೋಗ ಜಲಪಾತ ನೋಡದೇ ಇರುವವರು ಅನೇಕರಿದ್ದಾರೆ,‌ ನಾನು ನನ್ನ 12ನೇ ವಯಸ್ಸಿನ ತನಕ ಜೋಗ ಜಲಪಾತ ನೋಡಿರಲಿಲ್ಲ.

   ನಾನು 8 ನೇ ತರಗತಿಗೆ ಸಾಗರ ಮುನ್ಸಿಪ್ ಹೈಸ್ಕೂಲ್ ಸೇರಿದಾಗ ನಿತ್ಯ ಬೆಳಿಗ್ಗೆ ರೈಲಿನಲ್ಲಿ ಸಾಗರಕ್ಕೆ ಹೋಗಿ ಕ್ಲಾಸ್ ಮುಗಿಸಿ ಸಂಜೆ ರೈಲಿನಲ್ಲಿ ವಾಪಾಸು ಬರುವ ಅನೇಕ ನಮ್ಮ ಊರಿನ ವಿದ್ಯಾರ್ಥಿ ವೃಂದದೊಂದಿಗೆ ನನ್ನ ಪಯಣ.

  ಆಗ ಸಾಗರದ ಲಾಲ್ ಬಹದ್ದೂರ್ ಶಾಸ್ತ್ರೀ ಕಾಲೇಜಿನಲ್ಲಿ ಪದವಿ ತರಗತಿ ವಿದ್ಯಾರ್ಥಿ ಆಗಿದ್ದ ಆನಂದಪುರಂನ ಗಣಪತಿ ಶೇಟ್ ಬಾಲ್ ಬ್ಯಾಡ್ಮಿಂಟನ್ ಆಟದಲ್ಲಿ ಹೀರೋ ಆಗಿದ್ದರು, ಅವರೇ ನಮ್ಮ ನಿತ್ಯ ರೈಲು ಪ್ರಯಾಣದ ನಮ್ಮ ತಂಡದ ನಾಯಕರು.

  ಗಣಪತಿ ಶೇಟ್ ಸದಾ ಹಸನ್ಮುಖಿ, ಹಿಪ್ಪಿ ಕ್ರಾಪ್, ಬೆಲ್ ಬಾಟಮ್ ಪ್ಯಾಂಟ್ ಕೈಯಲ್ಲಿ ಬ್ಯಾಟ್ ಹಿಡಿದ ಕ್ರಿಯಾಶೀಲ ನಾಯಕ ನಮಗೆ ಮಾತು ಮಾತಿಗೂ ತಮಾಷೆ ಅವರಿದ್ದಲ್ಲಿ ನಗು ನಗೂ...

   1977ರ ಆಗಸ್ಟ್ ತಿಂಗಳಲ್ಲಿ ಲಿಂಗನಮಕ್ಕಿ ಆಣೆ ಕಟ್ಟು ತುಂಬಿ ಎಲ್ಲಾ ಕ್ರೆಸ್ಟಗೇಟ್ ತೆರೆದಿದ್ದ ಸುದ್ದಿ ಅಂದಿನ ಬೆಳಗಿನ ಪ್ರಜಾವಾಣಿ ದಿನ ಪತ್ರಿಕೆಯ ಮುಖ ಪುಟದಲ್ಲಿ ಚಿತ್ರ ಸಮೇತ ಸುದ್ದಿ ಪ್ರಕಟವಾಗಿತ್ತು.

  ನಿತ್ಯ ರೈಲಿನಲ್ಲಿ ಜೋಗ ಜಲಪಾತ ವೀಕ್ಷಣೆಗೆ ಬರುವ ಪ್ರವಾಸಿಗರ ಸಂಖ್ಯೆ ಕೂಡ ಆ ದಿನದಲ್ಲಿ ಜಾಸ್ತಿ ಆಗಿತ್ತು.

   ಆಗ ವಿದೇಶಿ ಪ್ರವಾಸಿಗರೂ ಜಾಸ್ತಿ #Freedom_at_midnight ಎಂಬ ಪುಸ್ತಕ ಹೆಚ್ಚಿನ ವಿದೇಶಿ ಪ್ರವಾಸಿಗರ ಕೈಯಲ್ಲಿರುತ್ತಿತ್ತು,ಪ್ರಯಾಣದಲ್ಲಿ ತಪ್ಪದೇ ಆ ಪುಸ್ತಕ ಭಾರತ ದೇಶವನ್ನು ತಿಳಿದುಕೊಳ್ಳಲು 
 ಓದುತ್ತಿದ್ದರು.
 
    ಆಗ ಹಿಪ್ಪಿ ಸಂಸ್ಕೃತಿ ಹೆಚ್ಚು ಪ್ರಸಿದ್ಧಿ ಆಗಿದ್ದರಿಂದ ಅವರ ವೇಷ ಭೂಷಣ ಬಗಲಲ್ಲಿ ಗಿಟಾರ್ ಕೈಯಲ್ಲಿ ಸಿಗಾರ್ ಇರುತ್ತಿತ್ತು.

  ಇಂತಹ ದಿನದಲ್ಲೇ ನಮ್ಮ ನಾಯಕ ಗಣಪತಿ ಶೇಟ್ ಜೋಗ್ ಜಲಪಾತ ನೋಡುವ ಒಂದು ದಿನದ  ಪ್ರವಾಸದ ಪ್ಲಾನ್ ಮಾಡಿದರು.

   ಎಲ್ಲರೂ ಅವರವರ ಮನೆಯಲ್ಲಿ ಅನುಮತಿ ಪಡೆದು ಬರಬೇಕು, ತಮ್ಮ ಮಧ್ಯಾಹ್ನದ ಊಟದ ಡಬ್ಬಿ ಕಡ್ಡಾಯವಾಗಿ ತರಬೇಕು ಎಂದು ತಿಳಿಸಿದರು.

    ನಮ್ಮ ಒಂದು ದಿನದ ಟ್ರಿಪ್ ವಿವರ ಆನಂದಪುರಂನಲ್ಲಿ ರೈಲಿನಲ್ಲಿ ಕುಳಿತುಕೊಳ್ಳುವ ನಾವು ಸಾಗರದಲ್ಲಿ ಇಳಿದು ಬಸ್ಸಿನಲ್ಲಿ ಜೋಗ ತಲುಪಿ ಅಲ್ಲಿ ಪ್ರವೇಶದ ಪಾಸ್ ಪಡೆದು ಮಹಾತ್ಮ ಗಾಂಧಿ ಪವರ್ ಹೌಸ್ ಗೆ  ಟ್ರಾಲಿನಲ್ಲಿ ಇಳಿಯುವುದು, ಅಲ್ಲಿ ವಿದ್ಯುತ್ ಉತ್ಪಾದನೆ ಮಾಡುವ ಟರ್ಬೈನ್ ಗಳನ್ನು ನೋಡಿ ನಂತರ ಜೋಗ್ ಜಲಪಾತ ತಲುಪಿ ಅದನ್ನು ವೀಕ್ಷಿಸುವುದು,ಅಲ್ಲಿಂದ ಲಿಂಗನಮಕ್ಕಿಗೆ ಹೋಗಿ ಲಿಂಗನಮಕ್ಕಿ ಡ್ಯಾಮ್ ಪೂರ್ತಿ ನೋಡಿ ಸಾಗರಕ್ಕೆ ವಾಪಸ್ ಬಂದು ಸಂಜೆ ರೈಲಿನಲ್ಲಿ ಊರಿಗೆ ವಾಪಸ್ ಆಗುವುದು.

   ಈ ಪ್ರವಾಸದ ವೆಚ್ಚ ತಲಾ 10 ರೂಪಾಯಿ ಪಾವತಿಸಬೇಕು ಈ ಹಣದಲ್ಲಿ ಸಾಗರದಿಂದ ಹೊರಟು ಜೋಗ ಲಿಂಗನಮಕ್ಕಿ ನೋಡಿ ಸಾಗರಕ್ಕೆ ವಾಪಸ್ ಆಗುವ ವಾಹನದ ಬಸ್ ಚಾರ್ಜ್, ಪ್ರವೇಶದ ಪಾಸ್ ಮತ್ತು ಊಟ ಅಥವಾ ಉಪಹಾರ ಎಂದು ನಿಗದಿ ಮಾಡಿದ್ದರು.

   ಅವತ್ತು ಬೆಳಿಗ್ಗೆ ಆನಂದಪುರದಿಂದ ಸುಮಾರು 15 ಜನರ ನಮ್ಮ ತಂಡ ರೈಲಿಗೆ ಹತ್ತಿ  ಮೊದಲು ಸಾಗರ ರೈಲು ನಿಲ್ದಾಣ ತಲುಪುವ ಮೊದಲು ಗಣಪತಿ ಶೇಟ್ ರೈಲಿನ ಟಿಟಿ ಅವರಲ್ಲಿ ವಿನಂತಿಸಿ ನಾವೆಲ್ಲ ವಿದ್ಯಾರ್ಥಿಗಳು ಟಿಕೆಟ್ ಇಲ್ಲದೆಯೂ ತಾಳಗುಪ್ಪ ರೈಲ್ವೆ ಸ್ಟೇಷನ್ ವರೆಗೆ ಪ್ರಯಾಣಿಸಲು ಅವಕಾಶ ಪಡೆದರು.

  ಅಲ್ಲಿಂದ ಬಸ್ಸಿನಲ್ಲಿ ಜೋಗ್ ಬಸ್ ನಿಲ್ದಾಣ ತಲುಪಿದೆವು, ಅಲ್ಲಿ ಕೆಪಿಸಿ ಕಚೇರಿಯಲ್ಲಿ ಪಾಸ್ ಪಡೆದು ಜೋಗ್ ಬಸ್ ನಿಲ್ದಾಣದ ಎದುರಿನ ಮಹಾತ್ಮ ಗಾಂಧಿ ಪವರ್ ಹೌಸ್ ನೋಡಲು ಅಲ್ಲಿನ ಮುಖ್ಯ ದ್ವಾರಕ್ಕೆ ಹೋಗಿ ಸಾಲಾಗಿ ನಿಂತು ಟಿಕೆಟ್ ಪಡೆದು ಟ್ರಾಲಿಯಲ್ಲಿ ಕುಳಿತು ಅಲ್ಲಿಂದ ಶರಾವತಿ ಕಣಿವೆಗೆ ಇಳಿಯುವ ಜೀವಮಾನ ಪೂರ್ತಿ ನೆನಪಲ್ಲಿರುವ  ಭಯ ಮಿಶ್ರಿತ ರೋಮಾಂಚನಕಾರಿ ಅನುಭವ ಅನುಭವಿಸಿ ಪವರ್ ಹೌಸಿನ ತಳ ತಲುಪಿದೆವು.

  ಈ ಟ್ರಾಲಿ ಪಯಣದ ಅನುಭವದ ಥ್ರಿಲ್ಲಿಂಗ್ ಅನುಭವಿಸಿದವರಿಗೆ ಗೊತ್ತು ಅಲ್ಲಿ ವಿದ್ಯುತ್ ಉತ್ಪಾದನೆ ಆಗುವ ಬೃಹತ್ ಯಂತ್ರಗಳಾದ ಟರ್ಬೈನ್ ನೋಡಿದೆವು, ಅಲ್ಲಿನ ಬೃಹತ್ ಕಟ್ಟಡ ಅಲ್ಲಿ ಟರ್ಬೈನ್ ಉಂಟು ಮಾಡುವ ಅಸಾಧ್ಯ ಶಬ್ದ, ಟರ್ಬೈನ ತಿರುಗುವ ಕಂಪನ ಭಯ ಮತ್ತು ಆಶ್ಚಯ೯ ತರಿಸಿತ್ತು.

   ಅಲ್ಲಿಂದ ಪುನಃ ಟ್ರಾಲಿನಲ್ಲಿ ಮೇಲಕ್ಕೆ ಬಂದದ್ದು ಒಂದು ಅದ್ಭುತವಾದ ಅನುಭವ.

  ಅಲ್ಲಿಂದ ತಕ್ಷಣ ಬಸ್ಸಲ್ಲಿ ಹತ್ತಿ ಜೋಗ್ ಜಲಪಾತ ನೋಡಲು ಹೋದೆವು, ಅವತ್ತು ಮಲೆನಾಡಿನಲ್ಲಿ ಬಾರೀ ಮಳೆ, ಆನಂದಪುರದಿಂದ ಶುರುವಾಗಿದ್ದ ನಮ್ಮ ಪ್ರಯಾಣದ ಜೊತೆ ಆಗಿದ್ದ ಮಳೆ ಸತತವಾಗಿ ಬೀಳುತ್ತಲೇ ಇತ್ತು.

  ನಮ್ಮ ದೊಡ್ಡ ಛತ್ರಿಗಳೂ ಕೂಡ  ನಮ್ಮನ್ನ ಮಳೆಯಿಂದ ರಕ್ಷಣೆ ಮಾಡಲಾಗದೇ ನಾವೆಲ್ಲ ಅಕ್ಷರಶಃ ಒದ್ದೆ ಒದ್ದೆ ಆಗಿದ್ದೆವು.

   ಆಗಿನ ಬಸ್ಸಿನ ಕಿಟಕಿಗಳಿಗೆ ಈಗಿನಂತೆ ಗಾಜಿನ ಕಿಟಕಿಗಳು ಇರುತ್ತಿರಲಿಲ್ಲ ಆಗ ಮಳೆ ನೀರಿನಿಂದ ರಕ್ಷಿಸಿಕೊಳ್ಳಲು ಉದ್ದದ ಟಾರ್ಪಲ್ ಇರುತ್ತಿತ್ತು, ಮಳೆಗಾಲ ಆದ್ದರಿಂದ ಆ ಟಾರ್ಪಾಲ್ ಭದ್ರವಾಗಿ ಕಟ್ಟಿ ಇಡುತ್ತಿದ್ದರು ಅದನ್ನು ತೆಗೆಯುತ್ತಿರಲಿಲ್ಲ ಆದ್ದರಿಂದ ಬಸ್ಸಿನೊಳಗೆ ಹಗಲಿನಲ್ಲೂ ಕತ್ತಲು ಆವರಿಸಿರುತ್ತಿತ್ತು,ಬಸ್ಸಿನ ಒಳಗಿನ ಟಾಪ್ ಲೈಟ್ ಸದಾ ಉರಿಯುತ್ತಲೇ ಇರುತ್ತಿತ್ತು.

   ನಮ್ಮ ಬಸ್ ಜಲಪಾತದ ಸಮೀಪದ ಘಾಟಿನಲ್ಲಿ ತಿರುಗುತ್ತಾ ಇಳಿಯುತ್ತಾ ಜೋಗ್ ಜಲಪಾತದ ಎದುರಿಗೆ ಬರುವಾಗ ಡ್ರೈವರ್ ಎದುರಿನ ವಿಂಡ್ ಶೀಲ್ಡ್ ನಿಂದ ಜೋಗ ಜಲಪಾತ ಕೆಲವು ತಿರುವುಗಳಲ್ಲಿ ದರ್ಶನ ನೀಡುತ್ತಿದ್ದ ಜಲಪಾತದ ದೃಶ್ಯ ಬಾಲಕರಾದ ನಮಗೆ ಆಶ್ಚರ್ಯ ಮತ್ತು ಭಯ ಉಂಟು ಮಾಡಿತು.

  ನನ್ನ ಜೀವಮಾನದಲ್ಲಿ ಅಷ್ಟು ದೊಡ್ಡ ಕಣಿವೆ, ಶಿಲಾ ರಚನೆ ಮತ್ತು ಅಗಾದ ನೀರಿನ ಜಲಪಾತ ಅದೇ ಮೊದಲ ಬಾರಿಗೆ ನಾನು ನೋಡಿದ್ದು.  

   ನಂತರ ಜೋಗ್ ಜಲಪಾತವನ್ನು ವೀಕ್ಷಣೆ ಮಾಡಿದೆವು ಅದೊಂದು ವಿಸ್ಮಯ ಅನ್ನಿಸಿ ಬಿಟ್ಟಿತು ಅಷ್ಟು ದೊಡ್ಡ ಜಲಪಾತ ಆಗಾದ ಪ್ರಮಾಣದ ನೀರು ನಮ್ಮ ಕಣ್ಣು ಎದುರಿಗೆ ರಭಸದಿಂದ ದುಮುಕಿ ಆಳದ ಶರಾವತಿ ಕಣಿವೆ ಸೇರುವುದು ಜೀವಮಾನದಲ್ಲೇ ಮೊದಲ ಬಾರಿಗೆ ನೋಡಿದಾಗ ಹ್ಯಾಗೆ ಅನ್ನಿಸಿರ ಬೇಡ....ಅಲ್ಲಿಂದ ತಕ್ಷಣ ಸಿಕ್ಕಿದ ಒಂದು ಬಸ್ ಹತ್ತಿ ಕಾರ್ಗಲ್ ತಲುಪಿ ಅಲ್ಲಿಂದ ನಡೆದುಕೊಂಡು ಬಳಸು ದಾರಿಯಾದ ಚಾನಲ್ ರಸ್ತೆಯಲ್ಲಿ ಲಿಂಗನಮಕ್ಕಿ ಆಣೆಕಟ್ಟಿಗೆ ಹೊರಟೆವು.

   ದಾರಿ ಮಧ್ಯದಲ್ಲಿ ಲಿಂಗನಮಕ್ಕಿ ಡ್ಯಾಮ್ ನಿಂದ ಹೈಡ್ರೋ ಎಲೆಕ್ಟ್ರಿಕ್ ಪ್ರಾಜೆಕ್ಟ್ ಗೆ ಹೋಗುವ ಕಾಲುವೆಗಳನ್ನ ನೋಡುತ್ತಾ ಆ ಕಾಲುವೆಯ ಒಳಗೆ ರಭಸದಿಂದ ಹರಿಯುವ ನೀರುಗಳನ್ನ ನೋಡುತ್ತಾ ಲಿಂಗನಮಕ್ಕಿ ತಲುಪಿದೆವು.

   ಅಲ್ಲಿ ಪಾಸ್ ತೋರಿಸಿ ಆಣೆಕಟ್ಟಿನ ಮೇಲೆ ನಡೆಯುತ್ತಾ ಕ್ರೆಸ್ಟ್ ಗೇಟ್ ಗಳನ್ನು ತೆಗೆದಿದ್ದು ನೋಡುತ್ತಾ ಅದರಿಂದ ರಭಸದಿಂದ ಹೊರ ಹರಿಯುವ ನೀರಿನ ಹರಿವು ನೋಡುತ್ತಾ, ಬಲಭಾಗದಲ್ಲಿ ವಿಶಾಲವಾದ ಸಮುದ್ರೋಪಾದಿಯಲ್ಲಿ ನಿಂತ ಶರಾವತಿ ನೀರನ್ನು ನೋಡುತ್ತಾ ಡ್ಯಾಮಿನ ಇನ್ನೊಂದು ಬಾಗಕ್ಕೆ ತಲುಪಿದೆವು.

  ಅಲ್ಲಿಂದ #ಗಮಟೆ_ಘಟ್ಟ ಸಮೀಪದ ಚೈನ್ ಗೇಟ್ ತಲುಪಿದರೆ ಸಾಗರ - ಕಾರ್ಗಲ್ ಬಸ್ ಮಾರ್ಗ ಸಿಗುತ್ತದೆ. 

       ಅಲ್ಲಿಗೆ ತಲುಪಲು ಅವತ್ತಿನ ಅದ್ಬುತ ಪ್ರವಾಸದಲ್ಲಿ ಮಳೆಯಲ್ಲೇ ನಡೆಯುತ್ತಾ ಡ್ಯಾಮಿನ ಇನ್ನೊಂದು ಭಾಗ ತಲುಪುವಾಗ
ಅದೇ ಮಾರ್ಗದಲ್ಲಿ  ಕೆಪಿಸಿಯ ಲಾರಿ ಒಂದು ಬರುತ್ತಿತ್ತು.

  ಗಣಪತಿ ಶೇಟ್ ಆ ಲಾರಿಗೆ  ಕೈತೋರಿಸಿ ನಿಲ್ಲಿಸಿ "ನಾವು ವಿದ್ಯಾರ್ಥಿಗಳು ಆದಷ್ಟು ಬೇಗ ತಾಳಗುಪ್ಪ ತಲುಪಬೇಕು ನಮ್ಮ ರೈಲು ತಪ್ಪಿದರೆ ನಮ್ಮ ಊರು ಆನಂದಪುರಂ ತಲುಪುವುದು ಕಷ್ಟ" ಎಂದು ವಿನಂತಿಸಿದರು.

  ಆಗ ಆ ಡ್ರೈವರ್ ಒಪ್ಪಿ ನಮ್ಮನ್ನೆಲ್ಲಾ ಲಾರಿ ಹಿಂಬಾಗದಲ್ಲಿ ಕೂರಿಸಿಕೊಂಡು ಚೈನಾ ಗೇಟ್ ಸಮೀಪ ತಂದುಬಿಟ್ಟರು.

 ಈಗ ಬ್ಯಾಡ್ಮಿಂಟನ್ ತಾರೆ ಆನಂದಪುರಂ ಗಣಪತಿ ಶೇಟ್ ಇಲ್ಲ ಅವತ್ತು ಗಣಪತಿ ಶೇಟ್ ನಮ್ಮೆಲ್ಲರಿಗೆ ನಮ್ಮ ಜೀವಮಾನದಲ್ಲಿ ಮೊದಲ ಬಾರಿಗೆ ಜೋಗ ಜಲಪಾತ  ತೋರಿಸಿದ್ದು ಮಾತ್ರ ಮರೆಯಲಾರದ ಸಿಹಿಯಾದ ಸವಿಯಾದ ಅನುಭವ.

#jogfalls #linganamakki #siddapura #ಸಾಗರ್ #shimoga #ganapathisheat #badmintonplayer #crestgates #lbcollege

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...