ಖೇಚರೀಯೋಗಿ . **************************************************** ಎಲ್ಲವನ್ನು ತ್ಯಜಿಸಿ ನಿಸ್ಪೃಹರಾಗಿ ಬದುಕುವುದು ಸುಲಭದ ಮಾತಲ್ಲ . ಅದು ಒಂದು ಮಹಾ ಸಾಧನೆ. ಅದೆಷ್ಟೋ ಸನ್ಯಾಸಿಗಳಿಗೆ ಯೋಗ ಮಾರ್ಗದ ದಿಗ್ದರ್ಶನ ಮಾಡಿದ ಮಹಾತ್ಮರು ಇವರು. ಬಾಡಿಹೋದ ಜೀವನಗಳಿಗೆ ಹೊಸ ಸ್ಫೂರ್ತಿ ತುಂಬಿ ನವ ಜೀವನದ ಮಹಾದ್ವಾರವನ್ನು ತೆರೆದುಕೊಟ್ಟ ದಿವ್ಯಪುರುಷರು..! ಕುಬ್ಜ ದೇಹ .. ಯೋಗಸಾಧನೆಯಿಂದಲೇ ಸೊರಗಿಹೋದ ಶರೀರ… ತೀಕ್ಷ್ಣ ಕಣ್ ದೃಷ್ಟಿ.. ನೇರ ಮಾತು.. ಸದಾ ಸಾಧನೆ… ಇದೇ ಅವರ ಪೂರ್ಣವ್ಯಕ್ತಿತ್ವದ ಕಿರು ಚಿತ್ರಣ. ನಾನು ಹೇಳ ಹೊರಟಿದ್ದು, ಖೇಚರೀ ಯೋಗಿಗಳೂ ಎಂದೇ ಲೋಕವಿಖ್ಯಾತರಾಗಿದ್ದ ಪೂಜ್ಯ ನೃಸಿಂಹಾನಂದ ಸರಸ್ವತೀ ಸ್ವಾಮಿಗಳ ಕುರಿತು. 'ಕಲಸೀ ಸ್ವಾಮಿಗಳೂ' ಎಂದೇ ಪ್ರಸಿದ್ದರಾಗಿದ್ದ ಇವರು ಜನಿಸಿದ್ದು ಉತ್ತರಕನ್ನಡದ ಬನವಾಸಿಯಲ್ಲಿ 1912ರ ಮಾರ್ಚ್ 20 ರಂದು. ಇವರ ಬಾಲ್ಯದ ಹೆಸರು ಚಿದಂಬರ. ಬಾಲ್ಯದಿಂದಲೇ ತಂದೆಯನ್ನು ಕಳೆದುಕೊಂಡ ಚಿದಂಬರ ದಾಯಾದಿಗಳ ಕಲಹದಿಂದ ಮನನೊಂದು ಅದೊಂದು ದಿನ ಕಾಲಭೈರವನ ದರ್ಶನಕ್ಕೆ ಯಾಣಕ್ಕೆ ಹೋದನಂತೆ. ಅಲ್ಲಿ ಆತನಿಗೆ ದೊರಕಿದ ಶ್ರೀದರ ಸ್ವಾಮಿಗಳ ದಿವ್ಯಾಶೀರ್ವಾದ ಮಹಾ ಯೋಗಿಯಾಗುವುದಕ್ಕೆ ಭದ್ರ ಬುನಾದಿಯನ್ನೇ ನಿರ್ಮಿಸಿತ್ತು. ಶಾಲೆ ಬಿಟ್ಟು ಮನೆಗಾಗಿ ದುಡ...