BLOG ARTICLES 957. ಖ್ಯಾತ ವಿಮಶ೯ಕ - ಅಂಕಣಕಾರ - ಶಿಕ್ಷಣ ತಜ್ಞ ಅರವಿಂದ ಚೊಕ್ಕಾಡಿ ನನ್ನ ಕಾದಂಬರಿ ಬೆಸ್ತರ ರಾಣಿ ಚಂಪಕಾ ಬಗ್ಗೆ ಬರೆದ ವಿಮರ್ಶೆ.
#ಪುಸ್ತಕ ಪ್ರೇಮ ಪತ್ರಗಳನ್ನು ಎಲ್ಲರೂ ಓದಬಹುದಾದ ಅಂಚೆ ಕಾರ್ಡಿನಲ್ಲಿ ಬರೆಯಬೇಕೆನ್ನುವುದು ನನ್ನ ವಾದ, ನಂಬಿಕೆ ಮತ್ತು ಆಚರಣೆಯಾಗಿತ್ತು. ಏಕೆಂದರೆ ಅನುಮಾನಕ್ಕೆ ಆಸ್ಪದವೆ ಇರುವುದಿಲ್ಲ. ಸಮಸ್ಯೆ ಇರುವುದು ಬರೆಯುವುದು ಹೇಗೆ? ಎಂಬ ಬಗ್ಗೆ. ಸಂಕೇತಾಕ್ಷರಗಳು, ಸಂಕೇತ ಪದಗಳಿಂದ ಇದು ಕಾರ್ಯ ಸಾಧ್ಯವಾಗುತ್ತದೆ. ಆದರೆ ನಮ್ಮ ಪೂರ್ವೀಕರು ನಮಗಿಂತಲೂ ಬುದ್ಧಿವಂತರಾಗಿದ್ದರು. ಯಾವ ಚಿತ್ರವನ್ನು ರಂಗೋಲಿಯಲ್ಲಿ ಬಿಡಿಸಲಾಗುತ್ತದೆ ಎನ್ನುವುದು ಪ್ರೇಮ ಒಪ್ಪಿಗೆಯೋ ಅಲ್ಲವೊ ಎಂಬುದಕ್ಕೆ ಸಾಕ್ಷಿಯಾಗಿತ್ತು ಎಂದು ಗೊತ್ತಾದದ್ದು ಸ್ನೇಹಿತ ಅರುಣ್ ಪ್ರಸಾದ್ ಅವರು ಕಳುಹಿಸಿಕೊಟ್ಟ 'ಬೆಸ್ತರ ರಾಣಿ ಚಂಪಕಾ' ಕಾದಂಬರಿಯನ್ನು ಓದಿದ ಮೇಲೆಯೇ. ರಂಗೋಲಿಯಲ್ಲಿ ಗಂಡ- ಭೇರುಂಡದ ಚಿತ್ರವನ್ನು ಬಿಡಿಸಿದರೆ ಪ್ರೇಮವನ್ನು ಒಪ್ಪಿಕೊಂಡ ಹಾಗೆಯೇ ಎನ್ನುವುದು ಈ ಇಡೀ ಕಾದಂಬರಿಯ ಕೇಂದ್ರ ವಿಚಾರವಾಗಿದೆ. ಅನೇಕರು ಸತ್ಯ ಇತಿಹಾಸ ಯಾವುದು? ಎಂದು ಪ್ರಶ್ನಿಸುತ್ತಾರೆ. ಆದರೆ ಅದನ್ನು ಹೇಳಲು ಸಾಧ್ಯವಿಲ್ಲ. ರಾಜಲಾಂಛನವನ್ನು ಯಾವ ಕೋನದಿಂದ ನೋಡಿದರೂ ಮೂರು ಸಿಂಹಗಳೇ ಕಾಣುವುದು. ಆದರೆ ಅದರಲ್ಲಿರುವುದು ನಾಲ್ಕು ಸಿಂಹಗಳು. ಹಾಗೆಯೇ ಇತಿಹಾಸವೂ ಕೂಡ. ಒಬ್ಬ ಒಳ್ಳೆಯ ರಾಜ ಎಂದಾದರೆ ಅವನು ಕರೆ, ಕಾಲುವೆ ತೋಡಿಸಿದ್ದನು, ದಾನ-ದತ್ತಿಗಳನ್ನು ನೀಡಿದ್ದನು ಎಂದೂ, ಕೆಟ್ಟ ರಾಜ ಎಂದಾದರೆ ವಿಪರೀತ ತೆರಿಗೆ ಹಾಕಿ ಜನರನ್ನು ಶೋಷಿಸಿದನು ಎಂದು ಯಾರಿಗೆ ಬೇಕಾದರೂ ಬರೆಯಿರಿ...