ಭಾಗ_17_ಘಟ್ಟಕ್ಕೆ_ಕರಾವಳಿಗರ_ವಲಸೆ.
ಮುಖ್ಯಮಂತ್ರಿ_ಆಗಿದ್ದ_ಕಡಿದಾಳರ_ಬರಹದಲ್ಲಿ
ಮಾಜಿ ಮುಖ್ಯಮಂತ್ರಿ ಕಡಿದಾಳು ಮಂಜಪ್ಪನವರ ಬರಹ ಮತ್ತು ಆಡಳಿತದಲ್ಲಿ ಕರಾವಳಿ ವಲಸಿಗರ ಉಲ್ಲೇಖಗಳು.
ನೀವು ಇಂತಹ ಕರಾವಳಿ ವಲಸಿಗರ ವಂಶಸ್ಥರಾಗಿದ್ದರೆ ಈ ಸರಣಿ ಲೇಖನಗಳನ್ನು ನಿಮ್ಮ ಕುಟುಂಬಕ್ಕೆ ತಪ್ಪದೇ ಶೇರ್ ಮಾಡಿ.
ಇದು ಸಣ್ಣ ಹೊಟ್ಟೆಪಾಡಿನ ವಲಸೆ ಅಲ್ಲ 1850 ರಿಂದ 1950 ರವರೆಗೆ ನಿರಂತರ ನಡೆದ ಉದ್ಯೋಗದ ಹುಡುಕಾಟ ಆಗಿತ್ತು.
ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳು ಮತ್ತು ಪ್ರಸಿದ್ಧ ಸಾಹಿತಿ-ಚಿಂತಕರೂ ಆದ ಕಡಿದಾಳು ಮಂಜಪ್ಪನವರು ಮೂಲತಃ ಮಲೆನಾಡಿನ (ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲೂಕಿನ ಕಡಿದಾಳು) ಹಿನ್ನೆಲೆಯಿಂದ ಬಂದವರು.
ಕುವೆಂಪು ಅವರ ಸಮಕಾಲೀನರಾಗಿದ್ದ ಇವರು ಮಲೆನಾಡಿನ ಸಾಮಾಜಿಕ ಮತ್ತು ರಾಜಕೀಯ ಸ್ಥಿತ್ಯಂತರಗಳನ್ನು ಹತ್ತಿರದಿಂದ ಕಂಡವರು.
ಕಡಿದಾಳು ಮಂಜಪ್ಪನವರು 'ನನಸಾಗದ ಕನಸು' ಆತ್ಮಕಥೆಯಲ್ಲದೆ ಪ್ರಮುಖವಾಗಿ ಮೂರು ಕಾದಂಬರಿಗಳನ್ನು ಬರೆದು ಪ್ರಕಟಿಸಿದ್ದಾರೆ.
#ಪಂಜರವಳ್ಳಿಯ_ಪಂಜು (1963) ಇದು ಅವರ ಅತ್ಯಂತ ಪ್ರಸಿದ್ಧ ಹಾಗೂ ಚರ್ಚಿತ ಕಾದಂಬರಿಯಾಗಿದೆ ಇದಕ್ಕೆ ರಾಷ್ಟ್ರಕವಿ ದ.ರಾ. ಬೇಂದ್ರೆಯವರು ಮುನ್ನುಡಿ ಬರೆದಿದ್ದರು.
ಮಲೆನಾಡಿನ ನಿಸರ್ಗ ಸೌಂದರ್ಯಅಲ್ಲಿನ ಜನರ ಬದುಕು ಹಾಗೂ ಮೂರು ತಲೆಮಾರಿನ ಕಥೆಯ ಮೂಲಕ ಮಾನವಿಕ ಮೌಲ್ಯಗಳು ಮತ್ತು ರಾಜಕೀಯ ವ್ಯತ್ಯಾಸಗಳನ್ನು ಇದರಲ್ಲಿ ಚಿತ್ರಿಸಿದ್ದಾರೆ ಈ ಕೃತಿಯು ಇಂಗ್ಲಿಷ್ ಹಾಗೂ ಮಲಯಾಳಂ ಭಾಷೆಗಳಿಗೂ ಅನುವಾದಗೊಂಡಿದೆ.
#ನಾಳೆಯ_ನೆಳಲು ( 1966)
ರಾಜಕೀಯ ಹಾಗೂ ಸಾರ್ವಜನಿಕ ಜೀವನದ ಶುದ್ಧೀಕರಣ, ಮೌಲ್ಯಗಳ ಕುಸಿತ ಮತ್ತು ನೈತಿಕತೆಯ ಅಗತ್ಯವನ್ನು ಪ್ರತಿಪಾದಿಸುವ ಕಾದಂಬರಿ.
#ಕ್ರಾಂತಿ_ಕೂಟ (1974)
ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ಸಮಾಜವಾದಿ ಚಿಂತನೆಗಳು ಹಾಗೂ ಸಾಮಾಜಿಕ ಬದಲಾವಣೆಯ ತೀವ್ರತೆಯನ್ನು ಬಿಂಬಿಸುವ ಕೃತಿ.
ಅವರ ಪ್ರಸಿದ್ಧ ಕಾದಂಬರಿಗಳಾದ 'ನಾಳಿನ ನೆರಳು' ಮತ್ತು 'ಕ್ರಾಂತಿ ಕೂಟ' ಹಾಗೂ ಅವರ ಆತ್ಮಕಥೆಯಾದ 'ನನಸಾಗದ ಕನಸು' ಕೃತಿಗಳಲ್ಲಿ ಕರಾವಳಿ ವಲಸಿಗರ ಮುಖ್ಯವಾಗಿ ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಿಂದ ಮಲೆನಾಡಿಗೆ ಬಂದವರ ಕುರಿತು ಅತ್ಯಂತ ವಾಸ್ತವಿಕ ಮತ್ತು ಸಹಾನುಭೂತಿಯ ಒಳನೋಟಗಳನ್ನು ನೀಡಿದ್ದಾರೆ.
ಕಡಿದಾಳು ಮಂಜಪ್ಪನವರು ಕರಾವಳಿ ವಲಸಿಗರ ಬಗ್ಗೆ ದಾಖಲಿಸಿರುವ ಪ್ರಮುಖ ಅಂಶಗಳು ಕರಾವಳಿಗರು ಮಲೆನಾಡಿನ ಆರ್ಥಿಕತೆಯ "ಜೀವನಾಡಿಗಳು" ಎಂದು ಬರೆದಿದ್ದಾರೆ.
ಕಡಿದಾಳು ಮಂಜಪ್ಪನವರು ಮಲೆನಾಡಿನ ಕೃಷಿ ವ್ಯವಸ್ಥೆಯನ್ನು ಜಮೀನ್ದಾರಿ ದೃಷ್ಟಿಕೋನದಿಂದ ನೋಡದೆ ಒಬ್ಬ ಪ್ರಗತಿಪರ ರಾಜಕಾರಣಿಯಾಗಿ ಮತ್ತು ಕೃಷಿಕನಾಗಿ ನೋಡಿದವರು.
ಅವರ ಪ್ರಕಾರ ಕರಾವಳಿಯಿಂದ ವಲಸೆ ಬರುತ್ತಿದ್ದ ಕೂಲಿಯಾಳುಗಳು ಇಲ್ಲದಿದ್ದರೆ ಮಲೆನಾಡಿನ ಅಡಿಕೆ ಮತ್ತು ಏಲಕ್ಕಿ ತೋಟಗಳು ನಾಶವಾಗಿ ಹೋಗುತ್ತಿದ್ದವು.
ಮಲೆನಾಡಿನ ಸ್ಥಳೀಯ ಕಾರ್ಮಿಕರಿಗಿಂತ ಕರಾವಳಿಯ ವಲಸೆ ಕಾರ್ಮಿಕರು ಕೃಷಿ ಕೆಲಸಗಳಲ್ಲಿ ಅದರಲ್ಲೂ ಅಡಿಕೆ ಕೊಯ್ಲು ಮತ್ತು ತೋಟದ ಕಠಿಣ ಮಣ್ಣಿನ ಕೆಲಸಗಳಲ್ಲಿ ಅತ್ಯಂತ ನುರಿತವರಾಗಿದ್ದರು ಎಂದು ಅವರು ಮುಕ್ತವಾಗಿ ಶ್ಲಾಘಿಸಿದ್ದಾರೆ.
ಕರಾವಳಿ ಜನರ 'ಶ್ರಮ ಸಂಸ್ಕೃತಿ' ಮತ್ತು 'ಸ್ವಾವಲಂಬನೆ'
ಮಂಜಪ್ಪನವರು ತಮ್ಮ ಬರಹಗಳಲ್ಲಿ ಕರಾವಳಿಯ ಜನರ ಕಷ್ಟಸಹಿಷ್ಣುತೆಯನ್ನು ಪ್ರಮುಖವಾಗಿ ಹೈಲೈಟ್ ಮಾಡಿದ್ದಾರೆ.
ಮಲೆನಾಡಿನ ಕೆಲವು ಜಮೀನ್ದಾರರಲ್ಲಿ ಇದ್ದ ಜಡತ್ವ ಅಥವಾ ಸೋಮಾರಿತನಕ್ಕೆ ಪ್ರತಿಯಾಗಿ ಕರಾವಳಿಯಿಂದ ಖಾಲಿ ಕೈಯಲ್ಲಿ ವಲಸೆ ಬಂದ ಜನರು ಕೇವಲ ತಮ್ಮ ದೈಹಿಕ ಶ್ರಮ ಮತ್ತು ಶಿಸ್ತಿನಿಂದ ಹೇಗೆ ಬದುಕು ಕಟ್ಟಿಕೊಂಡರು ಎಂಬುದನ್ನು ಅವರು ದಾಖಲಿಸಿದ್ದಾರೆ.
ಸಣ್ಣ ಕೂಲಿಯಾಳುಗಳಾಗಿ ಬಂದವರು ನಂತರದ ದಿನಗಳಲ್ಲಿ ತಾವೇ ಸಣ್ಣ ಪುಟ್ಟ ಜಮೀನುಗಳನ್ನು ಖರೀದಿಸಿ, ಕಷ್ಟಪಟ್ಟು ಅತಿ ಹೆಚ್ಚು ಇಳುವರಿ ತೆಗೆಯುವ ಯಶಸ್ವಿ ರೈತರಾಗಿ ಬದಲಾದದ್ದನ್ನು ಅವರು ಗೌರವದಿಂದ ನೋಡಿದ್ದಾರೆ.
ಕಡಿದಾಳು ಮಂಜಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮತ್ತು ಕಂದಾಯ ಸಚಿವರಾಗಿದ್ದಾಗ ಗೇಣಿದಾರರ ಪರವಾಗಿ ಮಹತ್ವದ ಕಾನೂನುಗಳನ್ನು ತಂದವರು.
ಕರಾವಳಿಯಿಂದ ವಲಸೆ ಬಂದು ಮಲೆನಾಡಿನ ತೋಟಗಳಲ್ಲಿ ಗೇಣಿದಾರರಾಗಿ ದುಡಿಯುತ್ತಿದ್ದವರ ಶೋಷಣೆಯನ್ನು ಅವರು ಕಣ್ಣಾರೆ ಕಂಡಿದ್ದರು.
ಜಮೀನ್ದಾರರು ಕರಾವಳಿಯ ಮುಗ್ಧ ಕಾರ್ಮಿಕರನ್ನು ಕಡಿಮೆ ಕೂಲಿ ನೀಡಿ ಹೇಗೆ ಶೋಷಿಸುತ್ತಿದ್ದರು ಮತ್ತು ಮಲೇರಿಯಾದಂತಹ ಕಾಯಿಲೆಗಳಿಗೆ ತುತ್ತಾದಾಗ ಅವರನ್ನು ಹೇಗೆ ನಿರ್ಲಕ್ಷಿಸುತ್ತಿದ್ದರು ಎಂಬುದನ್ನು ತಮ್ಮ ಕಾದಂಬರಿಗಳಲ್ಲಿ ಕಟುವಾದ ವಾಸ್ತವದೊಂದಿಗೆ ಚಿತ್ರಿಸಿದ್ದಾರೆ.
ಒಕ್ಕಲೆಬ್ಬಿಸುವಿಕೆ ಭೀತಿಯಲ್ಲಿದ್ದ ವಲಸೆ ಕಾರ್ಮಿಕರಿಗೆ ಮತ್ತು ಗೇಣಿದಾರರಿಗೆ ಭೂಮಿಯ ಹಕ್ಕು ಸಿಗಬೇಕೆಂಬುದು ಮಂಜಪ್ಪನವರ ರಾಜಕೀಯ ಮತ್ತು ಸಾಹಿತ್ಯಿಕ ಹೋರಾಟದ ಮುಖ್ಯ ಆಶಯವಾಗಿತ್ತು.
ಕರಾವಳಿ ವರ್ತಕರ ಚತುರತೆ
ಅವರ ಕೃತಿಗಳಲ್ಲಿ ಕರಾವಳಿಯಿಂದ ಬರುತ್ತಿದ್ದ ಬ್ಯಾರಿ ವರ್ತಕರು ಮತ್ತು ಕೊಂಕಣಿ ವ್ಯಾಪಾರಿಗಳ ಉಲ್ಲೇಖಗಳೂ ಇವೆ.
ಮಲೆನಾಡಿನ ಕಾಡಿನ ಹಳ್ಳಿಗಳಿಗೆ ಅತ್ಯಗತ್ಯ ವಸ್ತುಗಳನ್ನು ಪೂರೈಸುವಲ್ಲಿ ಮತ್ತು ಇಲ್ಲಿನ ಬೆಳೆಗಳನ್ನು ಹೊರಗಿನ ಮಾರುಕಟ್ಟೆಗೆ ತಲುಪಿಸುವಲ್ಲಿ ಈ ವಲಸೆ ವರ್ತಕರ ಚಾಣಾಕ್ಷತನ ಮತ್ತು ಕೊಡುಗೆಯನ್ನು ಅವರು ಗುರುತಿಸಿದ್ದಾರೆ.
ಕುವೆಂಪು ಅವರು ಕರಾವಳಿ ವಲಸಿಗರನ್ನು 'ಕಾವ್ಯಾತ್ಮಕ ಮತ್ತು ಸಾಂಸ್ಕೃತಿಕ' ನೆಲೆಯಲ್ಲಿ ಚಿತ್ರಿಸಿದರೆ, ಕಡಿದಾಳು ಮಂಜಪ್ಪನವರು ಅವರನ್ನು ಮಲೆನಾಡನ್ನು ಆರ್ಥಿಕವಾಗಿ ಬೆಳೆಸಿದ 'ಶ್ರಮಜೀವಿಗಳು' ಮತ್ತು ಸಾಮಾಜಿಕ ನ್ಯಾಯ ಸಿಗಬೇಕಾದ 'ಹಕ್ಕುಳ್ಳ ಮನುಷ್ಯರು' ಎಂಬ ರಾಜಕೀಯ-ಆರ್ಥಿಕ ದೃಷ್ಟಿಕೋನದಿಂದ ನೋಡಿದ್ದಾರೆ.
#kadidalumanjappa #chiefminister #coastal
#karavali #migration #seasonalmigration
#westernghats
Comments
Post a Comment