ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ...
#ಭಾಗ_1.
#ಯಾಕೆ_ಈ_ರೀತಿ_ವಲಸೆ_ಬಂದರು?....
ಎಷ್ಟನೇ ಇಸವಿಯಿಂದ ಇದು ಪ್ರಾರಂಭವಾಯಿತು?...
ಆ ಕಾಲದ ಪ್ರಯಾಣ ಹೇಗಿತ್ತು?...
ವಲಸೆ ಬಂದವರ ಜೀವನ ಶೈಲಿ?...
ಗೆಳೆಯರಾದ ತೀರ್ಥಹಳ್ಳಿ ತಾಲ್ಲೂಕಿನ #ಕಿರಣ್_ಬೀಸು ಕರಾವಳಿ ಭಾಗದ ಜನರ ವಲಸೆ ಬಗ್ಗೆ ವಿವರವಾದ ಲೇಖನ ಬರೆಯಲು ಹೇಳಿದ್ದು ಈ ಲೇಖನ ಬರೆಯಲು ಪ್ರೇರಣೆ ಆಯಿತು, ಈ ಲೇಖನ ದೀರ್ಘವಾಗಿರುವುದರಿಂದ ಕೆಲವು ಭಾಗಗಳಲ್ಲಿ ಪ್ರಕಟಿಸುತ್ತೇನೆ.
ಕರಾವಳಿ ಜನರ ವಲಸೆಯು ಪ್ರಮುಖವಾಗಿ ಹವಾಮಾನ ವೈಪರೀತ್ಯಗಳು, ಉದ್ಯೋಗಾವಕಾಶಗಳ ಕೊರತೆ ಮತ್ತು ನಗರೀಕರಣದಿಂದ ಉಂಟಾಗುತ್ತಿತ್ತು.
ಸಾವಿರಾರು ಜನ ಈಗ ಘಟ್ಟ ವಾಸಿಗಳಾಗಿದ್ದಾರೆ ಅವರಿಗೆ ಅವರ ಕುಟುಂಬಗಳು ವಲಸೆ ಬಂದ ಕಥೆ ಮರೆತು ಹೋಗಿರಬಹುದು.
#ಘಟ್ಟಕ್ಕೆ_ವಲಸೆ_ಬರುತ್ತಿದ್ದ_ಕರಾವಳಿ_ಜನ ಎಂಬುದು ಕರ್ನಾಟಕದ ಸಾಮಾಜಿಕ ಮತ್ತು ಅರ್ಥಿಕ ಇತಿಹಾಸದಲ್ಲಿ ಅತ್ಯಂತ ಪ್ರಮುಖ ಹಾಗೂ ಆಸಕ್ತಿದಾಯಕ ಅದ್ಯಾಯವಾಗಿದೆ.
ಈ ಕರಾವಳಿ ಜನರ ವಲಸೆ ಬಗ್ಗೆ ಶಿವರಾಮ ಕಾರಂತರು ತಮ್ಮ ಕಾದಂಬರಿಯಲ್ಲಿ ದಾಖಲಿಸಿದ್ದಾರೆ ಅದು ಸಿನಿಮಾ ಕೂಡ ಆಗಿ ಪ್ರಸಿದ್ಧಿ ಪಡೆದಿತ್ತು.
ಶಿವರಾಮ ಕಾರಂತರ ಪ್ರಸಿದ್ಧ ಕಾದಂಬರಿ #ಚೋಮನದುಡಿಯಲ್ಲಿ ಕರಾವಳಿ ಭಾಗದ ವಲಸೆಯ ಚಿತ್ರಣವು ಕೇವಲ ಭೌಗೋಳಿಕ ಸ್ಥಳಾಂತರವಾಗಿರದೆ ಅದು ಅಂದಿನ ಕಾಲದ ಸಾಮಾಜಿಕ, ಆರ್ಥಿಕ ಮತ್ತು ಜಾತಿಯ ವ್ಯವಸ್ಥೆಯ ಕ್ರೂರ ಮುಖವನ್ನು ಅನಾವರಣಗೊಳಿಸುತ್ತದೆ.
ಕರಾವಳಿ ಕರ್ನಾಟಕದ ಮುಖ್ಯವಾಗಿ ದಕ್ಷಿಣ ಕನ್ನಡ ಜಿಲ್ಲೆಯ ಹಿನ್ನೆಲೆಯಲ್ಲಿ ನಡೆಯುವ ಈ ಕಾದಂಬರಿಯಲ್ಲಿ ವಲಸೆಯು ಹೇಗೆ ಅನಿವಾರ್ಯವಾಗಿತ್ತು ಮತ್ತು ಅದರ ಪರಿಣಾಮಗಳೇನು ಎಂಬುದನ್ನು ಅರ್ಥಮಾಡಿಕೊಳ್ಳಬಹುದು.
ಚೋಮ ಮತ್ತು ಆತನ ಕುಟುಂಬದವರು ಅಸ್ಪೃಶ್ಯ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಅವರಿಗೆ ಸ್ವಂತ ಭೂಮಿ ಹೊಂದುವ ಹಕ್ಕಿರುವುದಿಲ್ಲ.
ಸ್ಥಳೀಯ ಜಮೀನ್ದಾರ ಶಂಕರಪ್ಪನವರ ಮನೆಯಲ್ಲಿ ಸಾಲದ ಸುಳಿಗೆ ಸಿಲುಕಿ ಜೀತದಾಳಾಗಿ ದುಡಿಯುವ ಚೋಮನಿಗೆ ತನ್ನ ಕುಟುಂಬವನ್ನು ಸಲಹುವುದು ಕಷ್ಟವಾಗುತ್ತದೆ.
ಈ ಬಡತನ ಮತ್ತು ಸಾಲದ ಬಾಧೆಯಿಂದ ತಪ್ಪಿಸಿಕೊಳ್ಳಲು ಕರಾವಳಿಯ ಜನರು ಎದುರಿಸುತ್ತಿದ್ದ ಏಕೈಕ ದಾರಿ ಎಂದರೆ ಘಟ್ಟದ ಮೇಲಿನ ಮೂಡಿಗೆರೆ, ಚಿಕ್ಕಮಗಳೂರು, ತೀರ್ಥಹಳ್ಳಿ, ಹೊಸನಗರ ಮತ್ತು ಸಾಗರ ಭಾಗದ ಕಾಫಿ/ ಅಡಿಕೆತೋಟಗಳಿಗೆ ವಲಸೆ ಹೋಗುವುದು.
ತೋಟಗಳ ಮಾಲೀಕರು ಅಥವಾ ಅವರ ಏಜೆಂಟರು /ಮೇಸ್ತ್ರಿಗಳು ಕರಾವಳಿಯ ಬಡ ದಲಿತರಿಗೆ ಮುಂಗಡ ಹಣದ ಅಡ್ವಾನ್ಸ್ ಆಮಿಷ ಒಡ್ಡುತ್ತಿದ್ದರು.
ಚೋಮನ ಮಕ್ಕಳಿಬ್ಬರಾದ ಚನಿಯ ಮತ್ತು ಗುರುವು ತಂದೆಯ ಸಾಲವನ್ನು ತೀರಿಸಲು ಮತ್ತು ನಾಲ್ಕು ಕಾಸು ಸಂಪಾದಿಸಲು ಘಟ್ಟದ ಮೇಲಿನ ಕಾಫಿ ತೋಟಕ್ಕೆ ವಲಸೆ ಹೋಗುತ್ತಾರೆ ಆದರೆ ಅಲ್ಲಿಯೂ ಅವರಿಗೆ ಸಿಗುವುದು ನೆಮ್ಮದಿಯ ಜೀವನವಲ್ಲ ಬದಲಿಗೆ ಮತ್ತೊಂದು ಹಂತದ ತೀವ್ರ ಶೋಷಣೆ.
ಕರಾವಳಿಯ ಹವಾಮಾನಕ್ಕೆ ಒಗ್ಗಿಕೊಂಡ ಜನರಿಗೆ ಘಟ್ಟದ ಮೇಲಿನ ಮಲೆನಾಡಿನ ಚಳಿ ಮತ್ತು ಮಳೆ ತಡೆದುಕೊಳ್ಳುವುದು ಕಷ್ಟವಾಗುತ್ತಿತ್ತು.
ಕಾದಂಬರಿಯಲ್ಲಿ ವಲಸೆ ಹೋದ ಕರಾವಳಿಯ ಕಾರ್ಮಿಕರು ಎದುರಿಸುವ ಅತಿ ದೊಡ್ಡ ಶತ್ರು 'ಮಲೇರಿಯಾ' ಕಾಡು ಜ್ವರ, ಕಾಫಿ ತೋಟದ ಅತಿಯಾದ ದುಡಿಮೆ, ಪೌಷ್ಟಿಕಾಂಶದ ಕೊರತೆ ಮತ್ತು ಸೂಕ್ತ ವೈದ್ಯಕೀಯ ಸೌಲಭ್ಯವಿಲ್ಲದೆ ಚೋಮನ ಹಿರಿಯ ಮಗ ಚನಿಯ ಜ್ವರದಿಂದ ಅಲ್ಲೇ ಸಾವನ್ನಪ್ಪುತ್ತಾನೆ, ವಲಸೆಯು ಬಡವರ ಪಾಲಿಗೆ ಜೀವವನ್ನೇ ಬಲಿ ತೆಗೆದುಕೊಳ್ಳುವ ದುರಂತವಾಗಿ ಪರಿಣಮಿಸುತ್ತದೆ.
ವಲಸೆಯು ಕೇವಲ ಪುರುಷರನ್ನಷ್ಟೇ ಅಲ್ಲದೆ ಹೆಣ್ಣುಮಕ್ಕಳನ್ನೂ ಶೋಷಣೆಗೆ ಒಳಪಡಿಸುತ್ತದೆ, ಚೋಮನ ಮಗಳು ಬೆಳ್ಳಿ ಕೂಡ ತೋಟದ ಕೆಲಸಕ್ಕೆ ಹೋಗಬೇಕಾದ ಪರಿಸ್ಥಿತಿ ಬರುತ್ತದೆ ಅಲ್ಲಿನ ಮುಸ್ಲಿಂ ಮೇಸ್ತ್ರಿ ಹಣದ ಮತ್ತು ಕೆಲಸದ ಆಮಿಷವೊಡ್ಡಿ ಆಕೆಯನ್ನು ದೈಹಿಕವಾಗಿ ಬಳಸಿಕೊಳ್ಳಲು ಯತ್ನಿಸುತ್ತಾನೆ ಇದು ಕರಾವಳಿಯ ವಲಸೆ ಕಾರ್ಮಿಕ ಹೆಣ್ಣುಮಕ್ಕಳು ಎದುರಿಸುತ್ತಿದ್ದ ಲೈಂಗಿಕ ಶೋಷಣೆಯ ಕಹಿಸತ್ಯಕ್ಕೆ ಕನ್ನಡಿಯಾಗಿದೆ.
ವಲಸೆ ಹೋದ ಜಾಗದಲ್ಲಿ ಕರಾವಳಿಯ ದಲಿತರು ತಮ್ಮ ಸಾಮಾಜಿಕ ಗುರುತನ್ನು ಕಳೆದುಕೊಳ್ಳುವ ಭೀತಿಯಲ್ಲಿರುತ್ತಾರೆ, ಸ್ಥಳೀಯವಾಗಿ ಜಾತಿ ಪದ್ಧತಿಯಿಂದ ನೊಂದ ಚೋಮನ ಇನ್ನೊಬ್ಬ ಮಗ ಗುರುವ ಕಾಫಿ ತೋಟದಲ್ಲಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಹೊಂದುತ್ತಾನೆ ಅಂದರೆ ವಲಸೆಯು ಕರಾವಳಿಯ ಜನರ ಸಾಂಸ್ಕೃತಿಕ ಮತ್ತು ಧಾರ್ಮಿಕ ಚೌಕಟ್ಟನ್ನು ಹೇಗೆ ಬದಲಾಯಿಸಿತು ಎಂಬುದಕ್ಕೆ ಇದು ಸಾಕ್ಷಿಯಾಗಿದೆ.
#ಚೋಮನ_ದುಡಿ ಯಲ್ಲಿ ಕರಾವಳಿ ಭಾಗದ ವಲಸೆಯು ಕೇವಲ ಒಂದು ಪ್ರಾದೇಶಿಕ ಬದಲಾವಣೆಯಲ್ಲ ಅದು ಹಸಿವು, ಸಾಲ ಮತ್ತು ಜಾತಿ ಪದ್ಧತಿಯಿಂದ ಜರ್ಜರಿತರಾದ ಕರಾವಳಿಯ ಕೆಳವರ್ಗದ ಜನರಿಗೆ ಬದುಕಿನ ಅನಿವಾರ್ಯ ಅನ್ವೇಷಣೆಯಾಗಿತ್ತು.
ಆದರೆ ಹೋದ ಕಡೆಯೂ ಶೋಷಣೆ, ರೋಗ ಮತ್ತು ಸಾವು ಅವರನ್ನು ಬೆನ್ನಟ್ಟುತ್ತವೆ ಎಂಬುದನ್ನು ಕಾರಂತರು ಅತ್ಯಂತ ಮಾರ್ಮಿಕವಾಗಿ ಚಿತ್ರಿಸಿದ್ದಾರೆ.
ವಾಸ್ತವವಾಗಿ ಇದು ಕರಾವಳಿಯ ಅಸ್ಪಶ್ಯರು ಮಾತ್ರರಲ್ಲ ಇತರೆ ಹಿಂದುಳಿದ ವರ್ಗಗಳಿಗೂ ಅನ್ವಯಿಸುತ್ತದೆ ಈ ರೀತಿ ವಲಸೆ ಬಂದವರಲ್ಲಿ ಪೂಜಾರಿ - ಬಂಟರು - ಕುಲಾಲರು - ಮೊಗೇರರು - ವಿಶ್ವಕರ್ಮದವರು ಸಾಕಷ್ಟು ಸಂಖ್ಯೆಯಲ್ಲಿದ್ದರು.
#shivaramakaranth #chomanadudi #novels
#cinema #GirishKasaravalli #coastal
#karavali #migration
Comments
Post a Comment