Skip to main content

Blog 3574. ಮಡಿವಾಳನಕಟ್ಟೆ ಕೆಂಪಣ್ಣನ ಕೆರೆ

#ಒಂದು_ಕೆರೆಯ_ಕಥೆ

#ಮಡಿವಾಳನಕಟ್ಟೆ_ಕೆಂಪಣ್ಣನ_ಕೆರೆ

#ಸಾಗರ_ತಾಲೂಕಿನ_ಬರೂರು_ಗ್ರಾಮಪಂಚಾಯತಿಯ_ಕುಂದೂರು_ಸಮೀಪ

#ಶರಾವತಿ_ಮುಳುಗಡೆ_ಸಂತ್ರಸ್ಥ_ಕೆಂಪಣ್ಣನ_ಜೀವಮಾನದ_ಬೇಡಿಕೆ_ಈ_ಕೆರೆ_ನಿರ್ಮಾಣ

#ನಾನು_ಆನಂದಪುರಂ_ಜಿಲ್ಲಾ_ಪಂಚಾಯಿತಿ_ಸದಸ್ಯನಾಗಿ_ಈಡೇರಿಸಿದ_ಸ0ತೃಪ್ತಿ

#ಕೆಂಪಣ್ಣ_ಈ_ಕೆರೆಗೆ_ಅರುಣಪ್ಪನ_ಕೆರೆ_ಅಂತ_ಕರೆದರೆ

#ನಾನು_ಮಾತ್ರ_ಕೆಂಪಣ್ಣನ_ಕೆರೆ_ಅಂತಾನೆ_ಕರೆದೆ_ಅದೇ_ಶಾಶ್ವತವಾಗಿದೆ


#Madivalanakattekempannanakere
#tankbund #kempanna #madivalanakatte #Kunduru #korlikoppa #baruru #sagar #shivamogga #malenadu 

   ನನ್ನ ಮಾಧ್ಯಮಿಕ ಶಾಲಾ ಸಹಪಾಟಿ #ಹೊಸಕೊಪ್ಪದ_ನಾಗಪ್ಪ _ಮಾಸ್ಟರ್ ಕಳಿಸಿದ ವಿಡಿಯೋ ಮತ್ತು ಪೋಟೋಗಳು 30 ವರ್ಷದ ಹಿಂದಿನ ಕಥೆ ನೆನಪಿಸಿತು.

  #ಮಡಿವಾಳನಕಟ್ಟ_ಕೆಂಪಣ್ಣ ನನಗೆ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು #ಅರುಣಪ್ಪ ಆದ್ದರಿಂದ ಈ ಕೆರೆಗೆ ಅವರು ಅರುಣಪ್ಪನ_ಕೆರೆ ಅಂತಲೇ  ಕರೆದರು.

  ಆದರೆ ನಾನು ಒಪ್ಪಲಿಲ್ಲ ಈ ಕೆರೆಯ ಜಲಮೂಲ ಕಂಡು ಹಿಡಿದು, ಕೆರೆಯ ಬೇಡಿಕೆ ಇಟ್ಟುಕೊಂಡು ಇಷ್ಟು ವರ್ಷ ಕಾಯುತ್ತಿದ್ದ ಕೆಂಪಣ್ಣರಿಂದ ಈ ಕೆರೆಗೆ #ಕೆಂಪಣ್ಣನ_ಕೆರೆ ಎಂದೇ ಊರವರು ಕರೆಯ ಬೇಕೆಂದು ವಿನಂತಿಸಿದ್ದರಿಂದ ಇದು ಕೆಂಪಣ್ಣನ ಕೆರೆ ಅಂತಲೇ ಆಯಿತು.

   1995ರಲ್ಲಿ ನಾನು ಆನಂದಪುರಂ ಜಿಲಾ ಪಂಚಾಯಿತಿ ಸದಸ್ಯ ಸ್ಥಾನಕ್ಕೆ ಕಾಂಗ್ರೇಸ್ ಪಕ್ಷದ ಅಭ್ಯರ್ಥಿ ಆಗಿದ್ದೆ ಆಗ ಆನಂದಪುರಂ,ಯಡೇಹಳ್ಳಿ, ಆಚಾಪುರ, ಹೊಸೂರು, ಗೌತಮಪುರ, ಹಿರೇಬಿಲಗುಂಜಿ, ತ್ಯಾಗರ್ತಿ ಮತ್ತು ಬರೂರು ಗ್ರಾಮ ಪಂಚಾಯಿತಿಗಳು ಸೇರಿತ್ತು.

  ತ್ಯಾಗರ್ತಿ, ಹಿರೇಬಿಲಗುಂಜಿ ಮತ್ತು ಬರೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಚುನಾವಣಾ ಪ್ರಚಾರ ಸ್ಥಳೀಯರಾದ #ಕೃಷ್ಣಪ್ಪ, #ಗಣಪತಿ, #ದಾವೀದ್, #ಮೈಲಾರಿಕೊಪ್ಪದ_ಹೊಳೆಯಪ್ಪ,,#ನೀಚಡಿವೆಂಕಟೇಶ್_ಹೆಗಡೆ, #ಕೊಪ್ಪಕುಮಾರ್_ಗೌಡರು, #ಬೆಳಂದೂರುಲಿಂಗಪ್ಪ, #ಬರೂರುಸದಾಶಿವಪ್ಪಗೌಡರು ಜವಾಬ್ದಾರಿಯಿಂದ ನಡೆಸಿದ್ದರು.

  ಅಂತಹ ಪ್ರಚಾರದ ಒಂದು ದಿನ ತ್ಯಾಗರ್ತಿ ಸಂತೆ ಇತ್ತು ಅವತ್ತು ನಮ್ಮ ನಾಯಕರಾದ ತ್ಯಾಗರ್ತಿ ಕೃಷ್ಣಪ್ಪ "ಅಲ್ಲಿ ನೋಡಿ ಕೆಂಪು ಶಾಲು ಹಾಕೊಂಡು ಬರತಾ ಇದಾರಲ್ಲ... ಅವರು ಮಡಿವಾಳನ ಕಟ್ಟೆಯ ಕೆಂಪಣ್ಣ ಅಂತ ಅವರ ಮನೆಯಲ್ಲಿ 50- 60 ಓಟು ಇದೆ ಆದರೆ ಅವರ ಮನೆಗೆ ರಸ್ತೆ ಗಿಸ್ತೆ ಇಲ್ಲ.... ಚುನಾವಣೆ ಮುಗಿದ ಮೇಲೆ ಹೋದರಾಯಿತು... ಇವರದ್ದೊಂದು ಬೇಡಿಕೆ ಇದೆ ಅದೇನೆಂದರೆ ಹೊಸ ಕೆರೆ ಒಂದು ಮಾಡಿಕೊಡಬೇಕು ಅನ್ನೋದು... ನೀವು ಮಾಡಿ ಕೊಡ್ತೀನಿ ಅಂದು ಬಿಡಿ ಅಷ್ಟೆ... ಆದರೆ ಅದೆಲ್ಲ 30-40 ವರ್ಷದಿಂದ ಯಾರಿಂದಲೂ ಸಾಧ್ಯವಾಗಿಲ್ಲ ಅನ್ನುವಾಗಲೇ ಕೆಂಪಣ್ಣ ನಮ್ಮ ಸಮೀಪ ಬಂದಿದ್ದರು.

   ಪರಸ್ಪರ ಪರಿಚಯ ಕೃಷ್ಣಪ್ಪ ಮಾಡಿಸಿದರು ಆಗ ಕೆಂಪಣ್ಣ ಇಟ್ಟ ಬೇಡಿಕೆ "ಏನಾದರೂ ಮಾಡಿ ನಮಗೊಂದು ಕೆರೆ ಮಾಡಿ ಕೊಡಿ ಒಳ್ಳೇ ಜಲದ ಕೋವು ಇದೆ, ವರ್ಷ ಪೂರ್ತಿ ನೀರು ಇರುತ್ತೆ... ಅಲ್ಲಿ ಕೆರೆ ಆದರೆ ಕೆಳಗೆ ನೂರಾರು ಎಕರೆ ಅಡಿಕೆ ತೋಟ ಮಾಡಬಹುದು" ಅಂತ ಆಸೆ ಕಣ್ಣಿಂದ ಆ ವಯೋ ವೃದ್ಧರು ಹೇಳುವಾಗ ನನಗೆ ಅವರಿಗೆ ಸುಳ್ಳು ಭರವಸೆ ನೀಡಿ ಅವರ ಕುಟುಂಬದ ಮತ ಪಡೆಯುವುದು ಇಷ್ಟ ಅನ್ನಿಸಲಿಲ್ಲ.

  ಆದರೂ ಚುನಾವಣೆ ಎಂಬುದು ಸ್ಟರ್ದೆಯಲ್ಲವೇ ಆದ್ದರಿಂದ ಅವರಿಗೆ ಒಂದು ಅಶ್ವಾಸನೆ ನೀಡಿದೆ " ಕೆಂಪಣ್ಣ ನೀವೆಲ್ಲ ಮತ ನೀಡಿ ಗೆಲ್ಲಿಸಿದರೆ ನಾನು ನಿಮ್ಮ ಊರಿಗೇ ಬಂದು ಸ್ಥಳ ನೋಡಿ ನಿಮ್ಮ ಬಹುವರ್ಷದ ಬಯಕೆ ಆಗಿರುವ ಕೆರೆ ಮಾಡಿಸಿ ಕೊಡುತ್ತೇನೆ" ಅಂದೆ.

   ನನ್ನ ಕೈ ಗಟ್ಟಿಯಾಗಿ ಹಿಡಿದು ನನ್ನ ಕಣ್ಣನ್ನೇ ದಿಟ್ಟಿಸಿದ ಮಡಿವಾಳನ ಕಟ್ಟೆ ಕೆಂಪಣ್ಣ "ನಾನು ಮಾತು ತಪ್ಪುವುದಿಲ್ಲ ಆದರೆ ಗೆದ್ದ ಮೇಲೆ ನೀವು ಮಾತ್ರ ಮಾತು ತಪ್ಪಬೇಡಿ ಇಲ್ಲಿ ತನಕ ಎಲ್ಲಾ ಚುನಾವಣೆಯಲ್ಲೂ ಹೀಗೆ ಹೇಳಿ ಗೆದ್ದೋರು ಯಾರೂ ಆಮೇಲೆ ನಮ್ಮ ಊರಿಗೆ ಬರಲಿಲ್ಲ" ... ಅಂದರು.
  
   ಅವರ ಕಣ್ಣ ನೋಟದಲ್ಲಿ ಅರ್ದ ನಂಬಿಕೆ ಮಾತ್ರ ಇತ್ತು.

     ಚುನಾವಣೆಯಲ್ಲಿ ಗೆದ್ದ ನಂತರ ಮೊದಲಿಗೆ ಕುಂದೂರಿಗೆ ಹೋಗಿ ಅಲ್ಲಿಂದ ನಡೆದುಕೊಂಡು ಕಲ್ವಡ್ಡು ಹಳ್ಳದಾಟಿ ಅಲ್ಲಿನ ಗ್ರಾಮ ಪಂಚಾಯಿತಿ ಸದಸ್ಯ #ಸೀಮೆಎಣ್ಣೆ_ಬಸವರಾಜಪ್ಪರ ಮನೆಗೆ ಹೋಗಿ ಅವರ ಜೊತಗೆ ಮಡಿವಾಳನ ಕಟ್ಟೆ ಕೆಂಪಣ್ಣನ ಮನೆ ತಲುಪಿದ್ದೆ.

   ಶಿಕಾರಿಪುರ ಸಾಗರ ತಾಲೂಕಿನ ಅಂಚಿನ ಅರಣ್ಯ ಭೂಮಿಯ ಕಪ್ಪು ಎರೆ ಮಣ್ಣಿನ ಭೂಮಿಯಲ್ಲಿ ಅನೇಕ ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಈ ಭಾಗದ ಬಹುತೇಕರು ಬಡವರು.

   ಅವರಿಗೆ ಭೂಮಿ ಹಕ್ಕು ಪತ್ರ ಸಿಕ್ಕರಲಿಲ್ಲ, ರಸ್ತೆ ಸಂಪರ್ಕ ಇಲ್ಲ, ಶಾಲೆ ಇಲ್ಲ, ವಿದ್ಯುತ್ ಸಂಪರ್ಕ ಕೂಡ ಇರಲಿಲ್ಲ.

  ಕೆಂಪಣ್ಣ #ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ಕಟ್ಟಿದಾಗ ಮುಳುಗಡೆ ಆದ ಹಿನ್ನೀರಿನ ಪ್ರದೇಶದವರು ಅಲ್ಲಿ ಇವರಿಗೆ ಸ್ವಂತ ಖಾತೆ ಜಮೀನು ಇರಲಿಲ್ಲ ಆದ್ದರಿಂದ ಗೇಣಿ ಜಮೀನು ಮತ್ತು ಖಾತೆ ಇಲ್ಲದ ಬಗರ್ ಹುಕುಂ ಸಾಗುವಳಿದಾರರಾಗಿದ್ದರು.

   ಮುಳುಗಡೆ ಆದಾಗ ಕೆಂಪಣ್ಣನಿಗೆ ಯಾವುದೇ ಪರಿಹಾರ ಸಿಗಲಿಲ್ಲ ಈ ರೀತಿ ಅತಂತ್ರ ಆದ ಕೆಂಪಣ್ಣ ಈ ಅರಣ್ಯದ ಮೂಲೆ ಸೇರಿದ್ದು ಇನ್ನೊಂದು ಕಥೆ.

   ಕೆಂಪಣ್ಣ ಅವರ ಜೋಳದ ಬೆಳೆ ಬೆಳೆಯುವ ಜಮೀನಿನ ಮೇಲಿನ ಎರಡು ಗುಡ್ಡದ ನಡುವಿನ ಕೋವು ತೋರಿಸಿದರು.

   ಅದು ಸಮೃದ್ದ ಜಲ ಮೂಲದ ವರ್ಷ ಪೂರ್ತಿ ನೀರು ಹರಿಯುವ ಜಾಗ ಆಗಿತ್ತು.

   ಅಲ್ಲಿ ಒಂದು ದಂಡೆ ನಿರ್ಮಿಸಿ ಅದಕ್ಕೆ ತೂಬು ಹಾಕಿದರೆ ಅದರ ಕೆಳಗಿನ ಎಲ್ಲಾ ಭೂಮಿ ಅಡಿಕೆ ತೋಟವೇ ಮಾಡುವಂತಿದ್ದ ಪ್ರದೇಶ ಎಂಬುದು ಅರಿತೇ ಶರಾವತಿ ಮುಳುಗಡೆ ಸಂತ್ರಸ್ಥರಾದ ಕೆಂಪಣ್ಣ ಅಲ್ಲಿ ನೆಲೆನಿಂತರು.

  ಆದರೆ ಕೆರೆ ಆಗದಿದ್ದರಿಂದ ಜೋಳದ ಬೆಳೆಗೆ ಮಾತ್ರ ತೃಪ್ತಿ ಪಡೆಯುತ್ತಾರೆ.

    ಸುಮಾರು 50-60 ವರ್ಷದ ಕಾಲಮಾನದಲ್ಲಿ ಕೆಂಪಣ್ಣರಿಗೆ ಮಕ್ಕಳು ಮೊಮ್ಮಕ್ಕಳು ಮರಿ ಮಕ್ಕಳಾಗಿ ನೂರಾರು ಜನರ ದೊಡ್ಡ ಕುಟುಂಬ ಆದರೂ ಅವರ ಆಸೆಯ ಕೆರೆ ಆಗಲೇ ಇಲ್ಲ ಎಂಬ ನಿರಾಸೆ ಇತ್ತು.

   1995- 2000 ಅವದಿಯ ಜಿಲ್ಲಾ ಪಂಚಾಯತ್ ನಲ್ಲಿ ಅಂತಹ ಹೊಸ ಕೆರೆ ನಿರ್ಮಿಸುವ ಯಾವುದೇ ಯೋಜನೆ ಸಾಧ್ಯವಿರಲಿಲ್ಲ.

   ಆದರೆ ನಾನು ಛಲ ಬಿಡದ ವಿಕ್ರಮನಂತೆ ಅಂತೂ ಇಂತು ನನ್ನದೇ ಆದ ತಂತ್ರ ಬಳಸಿ ಕೆಂಪಣ್ಣನ ಕೆಲವು ವರ್ಷಗಳ ನಿರೀಕ್ಷೆಯ ಕೆರೆ ನಿಮಿ೯ಸಿಯೇ ಬಿಟ್ಟೆ.

  ವೃದ್ಧಾಪ್ಯದಲ್ಲಿಯೂ ಕೆಂಪಣ್ಣ ಹೆಸರಿಗೆ ತಕ್ಕ ಕೆಂಪು ಮುಖದಲ್ಲಿ ಮೂಡಿದ ಸಂತೃಪ್ತಿ ನೋಡಿ ನನಗೂ ಅಷ್ಟೇ ಖುಷಿ ನೆಮ್ಮದಿ ಉಂಟಾಗಿತ್ತು.

  ಅವರ ವೃದ್ಯಾಪ್ಯದಲ್ಲೂ ಸುಂದರಾಂಗರೆ ಆಗಿದ್ದ ಕೆಂಪಣ್ಣ ಬಹುಶಃ ಪ್ರಾಯದ ಕಾಲದಲ್ಲಿ ಇನ್ನೂ ಎಷ್ಟೋ ಸುಂದರರಾಗಿರ ಬೇಕು.

   ಕೆಂಪಣ್ಣ ನನಗೆ ಪ್ರೀತಿಯಿಂದ ಕರೆಯುತ್ತಿದ್ದ ಹೆಸರು #ಅರುಣಪ್ಪ ಆದ್ದರಿಂದ ಈ ಕೆರೆಗೆ ಅರುಣಪ್ಪನ ಕೆರೆ ಅಂತ ಅವರು ಕರೆದರು ಆದರೆ ನಾನು ಒಪ್ಪಲಿಲ್ಲ.

    ಕೆರೆಗೆ ಜಲಮೂಲ ಕಂಡು ಹಿಡಿದು ಕೆರೆಯ ಬೇಡಿಕೆ ಇಟ್ಟುಕೊಂಡು ಇಷ್ಟು ವರ್ಷ ಕಾಯುತ್ತಿದ್ದ ಕೆಂಪಣ್ಣರಿಂದ ಈ ಕೆರೆಗೆ #ಕೆಂಪಣ್ಣನ_ಕೆರೆ ಎಂದೇ ಊರವರು ಕರೆಯ ಬೇಕೆಂದು ವಿನಂತಿಸಿದ್ದರಿಂದ ಇದು ಕೆಂಪಣ್ಣನ ಕೆರೆ ಅಂತಲೇ ಆಯಿತು.

   ಸದಾ ಕೆಂಪಣ್ಣರ ಜೊತೆ ನಮ್ಮ ಊರಿಗೆ ನನ್ನ ಹುಡುಕಿಕೊಂಡು ಬರುತ್ತಿದ್ದ ಅವರ ಪುತ್ರ #ಮಂಜಪ್ಪ (ಒಂದು ಕಾಲು ವಿಕಲತೆಯಿಂದ ಸ್ವಲ್ಪ ಕುಂಟುತ್ತಿದ್ದರು) ಇಬ್ಬರೂ ಈಗಿಲ್ಲ.

   ಇವರ ಶ್ರಮದಿಂದ ಈ ಕೆರೆ ನೀರಿನಿಂದ ಅಡಿಕೆಯ ಸಮೃದ್ದ ಪಸಲು ಬರುವ ತೋಟ ಇವರ ವಂಶಸ್ಥರಿಗೆ ಬಂದಿದೆ.

   ಈ ಹಳ್ಳಿಗೆ ಹೊಸ ರಸ್ತೆ, ವಿದ್ಯುತ್ ಸಂಪರ್ಕ ಮತ್ತು ಪ್ರಾಥಮಿಕ ಶಾಲೆ ಮಾಡಿಸಿಕೊಟ್ಟಿದ್ದರಿಂದ ಈ ಭಾಗದ ಜನರು ನನಗೆ ಹೆಚ್ಚು ಆಪ್ತರಾದರು.

  ಕೆಂಪಣ್ಣ ವಯೋ ಸಹಜವಾಗಿ ಕಾಯಿಲೆ ಬಿದ್ದಾಗ ಚಿಕಿತ್ಸೆ ಪಡೆಯಲು ಒಪ್ಪಲೇ ಇಲ್ಲ ಮತ್ತು ಅವರ ಜೀವಮಾನದಲ್ಲೇ ಒಮ್ಮೆಯೂ ಇಂಜೆಕ್ಷನ್ ತೆಗೆದು ಕೊಂಡಿರಲಿಲ್ಲ.

   ಆದರೆ ನನ್ನ ಮಾತಿಗೆ ಇಂಜೆಕ್ಷನ್ ತೆಗೆದು ಕೊಳ್ಳಲು ಒಪ್ಪಿದರು.

 ಆದ್ದರಿಂದ ತ್ಯಾಗರ್ತಿ ಆಸ್ಟತ್ರೆಯ ಸಿಬ್ಬಂದಿ ಕಂಪೌಡರ್ #ಲಿಂಗರಾಜರನ್ನು ಕಳಿಸಿದ್ದೆ ಅವರು ಕೆಂಪಣ್ಣರಿಗೆ ಇಂಜೆಕ್ಷನ್ ನೀಡಿದ್ದರು.

   ಕೊನೆಯ ಕಾಲದಲ್ಲಿ ಉಸಿರೆಳೆಯುವಾಗಲೂ "ಅರುಣಪ್ಪನ ನೋಡ ಬೇಕು ಕರೆಯಿರಿ ಅಂತಿದ್ದ ನನ್ನ ಅಪ್ಪ"... ಅಂತ ಅವರ ಮಗ ಮಂಜಪ್ಪ ಕಣ್ಣೀರಲ್ಲಿ ಹೇಳುವಾಗ ನಾನು ಕಣ್ಣೀರಾಗಿದ್ದೆ.

  ಗೆಳೆಯ ನಾಗಪ್ಪ ಮಾಸ್ಟರ್ ಕಳಿಸಿದ ಪೋಟೋ ವಿಡಿಯೋ ನೋಡಿ ಮತ್ತೆ ಕಣ್ಣೀರಾಗಿ ಈ ನೆನಪು ದಾಖಲಿಸಿದ್ದೇನೆ.

   ನಾಗಪ್ಪ ಮಾಸ್ಟರ್ ಗೆ ಕೃತಜ್ಞತೆಗಳು ಈ ಸಂದರ್ಭದಲ್ಲಿ ಸಲ್ಲಿಸಲೇ ಬೇಕು.

   ಈ ಊರಿನವರು ಕರೆದುಕೊಂಡು ಬರಲು ಹೇಳುತ್ತಿದ್ದಾರೆ ಅಂತ ನಾಗಪ್ಪ ಪೋನಿನಲ್ಲಿ ತಿಳಿಸಿದರು ಅವರ ಪ್ರೀತಿಗೆ ಅಭಾರಿ ಆಗಿದ್ದೇನೆ.

   ಇಂತಹ ನಾಲ್ಕು ಹೊಸ ಕೆರೆ ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದಾಗ ನಿರ್ಮಿಸಿದ್ದು ನೆನಪಾಯಿತು.

 ಕೆಂಪಣ್ಣನ ಚಿತ್ರ ಮನಸ್ಸಿನಲ್ಲಿ ಹಸಿರಾಗೇ ಉಳಿದಿದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...