#ನನ್ನ_ಹೆಲ್ಮೆಟ್_ಅಭಿಯಾನ_ಯಶಸ್ಸು_ಸಾಧಿಸಲೇ_ಇಲ್ಲ
#ಬೈಕ್_ಜೊತೆ_ಹೆಲ್ಮೆಟ್_ನಿಮ್ಮ_ಮಕ್ಕಳಿಗೆ_ನಿಮ್ಮ_ಮನೆಯಲ್ಲೇ_ಕಡ್ಡಾಯ_ಮಾಡಿ.
#ಇವತ್ತಿನ_ಯುವ_ಜನಾಂಗ_ಹೆಲ್ಮೆಟ್_ದ್ವೇಷಿಗಳು_ಯಾಕೆ?
#ಇತ್ತೀಚಿಗೆ_ಮೋಟಾರ್_ಬೈಕ್_ಅಪಘಾತವಾದರೆ_ಸವಾರರು_ಬದುಕುಳಿಯುವುದಿಲ್ಲ
#ನೂತನ_ತಂತ್ರಜ್ಞಾನದ_ಹೆದ್ದಾರಿಗಳು_ಮತ್ತು_ಹೆಲ್ಮೆಟ್_ಧರಿಸದ_ಆದುನಿಕ_ಸವಾರರು.
#ಹೆಲ್ಮೆಟ್_ಕಡ್ಡಾಯ_ಕಾನೂನು_1976ರಲ್ಲಿ_ಗುಂಡೂರಾವ್_ಸರ್ಕಾರ_ಮಾಡಿತ್ತು
#ಹೆಲ್ಮೆಟ್_ನನ್ನ_ತಂದೆ_ಗೆಳೆಯ_ಯೋಮಕೇಶಪ್ಪಗೌಡರ_ಜೀವ_ಉಳಿಸಿತ್ತು
#ಕೊನೆ_ಗಳಿಗೆಯಲ್ಲಿ_ಅವರಿಗೆ_ಹೆಲ್ಮೆಟ್_ನೀಡುವ_ಪ್ರೇರಣೆಗೆ_ಕಾರಣ_ಗೊತ್ತಿಲ್ಲ.
#Helmet #bikes #riders #speed #highways #accidents #bikers
#Govtofindia
ಇತ್ತೀಚಿಗೆ ಮೋಟಾರ್ ಬೈಕ್ ಅಪಘಾತವಾದರೆ ಸವಾರರು ಬದುಕುಳಿಯುವುದಿಲ್ಲ ಕಾರಣ ಮಿತಿ ಮೀರಿದ ವೇಗವಾಗಿ ಚಲಿಸುವ ಬೈಕ್ ಗಳು ಅದಕ್ಕೆ ತಕ್ಕನಾದ ನೂತನ ತಂತ್ರಜ್ಞಾನದ ಹೆದ್ದಾರಿಗಳು ಮತ್ತು ಹೆಲ್ಮೆಟ್ ಧರಿಸದ ಆದುನಿಕ ಸವಾರರು.
ಈ ಕಾರಣದಿಂದಲೇ ನಾನು ಹೆಲ್ಮೆಟ್ ಖರೀದಿಸಿ ಕೆಲವರಿಗೆ ಹಂಚುವ ಅಭಿಯಾನ ಪ್ರಾರಂಬಿಸಿದೆ.
ಹೆಲ್ಮೆಟ್ ಧರಿಸದೇ ಬಿದ್ದು ಮುಖ ಒಡೆದುಕೊಂಡ ಹೊಸನಗರ ತಾಲ್ಲೂಕಿನ ಪತ್ರಕರ್ತ ಮಿತ್ರರಿಗೆ ಒಂದು ಬೆಲೆಬಾಳುವ ಹೆಲ್ಮೆಟ್ ಉಡುಗೊರೆ ನೀಡಿ ರಸ್ತೆ ಸುರಕ್ಷತೆ ಪಾಠ ಮಾಡಿದ್ದೆ ಆದರೆ ಅವರು ನನ್ನ ಕಛೇರಿಯಿಂದ ಹೆಲ್ಮೆಟ್ ಧರಿಸಿ ಅವರ ಮನೆಗೆ ಹೋದವರು ನಂತರ ಧರಿಸಲೇ ಇಲ್ಲ!?...
ಇನ್ನೊಬ್ಬ ಶಾಮಿಯಾನದ ಕಿರಿಯ ಗೆಳೆಯ ಆತನೂ ಬೈಕಿನಿಂದ ಬಿದ್ದು ಮುಖ ತಲೆ ಗಾಯ ಮಾಡಿಕೊಂಡಿದ್ದ ಅವನಿಗೂ ನೀಡಿದ ಹೆಲ್ಮೆಟ್ ಅಪಾತ್ರ ದಾನ ಆಯಿತು, ಒಂದು ದಿನ ವಿಚಾರಿಸಿದರೆ ಹೊಟ್ಟೆ ತುಂಬಾ ಹೆಂಡ ಕುಡಿದಿದ್ದ ಆತ ನನಗೇ ಪಾಠ ಮಾಡಿದ್ದ...
ನವಟೂರು ಮಂಜುನಾಥ ಆಚಾರ್ ಎಂಬುವವರು ನಮ್ಮ ಲಾಡ್ಜ್ ಕೆಲಸ 2021 ರ ತನಕ ಮಾಡುತ್ತಿದ್ದರು ಅವರಿಗೆ ನೀಡಿದ ನನ್ನ ಹೆಲ್ಮೆಟ್ ಅಭಿಯಾನ ಮಾತ್ರ ಯಶಸ್ಸು ಕಂಡಿದೆ ಇವತ್ತಿಗೂ ಅವರು ಹೆಲ್ಮೆಟ್ ಧರಿಸದೇ ಬೈಕ್ ಚಲಾಯಿಸುವುದಿಲ್ಲ.
ನಮ್ಮ ಸಂಸ್ಥೆಯವರೂ ಹೆಲ್ಮೆಟ್ ಧರಿಸದೇ ಬೈಕ್ ಸವಾರಿ ಮಾಡುತ್ತಾರೆ ಆದ್ದರಿಂದ ಸದ್ಯದಲ್ಲಿ ಬೈಕ್ ಮಾರಾಟದ ತೀರ್ಮಾನ ಮಾಡಿದ್ದೇನೆ.
ಬಹುತೇಕ ಬೈಕ್ ಸವಾರರು ಹೆಲ್ಮೆಟ್ ದರಿಸುವುದಿಲ್ಲ ಅವರು ಹೇಳುವುದು ನಾವೆಲ್ಲ ದೂರ ಪ್ರಯಾಣ ಮಾಡುವುದಿಲ್ಲ ಆದ್ದರಿಂದ ಹೆಲ್ಮೆಟ್ ಬೇಕಾಗಿಲ್ಲ.
ಇತ್ತೀಚಿಗೆ ಗೆಳೆಯ ಕಾರ್ಗಲ್ ಹೋಟೆಲ್ ಉದ್ಯಮಿ #ಅಣ್ಣಪ್ಪರ ಏಕೈಕ ಪುತ್ರ ಪತ್ನಿ ಮನೆಯಿಂದ ಬೈಕ್ ಲ್ಲಿ ಬರುವಾಗ ಹೆಲ್ಮೆಟ್ ಧರಿಸಿದ್ದವರು ಮಾರ್ಗ ಮಧ್ಯೆ ದೇವರ ಗುಡಿಗೆ ಹೋಗಿ ಕೈ ಮುಗಿದು ಹೊರಟವರು ಹೆಲ್ಮೆಟ್ ಧರಿಸದೆ ಬೈಕ್ ಹ್ಯಾಂಡಲಿಗೆ ತಗಲು ಹಾಕಿದ್ದರು.
ಆ ಕ್ಷಣದಲ್ಲೇ ಅಪಘಾತವಾಗಿ ಮೃತರಾದ ಸುದ್ದಿ ಅಘಾತಕರ.
ಲಕ್ಷಾಂತರ ರೂಪಾಯಿಯ ಬೈಕ್ ಖರೀದಿಸುವ ಯುವ ಜನತೆ ಹೆಲ್ಮೆಟ್ ಕಡ್ಡಾಯ ಧರಿಸಬೇಕೆಂಬ ಕಾನೂನು ಇದ್ದರು ಹೆಲ್ಮೆಟ್ ಧರಿಸುವುದಿಲ್ಲ ಕಾರಣ ಕೇಳಿದರೆ ಇತ್ತೀಚಿಗೆ ಒಬ್ಬ ಯುವಕ ಹೇಳಿದ್ದು ಹೆಲ್ಮೆಟ್ ಧರಿಸಿದರೆ ಕೂದಲು ಉದುರುತ್ತದೆ... ನಗಬೇಕೋ ಅಳಬೇಕೋ ನೀವೇ ಹೇಳಿ.
1976 ನಾನು ಆರನೆ ತರಗತಿ ವಿದ್ಯಾರ್ಥಿ ಆಗ ನನ್ನ ತಂದೆಯ ಗೆಳೆಯರಾದ #ಯೋಮಕೇಶಪ್ಪ ಗೌಡರು ಆಗಾಗ್ಗೆ ತಮ್ಮ ಹಿರೇಹಾರಕದ ಮನೆಯಿಂದ ತಮ್ಮ ರಾಜದೂತ್ ಬೈಕ್ ನಲ್ಲಿ ಬಂದು ನಮ್ಮ ಮನೆಯಲ್ಲಿ ಬೈಕ್ ಇಟ್ಟು ಸಾಗರ ಅಥವ ಶಿವಮೊಗ್ಗಕ್ಕೆ ಹೋಗಿ ಅವರ ಕೆಲಸ ಮುಗಿಸಿ ಬರುತ್ತಿದ್ದರು.
ಶಿವಮೊಗ್ಗ ಹೋಗಿ ಬಂದವರು ಆ ದಿನಗಳ ರಾತ್ರಿ ತಂಗಲು ನಮ್ಮ ಊರಿನ ಸಮೀಪದ ಬಸವನಕೊಪ್ಪದ ಅವರ ಮಾವ #ಚೆನ್ನವೀರಪ್ಪಗೌಡರ ಮನೆಗೆ (ನಿಜಲಿಂಗಪ್ಪ ಗೌಡರ ತಂದೆ) ಹೋಗುತ್ತಿದ್ದರು.
1975-76 ರಿಂದಲೆ ಸರ್ಕಾರ ಹೆಲ್ಮೆಟ್ ಕಡ್ಡಾಯ ಮಾಡಿದ್ದರಿಂದ ಅವರು ಅರಿಶಿಣ ಬಣ್ಣದ ಇಂಡಸ್ಟ್ರೀಯಲ್ ಸೇಫ್ಟಿ ಹೆಲ್ಮೆಟ್ ಖರೀದಿಸಿ ಧರಿಸುತ್ತಿದ್ದರು.
ಯಾವಾಗಲೂ ಹೀಗೆ ನಮ್ಮ ಮನೆಯಿಂದ 2 ಕಿ.ಮಿ ದೂರದ ಚೆನ್ನವೀರಪ್ಪ ಗೌಡರ ಮನೆಗೆ ಹೋಗುವಾಗ ಹೆಲ್ಮೆಟ್ ಧರಿಸದೆ ನಮ್ಮ ಮನೆಯಲ್ಲೇ ಇಟ್ಟು ಹೋಗುವುದು ಅವರ ಅಭ್ಯಾಸ.
ಇಂತಹದ್ದೇ ಒಂದು ದಿನ ಅವತ್ತು ಸಂಜೆ ಶಿವಮೊಗ್ಗದಿಂದ ಬಂದ ಗೌಡರು ನನ್ನ ತಂದೆ ಹತ್ತಿರ ಸ್ವಲ್ಪ ಹೊತ್ತು ಮಾತಾಡಿ ಬಸವನಕೊಪ್ಪದ ಅವರ ಮಾವನ ಮನೆಗೆ ಹೊರಟರು.
ಆಗ ಅವರ ರಾಜದೂತ್ ಬೈಕ್ ಸ್ಟಾರ್ಟ್ ಮಾಡಲು ಬೈಕ್ ಕಿಕ್ಕರ್ ತುಳಿಯುವಾಗ ನನಗೆ ಅವರಿಗೆ ಹೆಲ್ಮೆಟ್ ಕೊಡಲೇ ಬೇಕು... ಅವರು ಹೆಲ್ಮೆಟ್ ಧರಿಸಿಯೇ ಬೈಕ್ ಚಲಾಯಿಸಲಿ...ಅನ್ನಿಸಿ ಬಿಟ್ಟಿತು ಯಾಕಂತ ಗೊತ್ತಿಲ್ಲ...
ತಕ್ಷಣ ನಮ್ಮ ಮನೆಯಲ್ಲಿಟ್ಟಿದ್ದ ಅವರ ಹೆಲ್ಮೆಟ್ ತೆಗೆದುಕೊಂಡು ಓಡಿ ಹೋಗಿ ಅವರಿಗೆ ನೀಡಿದೆ.
ಅವರು ... " ಇಲ್ಲೇ ಬಸವನ ಕೊಪ್ಪಕ್ಕೆ ಹೋಗಿ ಬರೋಕೆ ಹೆಲ್ಮೆಟ್ ಯಾಕೆ?... ಅಂದವರು ತಕ್ಷಣ ಹುಡುಗ ತಂದು ಕೊಟ್ಟಿದ್ದು ನಿರಾಕರಿಸಬಾರದು ಇರಲಿ" ಅಂತ ಹೆಲ್ಮೆಟ್ ಆರೆ ಮನಸ್ಸಿನಿಂದಲೇ ಧರಿಸಿ ಬೈಕ್ ಚಾಲು ಮಾಡಿ ಹೋದರು.
ಅವರು ನಮ್ಮ ಮನೆಯಿಂದ ಹೋಗಿ ಕೆಲ ಕ್ಷಣದಲ್ಲೇ ಕಾಡು ಹಂದಿಗಳು ದೊಡ್ಡ ಗುಂಪು ರಸ್ತೆ ದಾಟಲು ವೇಗವಾಗಿ ಓಡುತ್ತಾ ಯೋಮಕೇಶಪ್ಪ ಗೌಡರ ಬೈಕ್ ಗೆ ನುಗ್ಗಿ ಅಪಘಾತವಾಗಿ ಗೌಡರು ಬದುಕಿದ್ದೇ ಹೆಚ್ಚು...
ಅವರು ಧರಿಸಿದ್ದ ಹೆಲ್ಮೆಟ್ ಎರಡು ಸೀಳಾಗಿತ್ತು...
ಅವತ್ತು ಹೆಲ್ಮೆಟ್ ಇಲ್ಲದಿದ್ದರೆ ಗೌಡರು ತಲೆಗೆ ನೇರವಾಗಿ ಪೆಟ್ಟಾಗಿ ಬದುಕುಳಿಯುತ್ತಿದ್ಧಿರಲಿಲ್ಲ ಅಂತ ದೊಡ್ಡವರೆಲ್ಲ ಹೇಳುತ್ತಿದ್ದರು.
ಅವರಿಗೆ ಕೊನೆಗಳಿಗೆಯಲ್ಲಿ ಹೆಲ್ಮೆಟ್ ಕೊಡಬೇಕೆಂದು ನನಗೆ ಅನ್ನಿಸಿದ್ದು ಏಕೆ - ಹೇಗೆ?...
ಈವರೆಗೆಉತ್ತರ ಸಿಕ್ಕಿಲ್ಲ ಇದು ನನ್ನ ಆರನೇ ಇಂದ್ರಿಯದ ಜಾಗೃತೆನಾ? ಅಥವ ಕಾಕತಾಳಿಯನೋ? ಗೊತ್ತಿಲ್ಲ.
"ಕೃಷ್ಣಣ್ಣ ನಿನ್ನ ಮಗ ಹೆಲ್ಮೆಟ್ ಕೊಡದಿದ್ದರೆ ನಾನು ಬದುಕುತ್ತಿರಲಿಲ್ಲ" ಅಂತ ಯೋಮಕೇಶಪ್ಪ ಗೌಡರು ಅವರಿಗೆ ಚಿಕಿತ್ಸೆ ನೀಡುತ್ತಿದ್ದ ನಮ್ಮ ತಂದೆಯ ಹತ್ತಿರ ಕ್ಲೀನಿಕ್ ನಲ್ಲಿ ಹೇಳುತ್ತಿದ್ದ ಮಾತು ನನ್ನ ಮನದಾಳದಲ್ಲಿ ಹಾಗೇ ಉಳಿದಿದೆ.
ಬೈಕ್ ಸವಾರಿ ಮಾಡುವವರು ಕಾನೂನಿನ ಕಡ್ಡಾಯಕ್ಕಾಗಿ ಅಥವ ಪೋಲಿಸರ ದಂಡ ಹಾಕುತ್ತಾರೆಂದು ಹೆಲ್ಮೆಟ್ ದರಿಸುವುದಲ್ಲ, ನಮ್ಮ ಜೀವ ರಕ್ಷಣೆಗೆ ಹೆಲ್ಮೆಟ್ ಕಡ್ಡಾಯವಾಗಿ ಧರಿಸಿ ಬೈಕ್ ಓಡಿಸಬೇಕು.
ಬೈಕ್ ಸವಾರರ ಜೀವ ರಕ್ಷಣೆಗಾಗಿಯೇ 50 ವರ್ಷದ ಹಿಂದೆಯೇ ಹೆಲ್ಮೆಟ್ ಕಡ್ಡಾಯ ಮಾಡಿ ಕಾನೂನು ಜಾರಿ ಆಗಿದೆ.
ಆದರೆ ಹೆಲ್ಮೆಟ್ ಧರಿಸಲು ನಿರ್ಲಕ್ಷ್ಯ ವಹಿಸುವವರೇ ಈಗಲೂ ಜಾಸ್ತಿ.
ಹೆಲ್ಮೆಟ್ ಧರಿಸದೆ ಬೈಕ್ ಓಡಿಸುವವರಿಗೆ ಅವರವರ ಮನೆಯಲ್ಲಿಯೇ ಅವಕಾಶ ನೀಡಬಾರದು.
ಈ ಮೂಲಕ ನಿಮ್ಮ ಕುಟುಂಬದ ಸದಸ್ಯರ ಜೀವ ರಕ್ಷಣೆ ಮಾಡಿ ಎಂದು ವಿನಂತಿಸುತ್ತೇನೆ.
Comments
Post a Comment