#ಕಾಟು_ಮಾವು.
ಇವತ್ತು ನಮ್ಮ ಆಸ್ತಾನದ ಜೋತಿಷಿ ಕಲ್ಮಕ್ಕಿ ಬೂದ್ಯಪ್ಪ ಗೌಡರು ತಂದದ್ದು.
ಇದರ ತಳಿ ಸಂರಕ್ಷಣೆ ಮಾಡ ಬೇಕು ಅಷ್ಟು ರುಚಿಕರವಾದ ಕಾಟು ಮಾವು ಇದು.
ಬೂದ್ಯಪ್ಪ ಗೌಡರ ಮನೆಯ ಈ ಕಾಟು ಮಾವು ತಳಿ ವಿಶಿಷ್ಟವಾದ ರುಚಿ - ಘಮ ಮತ್ತು ಗಾತ್ರದ್ದು.
ಜೀರಿಗೆ ಸುವಾಸನೆಯ, ಸಿಹಿ ಹುಳಿಯ ಸಮ್ಮಿಶ್ರದ ಗಾಡ ಬಣ್ಣದ ಚಿಕ್ಕ ಗಾತ್ರದ ಅದರಲ್ಲೂ ಗಿಳಿ ಮೂತಿಯ ಕಾಟು ಮಾವು.
ಇದು ವರ್ಷ ಬಿಟ್ಟು ವರ್ಷ ಫಸಲು ನೀಡುವ ಮರ ಈ ಕಾಟು ಮಾವಿನ ಸಿಪ್ಪೆ ಕೂಡ ನೀವು ತಿಂದರೆ ಬಿಡುವುದಿಲ್ಲ.
ಮಾವಿನ ತಳಿ ಸಂರಕ್ಷಣೆ ಮಾಡುವ ಮಲೆನಾಡಿನ ಅಪ್ಪೆ ಮಿಡಿ ನರ್ಸರಿಯವರು ಈ ಮರ ಒಮ್ಮೆ ಬಂದು ನೋಡ ಬೇಕು.
ಮಲೆನಾಡಿನಲ್ಲಿ ಕಾಟು ಮಾವುಗಳು ಸಾವಿರಾರು ರುಚಿ ಮತ್ತು ಗಾತ್ರದಲ್ಲಿ ಇದೆ.
ನೈಸರ್ಗಿಕವಾಗಿ ತಳಿ ಸಂಕಿರಣದಿಂದ ಹೊಸ ಹೊಸ ರುಚಿಯ ಕಾಟು ಮಾವಿನ ಹಣ್ಣು ಬರಬಹುದು.
ಕಾಟು ಮಾವಿನ ಹಣ್ಣುಗಳಿಗೆ ಕರಾವಳಿಯಲ್ಲಿ ಹೆಚ್ಚಿನ ಬೇಡಿಕೆ ಇದೆ ಆದ್ದರಿಂದ ಅಲ್ಲಿನ ತರಕಾರಿ ಅಂಗಡಿಗಳಲ್ಲಿ ತರಹೇವಾರಿ ಕಾಟು ಮಾವಿನ ಹಣ್ಣು ಮಾರಾಟಕ್ಕೆ ಇಟ್ಟಿರುತ್ತಾರೆ.
ಆದರೆ ಮಲೆನಾಡಿನಲ್ಲಿ ಅಷ್ಟೆಲ್ಲ ವಿದದ ಕಾಟು ಮಾವಿನ ಹಣ್ಣುಗಳ ಮರ ಇದ್ದರೂ ಅದು ಮಾರಾಟಕ್ಕೆ ಇಡುವುದಿಲ್ಲ ಇದಕ್ಕೆ ಮುಖ್ಯ ಕಾರಣ ಕಾಟು ಮಾವಿನ ಹಣ್ಣಿನ ಸಾಸಿವೆ ಹೆಚ್ಚಿನವರು ತಯಾರಿಸುವುದಿಲ್ಲ ಮತ್ತು ಬಳಸುವುದಿಲ್ಲ.
ಇದು ಸುಲಭವಾಗಿ ಖರ್ಚಿಲ್ಲದೇ ತಯಾರಿಸುವ ರುಚಿಕರ ಖಾದ್ಯ ಒಮ್ಮೆ ತಯಾರಿಸಿ ತಿಂದು ನೋಡಿ, ಇನ್ನೊಂದು ವಿನಂತಿ ಕಾಟು ಮಾವಿನ ಹಣ್ಣೇ ಆಗಬೇಕಿಲ್ಲ ನಿಮಗೆ ಸಿಗುವ ಯಾವುದೇ ಮಾವಿನ ಹಣ್ಣಿನಲ್ಲೂ ಇದನ್ನು ಮಾಡ ಬಹುದು.
ಆದರೆ ಕಾಟು ಮಾವಿನ ಹಣ್ಣಿನ ರುಚಿ ಮತ್ತು ಘಮದ ಲೆವೆಲ್ಲೇ ಬೇರೆ.
ಇವತ್ತು ಈ ವಿಶೇಷ ಕಾಟು ಮಾವಿನ ಹಣ್ಣು ತರುವುದಾಗಿ ಬೂಧ್ಯಪ್ಪ ಗೌಡರು ತಿಳಿಸಿದ್ದರಿಂದ ಅವರಿಗೆ ಕಾಯುತ್ತಾ ಅಡುಗೆ ತಯಾರಿ ಮಾಡಿದ್ದೆ.
ನನ್ನ ಪತ್ನಿ ಮಗಳ ಬಾಣಂತನಕ್ಕೆ ಬೆಂಗಳೂರಿಗೆ ಹೋಗಿರುವುದರಿಂದ ನಮ್ಮ ಮನೆಯ ನಿತ್ಯದ ಅಡುಗೆ ನನ್ನದೇ ಆಗಿದೆ.
ಕಾಟು ಮಾವಿನ ಹಣ್ಣಿನ ಸಾಸಿವೆ ಒಂದು ಸಾಂಪ್ರದಾಯಿಕ ವಿಧಾನವಾಗಿದೆ, ಸಿಹಿ ಮತ್ತು ಹುಳಿ ಮಿಶ್ರಿತ ಮಲೆನಾಡು ಶೈಲಿಯ ಖಾದ್ಯಇದು.
ಕಾಡು ಮಾವಿನ ಹಣ್ಣು, ತೆಂಗಿನಕಾಯಿ, ಸಾಸಿವೆ ಮತ್ತು ಬೆಲ್ಲ ಬಳಸಿ ತಯಾರಿಸುವ ಸುಲಭವಾದ ಮತ್ತು ರುಚಿಕರವಾದ ಸಾಸಿವೆ ಅಥವ ಈ ಗೊಜ್ಜು ಬಿಸಿ ಅನ್ನದೊಂದಿಗೆ ತಿನ್ನಲು ಅತ್ಯುತ್ತಮ ಕಾಂಬಿನೇಶನ್ ಆಗಿದೆ.
ಚೆನ್ನಾಗಿ ತೊಳೆದ ಕಾಡು ಮಾವಿನ ಹಣ್ಣಿನ ಸಿಪ್ಪೆ ತೆಗೆದು ರಸವನ್ನು ಕಿವುಚಿ ಗೊರಟಿನೊಂದಿಗೆ ಪಾತ್ರೆಯಲ್ಲಿಡಿ.
ತೆಂಗಿನತುರಿ, ಒಣ ಮೆಣಸಿನಕಾಯಿ ಅಥವಾ ಹಸಿರು ಮೆಣಸಿನಕಾಯಿ,ಸಾಸಿವೆ ಮತ್ತು ಅರಿಶಿನ ಸೇರಿಸಿ ನುಣ್ಣಗೆ ರುಬ್ಬಿಕೊಳ್ಳಿ.
ರುಬ್ಬಿದ ಮಸಾಲೆಯನ್ನು ಮಾವಿನ ಹಣ್ಣಿನ ರಸಕ್ಕೆ ಸೇರಿಸಿ, ರುಚಿಗೆ ತಕ್ಕಷ್ಟು ಬೆಲ್ಲ ಮತ್ತು ಉಪ್ಪು ಹಾಕಿ ಚೆನ್ನಾಗಿ ಕಲಸಿ.
ಎಣ್ಣೆಯಲ್ಲಿ ಸಾಸಿವೆ ಮತ್ತು ಕರಿಬೇವು ಹಾಕಿ ಒಗ್ಗರಣೆ ಕೊಡಿ.
ಮಾವಿನ ಹಣ್ಣು ತುಂಬಾ ಹುಳಿಯಾಗಿದ್ದರೆ ಹೆಚ್ಚಿನ ಬೆಲ್ಲ ಬಳಸಿ,ಗಾಂಧಾರಿ ಮೆಣಸಿನಕಾಯಿ (Green chilli) ಬಳಸಿದರೆ ವಿಶಿಷ್ಟ ರುಚಿ ಸಿಗುತ್ತದೆ.
ಇವತ್ತಿನ ಈ ಕಾಟು ಮಾವಿನ ಹಣ್ಣಿನ ಮಾಲಿಕರಾದ #ಬೂಧ್ಯಪ್ಪಗೌಡರಿಗೆ ಸ್ವಲ್ಪ ಖಾರ ಜಾಸ್ತಿ ಬೇಕು ಆದ್ದರಿಂದ ಒಣ ಮೆಣಸು ಮತ್ತು ಸಾಸಿವೆ ಕಾಳು ಜಾಸ್ತಿ ಹಾಕಿದ್ದೆ ನಂತರ ಒಗ್ಗರಣೆ ನೀಡಿದೆ.
ಸೆಮಿ ಪಾಲಿಶ್ ಅಕ್ಕಿಯ ಅನ್ನ ಮಾಡಿ ಅದರ ಅರ್ದ ಬಾಗ ಮೊಸರನ್ನ ಮಾಡಿ ಬಾಳೆ ಎಲೆಯಲ್ಲಿ ಕಟ್ಟಿ ಇಟ್ಟಿದ್ದೆ.
ಗೋಕರ್ಣ ಮಜ್ಜಿಗೆ ಮೆಣಸು ಹುರಿದು, ನಾನೇ ತಯಾರಿಸಿದ ಅಪ್ಪೆ ಮಿಡಿ ಉಪ್ಪಿನಕಾಯಿ ಜೊತೆ ಊಟ ಮಾಡಿದ ನಮ್ಮ ಆಸ್ತಾನ ಜೋತಿಷಿಗಳು ನನ್ನ ಕೈ ರುಚಿಗೆ ಫಿದಾ ಆಗಿದ್ದಾರೆ.
ಮೇಷ ರಾಶಿಗೆ ರಾಜ ಯೋಗ ಜೂನ್ 1 ರಿಂದ ನಿಮ್ಮ ಬಾಗ್ಯದ ಬಾಗಿಲು ತೆರೆಯಲಿದೆ ಎಂದು ಭವಿಷ್ಯ ಬೇರೆ ಹೇಳಿ ಹೋದರು.
ನಮ್ಮಿಷ್ಟದ ರುಚಿಕರ - ಶುಚಿಕರ ಅಡುಗೆ ನಾವೇ ತಯಾರಿಸಲು ಹೆಚ್ಚಿನ ಶ್ರಮ ಬೇಡ ಆದರೆ ಹೆಚ್ಚಿನ ತಾಳ್ಮೆ ಮಾತ್ರ ಬೇಕು.
ಜೋತಿಷಿ ಬೂಧ್ಯಪ್ಪ ಗೌಡರ ಮನೆಯ ಈ ಕಾಟು ಮಾವಿನ ತಳಿ ಸಂರಕ್ಷಣೆ ಮಾಡುವ ಆಸಕ್ತಿ ಇರುವವರಿಗೆ ಇವರ ಸಂಪರ್ಕ ಮಾಡಲು ವಿಳಾಸ ಮತ್ತು ಫೋನ್ ನಂಬರ್ ಕಾಮೆಂಟ್ ಬಾಕ್ಸ್ ನಲ್ಲಿದೆ ನೋಡಿ.
#selfcooking #selfcook #localverity #mango
#receipe #mydish #mangoseason
Comments
Post a Comment