#ಇ೦ದಿರಾಗಾಂಧಿ_ಬಂದಿಸಿದ_ಆ_ದಿನ.
#ಅಕ್ಟೋಬರ್_1977_4ನೇ_ತಾರೀಖು_ಮಂಗಳವಾರ
#ಕಾ೦ಗ್ರೇಸ್_ಪಕ್ಷ_ಇಡೀ_ಸಾಗರ_ಪೇಟೆ_ಬಂದ್_ಮಾಡಿಸಿತ್ತು
#ಅವತ್ತು_ಜನತಾ_ಪಕ್ಷದಲ್ಲಿ_ಶಾಸಕರಾಗಿದ್ದ_ಕಾಗೋಡುತಿಮ್ಮಪ್ಪನವರ
#ನೇತೃತ್ವದಲ್ಲಿ_ಬಂದ್_ವಿರೋದಿಸಿ_ಮೆರವಣಿಗೆ
#ಲಾಠಿ_ಚಾಜ್೯_ಕಾಗೋಡರ_ಕೈಯಿಗೆ_ಪೋಲಿಸರ_ಲಾಠಿಯಿಂದ_ಹಲ್ಲೆ_ಎಂಬ_ಸುದ್ದಿ.
#ಅವತ್ತು_ನಾನು_ನನ್ನ_ಗೆಳೆಯ_ಪುಪ್ಪಾ_ಸಾಗರದಿಂದ_ಆನಂದಪುರಂಗೆ_25_ಕಿಮಿ_ನಡೆದು_ಬಂದಿದ್ದೆವು.
#Indiraghandi #janathaparty #congressparty #sagar #kagoduthimmappa #sagarbandh
48 ವರ್ಷದ ಹಿಂದಿನ ಈ ಘಟನೆ ಎಲ್ಲರಿಗೂ ಮರೆತು ಹೋಗಿದೆ, ಸಾಧ್ಯವಾದರೆ ನೆನಪಾದವರು ಮತ್ತೊಮ್ಮೆ ನೆನಪಿಸಿಕೊಳ್ಳಲಿ ಈಗಿನ ತಲೆಮಾರಿನವರಿಗೆ ಇಂತಹ ಘಟನೆ ನಡೆದಿತ್ತು ಎಂಬುದು ತಿಳಿಯಲಿ ಎಂದು ಈ ಲೇಖನ ಬರೆದಿದ್ದೇನೆ.
ಆನಂದಪುರಂ ಸರ್ಕಾರಿ ಮಾಧ್ಯಮಿಕ ಶಾಲೆಯಲ್ಲಿ 7ನೇ ತರಗತಿಯ ಪಬ್ಲಿಕ್ ಪರೀಕ್ಷೆಯಲ್ಲಿ ನಾನು 600 ಅ೦ಕಕ್ಕೆ 520 ಅಂಕ ಪಡೆದದ್ದರಿಂದ ನಮ್ಮ ತಂದೆ ನನ್ನನ್ನು 8 ನೇ ತರಗತಿಗೆ ಇಂಗ್ಲೀಷ್ ಮೀಡಿಯಂಗೆ ಸಾಗರದ ಮುನ್ಸಿಪ್ ಹೈಸ್ಕೂಲ್ ಗೆ ಸೇರಿಸಿದ್ದರು.
ಆನಂದಪುರಂನಿಂದ ಪ್ರತಿ ನಿತ್ಯ ರೈಲಿನಲ್ಲಿ ನಮ್ಮ ಪ್ರಯಾಣ ಆಗ ಮೂರು ತಿಂಗಳಿಗೆ ವಿದ್ಯಾರ್ಥಿಗಳಿಗೆ ಹತ್ತೊಂಬತ್ತು ರೂಪಾಯಿಗೆ ರೈಲಿನ ಪಾಸ್ ನೀಡುತ್ತಿದ್ದರು.
1977 ರ ಅಕ್ಟೋಬರ್ 4 ನೇ ತಾರೀಖು ಮಂಗಳವಾರ ಬೆಳಿಗ್ಗೆ ಸಾಗರದಲ್ಲಿ ರೈಲು ಇಳಿದು ಬಸ್ ಸ್ಟಾಂಡ್ ಹತ್ತಿರ ಬ೦ದಾಗಲೇ ಗೊತ್ತಾಗಿದ್ದು ಅವತ್ತು ಸಾಗರ ಪೇಟೆ ಬಂದ್ ಅಂತ.
ಅವತ್ತು ಸಾಗರದ ಎಲ್ಲಾ ಅಂಗಡಿ ಮುಂಗಟ್ಟುಗಳುಗಳು ಬಾಗಿಲು ಮುಚ್ಚಿತ್ತು, ಬಸ್ ಸಂಚಾರ ಇರಲಿಲ್ಲ, ಶಾಲೆ ಹತ್ತಿರ ಹೋದರೆ ಶಾಲೆಗೆ ರಜೆ.
ಹಿಂದಿನ ರಾತ್ರಿ ಮಾಜಿ ಪ್ರಧಾನಿ #ಇಂದಿರಾ_ಗಾಂಧಿಯವರನ್ನು #ಮೊರಾರ್ಜಿ_ದೇಸಾಯಿ ಅವರು ಪ್ರದಾನ ಮಂತ್ರಿ ಆಗಿದ್ದ #ಜನತಾ_ಪಕ್ಷದ ಕೇಂದ್ರ ಸಕಾ೯ರ ಮತ್ತು ಗೃಹ ಸಚಿವ #ಚೌದುರಿ_ಚರಣ್_ಸಿಂಗ್ ಬಂದಿಸಿದ್ದರಿಂದ ಇದೆಲ್ಲ ಆಗುತ್ತಿದೆ ಅಂತ ಸಾಗರ ಪೇಟೆಯ ಜನರ ಮಾತಿನಿಂದ ಗೊತ್ತಾಯಿತು.
ಆನಂದಪುರಂನಿಂದ ಸಾಗರಕ್ಕೆ ಬಂದಿದ್ದ ನಾವೆಲ್ಲ ವಿದ್ಯಾರ್ಥಿ ವೃಂದದವರು ರೈಲ್ವೆ ಸ್ಟೇಷನ್ ನಲ್ಲಿ ಸೇರಿಕೊಂಡು ವಾಪಾಸ್ ನಮ್ಮ ಊರು ಆನಂದಪುರಂಗೆ ಹೋಗುವುದು ಹೇಗೆ ಅಂತ ಚಿಂತಿಸುತ್ತಿದ್ದರು.
ತಾಳಗುಪ್ಪದಿಂದ ಸಂಜೆ ವಾಪಾಸು ಬರುವ ರೈಲೂ ಪ್ರಯಾಣ ರದ್ದಾದರೆ ? ಎಂಬ ಭಯಕ್ಕೆ ಸ್ಟೇಷನ್ ಮಾಸ್ಟರ್ ಕೂಡ ಏನೂ ಹೇಳಲಾಗುವುದಿಲ್ಲ ಅಂತ ಅಂದದ್ದು ಎಲ್ಲರಿಗೂ ಸಂಕಷ್ಟ ತಂದಿತ್ತು.
ಆಗಲೇ ನಾನು ಮತ್ತು ಹಿರಿಯ ಗೆಳೆಯ ಪುಪ್ಪಾ ಯಾನೆ ಸಿಲ್ವಸ್ಟರ್ ಡಿಕಾಸ್ಟ್ ಒಂದು ತೀರ್ಮಾನ ಮಾಡಿದ್ದೆವು.
ಸಂಜೆ ತನಕ ಅನಿರ್ದಿಷ್ಟವಾದ ರೈಲು ಮರು ಪ್ರಯಾಣಕ್ಕೆ ಕಾಯದೆ ನಡೆದುಕೊಂಡೇ ಆನಂದಪುರಂಗೆ ಹೋಗಬಾರದೇಕೆ ಅಂತ.
ಪುಪ್ಪಾ ಪೀಯೂಸಿ ವಿದ್ಯಾರ್ಥಿ ನಾನು 8ನೇ ತರಗತಿ ಆದರೆ ನಮ್ಮಿಬ್ಬರದ್ದು ಗಳಸ್ಯ ಕಂಠಸ್ಯ ಗೆಳೆತನ ಮತ್ತು ನಾವಿಬ್ಬರೂ ನಮ್ಮೂರು ಯಡೇಹಳ್ಳಿ ಕ್ರಿಕೆಟ್ ಟೀಮ್ ಆಟಗಾರರು.
ನಮ್ಮಿಬ್ಬರ ತೀರ್ಮಾನ ಆ ದಿನಗಳಲ್ಲಿನ ಆನಂದಪುರಂನಿಂದ ಸಾಗರಕ್ಕೆ ಬರುತ್ತಿದ್ದ ಮುವ್ವತ್ತಕ್ಕೂ ಹೆಚ್ಚಿನ ವಿದ್ಯಾರ್ಥಿ ಬಳಗದಲ್ಲಿ ಯಾರಿಗೂ ಒಪ್ಪಿಗೆ ಆಗಲಿಲ್ಲ.
ಕಾರಣ ಅವರೆಲ್ಲರಿಗೆ 25 ಕಿಲೋ ಮೀಟರ್ ನಡೆದುಕೊಂಡು ಊರು ತಲುಪುವ ಸಾಹಸದ ನಡಿಗೆ ಪ್ರಾಯಾಸ ಅನ್ನಿಸಿತ್ತು.
ಆದರೆಲ್ಲರೂ ಸಂಜೆ ತನಕ ತಾಳಗುಪ್ಪದಿಂದ ಬರುವ ರೈಲಿಗೆ ಸಾಗರದ ರೈಲು ನಿಲ್ದಾಣರಲ್ಲೇ ಕಾಯುವುದಾಗಿ ತಿಳಿಸಿದಾಗ ನಾವಿಬ್ಬರು ಮಾತ್ರ ನಮ್ಮ ನಿರ್ಧಾರದಂತೆ ನಮ್ಮ ಪಾದಯಾತ್ರೆ ಪ್ರಾರಂಬಿಸಿಯೇ ಬಿಟ್ಟೆವು.
ಮದ್ಯಾಹ್ನದ ನಮ್ಮ ಊಟದ ಡಬ್ಬಿ ಹೇಗೂ ನಮ್ಮ ಜೊತೆ ಇತ್ತು, ಆಗೆಲ್ಲ ಈಗಿನಂತೆ ನೀರಿನ ಬಾಟಲಿ ಯಾರೂ ಒಯ್ಯುವ ಪ್ರಮೇಯ ಇರಲಿಲ್ಲ ಎಲ್ಲಿ ಬೇಕಾದರೂ ನೀರು ಕುಡಿಯಬಹುದಾಗಿತ್ತು (ನೀರು ಕುಲಷಿತಗೊಂಡಿರಲಿಲ್ಲ).
ಮೊದಲಿಗೆ ನಮ್ಮ ಪಾದಯಾತ್ರೆ ಯೋಜನೆ ರೈಲ್ವೇ ಹಳಿಯಿರುವ ಮಾರ್ಗದಲ್ಲೇ ಸಾಗರದಿಂದ ಆನಂದಪುರಂ ಸೇರುವುದು ಅಂತಾಯಿತು.
ಕಾರಣ ನಡೆಯಲಾಗದಿದ್ದರೆ ಬಾಳೆಗುಂಡಿ ಅಥವ ಅಡ್ಡೇರಿ ರೈಲು ನಿಲ್ದಾಣದಲ್ಲಿಗೆ ನಮ್ಮ ಪಾದಯಾತ್ರೆ ನಿಲ್ಲಿಸುವುದು.
ಹೇಗೂ ಸಂಜೆ ಬರುವ (ಗ್ಯಾರ೦ಟಿ ಇಲ್ಲ) ರೈಲಲ್ಲಿ ನಮ್ಮ ಊರು ಆನಂದಪುರಂ ತಲುಪುವುದು ಅಂತ.
ಆದರೆ ಪುಪ್ಪಾ ಈ ಯೋಜನೆ ಬದಲಿಸಿದ ಅವನ ಪ್ರಕಾರ ಗಂಟೆಗೆ 6 ಕಿಲೋ ಮೀಟರ್ ಅರಾಮಾಗಿ ನಡೆಯಬಹುದು, 12 ಗಂಟೆಗೆ ಸಾಗರದಿಂದ ಹೊರಟರೂ ಸಂಜೆ 4 ಅಥವ 5 ಗಂಟೆಗೆ ನಿರಾಯಾಸವಾಗಿ ನಮ್ಮ ಊರು ಆನಂದಪುರಂ ತಲುಪುತ್ತೇವೆ ಅಂತ.
ದಿನಾ ರೈಲು ಪ್ರಯಾಣದಲ್ಲಿ ನೋಡಿದ್ದ ಊರುಗಳಿಗಿಂತ ರಾಜ್ಯ ಹೆದ್ದಾರಿಯಲ್ಲಿ (ಈಗ ರಾಷ್ಟ್ರೀಯ ಹೆದ್ದಾರಿ) ನಡೆದರೆ ಮಂಚಾಲೆ - ಉಳ್ಳೂರು - ಕಾಸ್ಪಾಡಿ - ಹೊಸೂರು ಮುಂತಾದ ನಾವು ನೋಡದ ಅನೇಕ ಹೊಸ ಊರು ನೋಡಬಹುದು ಅಂತ.
ಗೆಳೆಯ ಪುಪ್ಪಾನ ಯೋಜನೆ ಪ್ರಕಾರವೇ ನಮ್ಮ ನಡಿಗೆ ಸಾಹಸ ಪ್ರಾರಂಭ ಆಯಿತು.
ರಸ್ತೆಯ ಮಾರ್ಗದಲ್ಲೇ ನಡೆದು ಹೊರಟಾಗ ಸಾಗರ ಪೇಟೆ ಜನರೇ ಇಲ್ಲದೆ ಸ್ಮಶಾನ ಮೌನವಾಗಿತ್ತು.
ಆಗ ಸಾಗರದ ಗಾಂಧಿ ಮ೦ದಿರದಿಂದ ಇಂದಿರಾ ಗಾಂಧಿ ಬಂಧನ ವಿರೋದಿಸಿ ಹೊರಟಿದ್ದ ಮೆರವಣಿಗೆ ಒಂದು ಹೊರಟಿತ್ತು ಅದನ್ನು ಕುತೂಹಲದಿಂದ ನೋಡುತ್ತಾ ಆ ಮೆರವಣಿಗೆ ಹಿಂದೆಯೇ ನಾವು ಸಾಗಿದೆವು.
ಅದು ಆಗಿನ #ಸಂಜಯ್_ಬ್ರಿಗೇಡ್ (ಈಗಿನ ಯುವ ಕಾಂಗ್ರೇಸ್) ಪ್ರತಿಭಟನೆ ಅದರ ಮುಂದಾಳುಗಳಲ್ಲಿ ಆಕರ್ಷಕ ಗಡ್ಡದಾರಿ ಯುವಕ ನಮಗೆ ಹೆಚ್ಚು ನೆನಪಲ್ಲಿ ಉಳಿಯುವಂತೆ ಹಿಂದಿಯಲ್ಲಿ ಆಕರ್ಷಕವಾದ ಘೋಷಣೆ ಹಾಕುತ್ತಿದ್ದರು.
ಆ ಘೋಷಣೆ ಇವತ್ತಿಗೂ ನನಗೆ ನೆನಪಿದೆ..."#ಆದರೋಟಿ_ಕಾಯೇಂಗೇ ... #ಇಂದಿರಾಗಾಂಧಿ_ಬಚಾಯೆಂಗೆ" ಅಂತ.
ಮುಂದೆ ಬುದ್ದಿ ಬಂದು ನಾನು ಜನಪರ ಹೋರಾಟ,ರಾಜಕೀಯ ರಂಗದಲ್ಲಿ ಪ್ರವೇಶ ಮಾಡಿದ ಮೇಲೆಯೇ ಆ ಯುವಕ ಯಾರು ಅಂತ ಗೊತ್ತಾಗಿದ್ದು.
ಅವರು #ಪಡವಗೋಡಿನಸುಬ್ರಾವ್ ಅನೇಕ ವರ್ಷ ಸಾಗರದ ಪಿ.ಎಲ್.ಡಿ ಬ್ಯಾಂಕ್ ಅಧ್ಯಕ್ಷರಾಗಿದ್ದರು ನಂತರ ನನ್ನ ಗೆಳೆಯರೂ ಆದರು.
ಈ ಮೆರವಣಿಗೆ ಶ್ರೀ ಟಾಕೀಸ್ ರಸ್ತೆಗೆ ತಲುಪಿದಾಗ ಈ ಮೆರವಣಿಗೆಗೆ ವಿರುದ್ಧ ದಿಕ್ಕಿನಿಂದ
ಆಗಿನ ಜನತಾ ಪಕ್ಷದಿಂದ ಸಾಗರ ವಿಧಾನ ಸಭಾ ಕ್ಷೇತ್ರದ ಶಾಸಕರಾಗಿದ್ದ ಸಮಾಜ ವಾದಿ #ಕಾಗೋಡುತಿಮ್ಮಪ್ಪರ ನಾಯಕತ್ವದಲ್ಲಿ ಇಂದಿರಾ ಗಾಂಧಿ ಬಂದನಕ್ಕೆ ವಿಜಯೋತ್ಸವದ ಮೆರವಣಿಗೆ ಎದುರಾಯಿತು.
ಅದು ಆಗಿನ ಕೇಂದ್ರ ಸರ್ಕಾರ ಜನತಾ ಪಕ್ಷದಲ್ಲಿ ವಿಲೀನವಾಗಿದ್ದ ಸಂಯುಕ್ತ ಸಮಾಜವಾದಿ ಪಾರ್ಟಿಯ ಮೆರವಣಿಗೆ.
ಅದೇ ಮಾರ್ಗದಲ್ಲಿ ಎದುರಾದ ಆ ಮೆರವಣಿಗೆ ಮುಚ್ಚಿದ ಅಂಗಡಿಗಳನ್ನು ತೆರೆಸುತ್ತಾ, ಇಂದಿರಾ ಗಾಂಧಿ ಜೈಲಿಗೆ ಕಳಿಸಿದ ಆಗಿನ ಪ್ರಧಾನಿ ಮೊರಾರ್ಜಿ ದೇಸಾಯಿ ಕ್ರಮ ಸಮರ್ಥಿಸುವ ಘೋಷಣೆಗಳ ಕೂಗೂತ್ತಾ ಬೀರುತ್ತಿತ್ತು.
ಆ ಮೆರವಣಿಗೆಯಲ್ಲಿ S.S.ಕುಮುಟಾ, ಚಂದ್ರಶೇಟರ್, ಧರ್ಮಪ್ಪ, ಬಿ. ಆರ್.ಜಯಂತ್ ಮುಂತಾದವರು ಇದ್ದರು (ಅವರೆಲ್ಲರ ಹೆಸರು ಗೊತ್ತಾಗಿದ್ದು ನಂತರ ಕೆಲ ವರ್ಷದ ನಂತರ).
ವಿದ್ಯಾರ್ಥಿ ಬಾಲಕರಾಗಿದ್ದ ನಮಗೆ ಈ ಕ್ಲೈಮ್ಯಾಕ್ಸ್ ಮುಂದೇನಾಗುತ್ತೆ ಎ೦ಬ ಕುತೂಹಲ.
ಅಂತಿಮ ಘಟ್ಟದಲ್ಲಿ ಪೋಲಿಸರ ಪ್ರವೇಶವಾಗಿ ಲಾಠಿ ಚಾರ್ಜ್ ಮಾಡಿ ಎದುರಾ ಬದುರಾ ಆಗಿದ್ದ ಇಂದಿರಾ ಗಾಂಧಿ ಬಂದನದ ವಿರುದ್ದ ಮತ್ತು ಪರವಾಗಿದ್ದ ಎರೆಡು ಗುಂಪುಗಳು ಹೊಡೆದಾಡಿಕೊಂಡು ಆಗಲಿರುವ ಅನಾಹುತ ತಪ್ಪಿಸಿದರು.
ನಾವು ಹೇಗೋ ತಪ್ಪಿಸಿಕೊಂಡು ಬಳಸು ದಾರಿ ಹಿಡಿದು ಸಾಗರ ಪೇಟೆ ದಾಟಿ ಆನಂದಪುರಂ ಮಾಗ೯ದಲ್ಲಿ ಪ್ರಯಾಸದಿಂದ ನಡೆದುಕೊಂಡು ರಾತ್ರಿ 9ಕ್ಕೆ ಊರು ಸೇರಿದೆವು,
ನಮ್ಮ ಸಂಗಾತಿಗಳೆಲ್ಲ ತಾಳಗುಪ್ಪದಿಂದ ಬಂದ ರೈಲಿನಲ್ಲಿ ಸಾಗರ ರೈಲು ನಿಲ್ದಾಣದಿಂದ ಸಂಜೆ ರೈಲಿನಲ್ಲಿ ಪ್ರಯಾಣಿಸಿ ಸಂಜೆ 7ಕ್ಕೆ ಊರು ತಲುಪಿದ್ದರು.
ಇದು ನನ್ನ ಜೀವನದ ಮೊದಲ 25 ಕಿ.ಮಿ. ಪಾದಯಾತ್ರೆ ಆಗ ನನ್ನ ವಯಸ್ಸು 12.
ಹಾಗೆ ಸಂಜೆಯೇ ರೈಲು ಸಂಚಾರ ಪುನಾರಂಬವಾಗಲು ಕಾರಣ ಏನಾಯಿತೆಂದರೆ...
ನವದೆಹಲಿಯ ಚೀಪ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್. ದಯಾಳ್ ಅವತ್ತು ತಕ್ಷಣ ಇಂದಿರಾ ಗಾಂಧಿಯವರನ್ನು ಬಿಡುಗಡೆ ಮಾಡಿದ್ದು.
ಹಿಂದಿನ ದಿನ ಸಂಜೆ ಅಂದರೆ 3 ಅಕ್ಟೋಬರ್ 1977 ರಲ್ಲಿ ಇಂದಿರಾ ಗಾಂಧಿ ಮತ್ತು ಅವರ ಸಂಪುಟದಲ್ಲಿ ಮಂತ್ರಿಗಳಾಗಿದ್ದ ಕೆ.ಡಿ. ಮಾಳವೀಯ, ಹೆಚ್.ಆರ್.ಗೋಕಲೆ, ಪಿ.ಸಿ. ಸೇತಿ ಮತ್ತು ಡಿ.ಪಿ. ಚಟ್ಟೋಪಾಧ್ಯಯರನ್ನು ತುರ್ತು ಪರಿಸ್ಥಿತಿಯಲ್ಲಿ ಬಾರೀ ಭ್ರಷ್ಟಾಚಾರ ಮಾಡಿದ್ದಾರೆಂದು ಜನತಾ ಪಕ್ಷದ ಸರ್ಕಾರ ಬಂದನ ಮಾಡಿಸಿತ್ತು.
ಒಂದು ರಾತ್ರಿ ದೆಹಲಿಯ ನ್ಯೂ ಪೋಲಿಸ್ ಟವನ್ ಕಿಂಗ್ಸ್ ವೇ ಕ್ಯಾ೦ಪ್ ನ ಗೆಜೆಟಿಯರ್ ಆಪೀಸರ್ ಮೆಸ್ ನಲ್ಲಿ ಬಂದಿತರನ್ನೆಲ್ಲ ಉಳಿಸಿದ್ದರು.
ಇದು ವಿಶ್ವದಾದ್ಯಂತ ಸುದ್ದಿ ಆಯಿತು ಮತ್ತು ಇಂದಿರಾ ಗಾಂಧಿ ಅಭಿಮಾನಿಗಳಿಗೆ ಈ ಬಂದನ ಬಾರೀ ರೊಚ್ಚಿಗೆಬ್ಬಿಸಿತ್ತು.
ಮು೦ದೆ ಈ ಘಟನೆ ಇಂದಿರಾ ಗಾಂಧಿ ಅವರಿಗೆ ರಾಷ್ಟ್ರದಾದ್ಯಂತ ಅನುಕಂಪವೂ ದೊರಕಿಸಿ ಕೊಟ್ಟಿದ್ದು ಇತಿಹಾಸ ಆಯಿತು.
ಮರುದಿನ ಇಂದಿರಾ ಗಾಂಧಿ ಮತ್ತು ಅವರ ಜೊತೆ ಬಂದನವಾದವರನ್ನು ನವದೆಹಲಿಯ ಪಾರ್ಲಿಮೆಂಟ್ ಸ್ಟ್ರೀಟ್ ನ ಚೀಪ್ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ಆರ್. ದಯಾಳ್ ಎದರು ಹಾಜರು ಪಡಿಸುತ್ತಾರೆ.
ಕೋರ್ಟ್ ನ ಹೊರಗೆ ಭಾರೀ ಸಂಖ್ಯೆಯ ಜನ ಅವತ್ತು ಸೇರಿರುತ್ತಾರೆ ಮ್ಯಾಜಿಸ್ಟ್ರೇಟರು ಇಂದಿರಾ ಗಾಂಧಿ ಮತ್ತು ಅವರ ಜೊತೆಗಾರರಿಗೆ ತಕ್ಷಣ ಬಿಡುಗಡೆ ಮಾಡಿ ಆದೇಶ ಹೊರಡಿಸುತ್ತಾರೆ.
ಆದ್ದರಿಂದ ಇಡೀ ದೇಶದಲ್ಲಿ ಪ್ರಾರಂಭ ಆಗಿದ್ದ ಬಂದ್ ಹರತಾಳ ಇತ್ಯಾದಿ ಮುಕ್ತಾಯವಾಗಿತ್ತು ಆದ್ದರಿಂದ ಸಂಜೆ ರೈಲು ತಾಳಗುಪ್ಪದಿಂದ ಪ್ರಯಾಣ ಪ್ರಾರಂಬಿಸಿತ್ತು.
25 ಕಿಲೋ ಮೀಟರ್ ನಡೆದು ಬಂದ ನಮಿಬ್ಬರ ಸಾಹಸವನ್ನು ಸಹಪಾಟಿಗಳು ಮಾತ್ರ ಅಭಿನಂದಿಸದೇ ಗೇಲಿ ಮಾಡಿದರೂ ನನಗೆ ಮಾತ್ರ ಇದು ಜೀವಮಾನ ಪೂರ್ತಿ ನೆನಪಿನ ಸಾಹಸ ಯಾತ್ರೆ ಆಗಿ ಉಳಿದಿದೆ.
ಮರುದಿನ ಸಾಗರದಲ್ಲಿ ಹಬ್ಬಿದ ಸುದ್ದಿ ಲಾಠಿ ಚಾರ್ಜ್ ಮಾಡಿದ ಪೋಲಿಸರಲ್ಲಿ ಒಬ್ಬರು ಅವತ್ತಿನ ಶಾಸಕರಾಗಿದ್ದ ಕಾಗೋಡು ತಿಮ್ಮಪ್ಪರ ಕೈಗೆ ಲಾಠಿಯಿಂದ ಹೊಡೆದರು ಎಂದು.
ಮತ್ತೆ ಕೆಲವರು ಇದು ಸುಳ್ಳು ಸುದ್ದಿ ಅಂತಲೂ ಇದ್ದರು ಆಗ ನಮಗೆ ತುಂಬಾ ಬೇಸರದ ಸುದ್ದಿ ಎಂದರೆ ಕಾಂಗ್ರೇಸ್ ಯಂಗ್ ಬ್ರಿಗೇಡನ ಪಡವಗೋಡು ಸುಬ್ರಾವ್ ಮತ್ತಿತರರನ್ನು ಜೈಲಿಗೆ ಹಾಕಿದ್ದಾರೆ ಇತ್ಯಾದಿ.
ನಂತರ ಅವರನ್ನೆಲ್ಲ ಅನೇಕ ಬಾರಿ ಜೈಲಿಂದ ಕೋರ್ಟಿಗೆ ಮತ್ತು ಕೋರ್ಟಿನಿಂದ ಜೈಲಿಗೆ ಪೋಲಿಸರು ಕರೆದೊಯ್ಯುವಾಗಲೂ ಅದೇ ಹಿಂದಿ ಬಾಷಾ ಘೋಷಣೆ "ಆದಾ ರೋಟಿ ಕಾಯೇಂಗೆ ... ಇಂದಿರಾ ಗಾಂಧಿ ಬಚಾಯೆಂಗೆ " ನಮಗೆಲ್ಲ ರೋಮಾಂಚನ ಉಂಟು ಮಾಡುತ್ತಿತ್ತು.
ಈ ಘಟನೆ ನಡೆದದ್ದು 48 ವರ್ಷದ ಹಿಂದೆ.
Comments
Post a Comment