Skip to main content

Blog number 1686. ದಂಡಿಗೆಸರದ ನಂದ್ಯಣ್ಣ ನಮ್ಮ ಕುಟುಂಬದ ಆಪ್ತರು ಅವರು ನಮ್ಮ ತಂದೆಯ ಅತ್ಯಾಪ್ತರು ಇನ್ನು ಅವರು ನೆನಪು ಮಾತ್ರ.

#ಹುಟ್ಟು_ಅನಿಶ್ಚಿತ_ಸಾವು_ನಿಶ್ಚಿತ

#ನಮ್ಮ_ಕುಟುಂಬದ_ಆಪ್ತರಾದ_ದಂಡಿಗೆಸರದ_ನಂದ್ಯಣ್ಣ_ಇನ್ನಿಲ್ಲ

#ಶ್ರಮಜೀವಿ_ಅಸಾಧ್ಯ_ಕೋಪ_ಆದರೆ_ಹೃದಯವಂತರು.

#ನಮ್ಮ_ತಂದೆಗೆ_ಅತ್ಯಾಪ್ತರು_ನಮ್ಮ_ಮನೆಯ_ಎಲ್ಲಾ_ಕಷ್ಟ_ಸುಖದಲ್ಲಿ_ಭಾಗಿಯಾದವರು.


  ಮೊನ್ನೆ ಬುಧವಾರ ನಂದ್ಯಣ್ಣರನ್ನು ನೋಡಲು ಅವರ ಊರಾದ ಸೊರಗುಂದದ ದಂಡಿಗೆಸರಕ್ಕೆ ಹೋಗಿದ್ದೆ ಅವರಿಗೆ ಪ್ರಜ್ಞೆ ಇರಲಿಲ್ಲ ಅದರ ಹಿಂದಿನ ರಾತ್ರಿ ದೀರ್ಘ ರಾತ್ರಿವರೆಗೆ ಅವರೆಲ್ಲ ಇಲ್ಲಿಗೆ ( ಘಟ್ಟಕ್ಕೆ ) ತಂದೆ ಕಾಲದಲ್ಲಿ ಬಂದದ್ದು, ಹರತಾಳಿನಲ್ಲಿ ಮೊದಲು ನೆಲೆಸಿದ್ದು ಇತ್ಯಾದಿ ಎಲ್ಲಾ ನೆನಪು ಮಾಡಿದರಂತೆ ಜೊತೆಗೆ ನಮ್ಮ ಮನೆ ವಿಚಾರ ಕೂಡ ಪ್ರಸ್ತಾಪಿಸಿದರೆಂದು ಅವರ ಪತ್ನಿ ಗಿರಿಜಕ್ಕ ಹೇಳುವಾಗ ನನಗೆ ಹಿಂದಿನ ನೆನಪುಗಳ ಚಕ್ರ ತಿರುಗಲು ಪ್ರಾರಂಭ ಆಯಿತು.
  1970 ರಲ್ಲಿ ನನಗೆ 5 ವರ್ಷ ನಮ್ಮ ತಂದೆಗೆ 34 ವರ್ಷ ನಂದ್ಯಣ್ಣರಿಗೆ 24 ವರ್ಷ ಇರಬೇಕು ಅವರು ನಮ್ಮ ತಂದೆಗೆ ಅತ್ಯಾಪ್ತ ಗೆಳೆಯರು ಆಗಲೇ ನಂದ್ಯಣ್ಣ ಯಾರಿಗೂ ಹೇಳದೆ ಒಬ್ಬರೇ ಮನೆ ಬಿಟ್ಟು ಬೊಂಬಾಯಿಗೆ ಹೋದರೆಂಬ ಸುದ್ದಿ ನಮಗೆಲ್ಲ ಕಣ್ಣೀರು ತರಿಸಿತ್ತು.
   ನಂದ್ಯಣ್ಣರ ತಂದೆ ಪುಟ್ಟ ಶೇರೆಗಾರರು ಮತ್ತು ಹಾದಿಬೀಸಿನ ಮೊಯಿದೀನ್ ಸಾಹೇಬರು ನಮ್ಮ ಆನಂದಪುರಂಗೆ ಯಕ್ಷಗಾನ ಬಂದಾಗ ಖಾಯಂ ಪ್ರೇಕ್ಷಕರು, ಯಕ್ಷಗಾನ ನೋಡಿ ಬೆಳಿಗ್ಗೆ ಯಡೇಹಳ್ಳಿ ವೃತ್ತದ ನಮ್ಮ ಹುಲ್ಲಿನ ಮನೆಯ ಕಟ್ಟೆ ಮೇಲೆ ಕುಳಿತು ನಮ್ಮ ತಾಯಿ ನಮ್ಮ ಅಜ್ಜಿಯ ಆದೇಶದ ಮೇಲೆ ಮಾಡಿಕೊಡುತ್ತಿದ್ದ ಚಹಾ ಕುಡಿಯುತ್ತಾ  "ಮಧ್ಯ ರಾತ್ರಿ ತನಕ ಆಟದ ಪ್ರಸಂಗ ಸರಿ ಇತ್ತು ನಂತರ ಅಜ್ಜಿ ಕಥೆ ಮಾಡಿದರು" ಅಂತೆಲ್ಲ ನಮಗೆ ಆಗ ಅರ್ಥವಾಗದ ಸಂಭಾಷಣೆ ಕೇಳುತ್ತಿದ್ದೆವು.
   ಹರತಾಳು ಭಾಗದ ದೊಡ್ಡ ದೊಡ್ಡ ಜಮೀನ್ದಾರರ ಅಡಿಕೆ ತೋಟ ಹಾಕಲು ಪುಟ್ಟ ಶೇರೆಗಾರರೇ ಬೇಕಾದ ಕಾಲವಾಗಿತ್ತು ಈ ಉದ್ಯೋಗ ಪುಟ್ಟ ಶೇರೆಗಾರರಿಗೆ ಗೌರವ ಹಣ ಗಳಿಸಿ ಕೊಟ್ಟಿತು ಪುಟ್ಟ ಶೇರೆಗಾರರು ದೊಡ್ಡ ಜಮೀನು ಆಸ್ತಿವಂತರಾಗಲು ಕಾರಣವಾಯಿತು.
   ಪುಟ್ಟ ಶೇರೆಗಾರರಿಗೂ ಮೂತ್ರ ಕೋಶದ ಕಾಯಿಲೆ ಆಗಿ ಬದುಕುವುದಿಲ್ಲ ಎಂದಾಗ ನಮ್ಮ ತಂದೆ ಮಣಿಪಾಲ್ ಆಸ್ಪತ್ರೆಗೆ ಸೇರಿಸಿ ಅವರ ಜೊತೆ ಇದ್ದು ಗುಣ ಮಾಡಿಸಿ ಕರೆತಂದಿದ್ದರು.
  ನಮ್ಮ ತಂದೆ ಮೂಲ ಹುಲ್ಲಿನ ಮನೆ ತೆಗೆದು ಹೆಂಚಿನ ಮಹಡಿ ಮನೆ ಕಟ್ಟುವಾಗ ನಂದ್ಯಣ್ಣರ ಸಹಾಯ ದೊಡ್ಡದು ಆಗ ಶರಾವತಿ ನದಿ ಮುಳುಗಡೆ ಆಗಿ ಸೊರಗುಂದಕ್ಕೆ ಬಂದು ನೆಲೆಸಿದ ಮುತ್ತಲಕೊಪ್ಪದ ಬಸಪ್ಪ ಗೌಡರು (ಈಗ ಅವರ ಮಗ ದೇವರಾಜ್ ಗೌಡರು ಇದ್ದಾರೆ) ದೊಡ್ಡ ಮನೆ ಕಟ್ಟಲು ನಾಟ ಕೊಯ್ಯಿಸಿದಾಗ ನಾಟದ ನಾಲ್ಕು ಹೊರ ಮೈ (ಅದನ್ನು ಪರಾಟ ಅಂತಾರೆ) ನಾಟವೇ ನಮ್ಮ ಮನೆಗೆ ಸಾಕಾಗಿತ್ತು ಅದನ್ನು ಸಾಗಿಸಿ ಕೊಟ್ಟವರು ನಂದ್ಯಣ್ಣ.
   ಎಷ್ಟೋ ದಿನಗಳ ನಂತರ ಕೆಂಪು ಉಲ್ಲನ್ ಕೋಟು ಧರಿಸಿದ ನಂದ್ಯಣ್ಣ ವಾಪಾಸ್ ಮನೆಗೆ ಬಂದವರು ನಮ್ಮ ಮನೆಗೆ ಬಂದಾಗ ನಮಗೆಲ್ಲ ಎಂತಾ ಖುಷಿ ಅಂದರೆ ಹೇಳುವಂತಿಲ್ಲ ಅವರು ತಮ್ಮ ತಂದೆ ಪುಟ್ಟ ಶೇರೆಗಾರರ ವಿಪರೀತ ಶಿಸ್ತಿನಿಂದ ಜಗಳ ಮಾಡಿಕೊಂಡು ಮನೆ ಬಿಟ್ಟು ಗೋವಾಕ್ಕೆ ಹೋಗಿದ್ದರೆಂದು ನನ್ನ ತಾಯಿ ಮತ್ತು ಅವರ ಬಾಯಮ್ಮ - ಬೂಬಮ್ಮ ಗೆಳತಿಯರು ಚಿನ್ನೆ ಮಣೆ ಆಡುತ್ತಾ ಮಾತಾಡುವುದು ಕೇಳಿದ್ದೆ.
  ನಮ್ಮ ಎಲ್ಲಾ ಮದುವೆಗಳಲ್ಲಿ ನಂದ್ಯಣ್ಣರೇ ಮುಂದು ಇದ್ದರು ಅಷ್ಟು ಜವಾಬ್ದಾರಿ ನಂದ್ಯಣ್ಣರದ್ದು, ನಮ್ಮ ಮನೆಯಲ್ಲಿ ಅಜ್ಜಿ, ನಮ್ಮ ತಾಯಿ ಮತ್ತು ನಮ್ಮ ತಂದೆಯವರ ಅಂತ್ಯ ಸಂಸ್ಕಾರಗಳಲ್ಲೂ ನಂದ್ಯಣ್ಣರ ಸಹಾಯ ನಾವ್ಯಾರು ಮರೆಯುವಂತಿಲ್ಲ.
   ನಂದ್ಯಣ್ಣ ಕೆಲಸ ಅಂದರೆ ಎರೆಡು ಆಳು ಕೆಲಸ ಅಷ್ಟು ಬಲಶಾಲಿ ಅಷ್ಟೇ ಮೂಗಿನ ಮೇಲಿನ ಕೋಪ ಅವರಿಗೆ, ಅಡೂರಿನ ಯೋಗಣ್ಣ ಮತ್ತು ಬೂರಣ್ಣ ನಂದ್ಯಣ್ಣನ ಹೊಗಳುತ್ತಿದ್ದರು ಅವರ ಮಾತಿನಲ್ಲಿ " ನಂದ್ಯಣ್ಣ ಎಷ್ಟೇ ಸಿಟ್ಟು ಮಾಡಲಿ ಅವರಿಗೆ ಸರಿ ಆಗಿ ಕೆಲಸ ಮಾಡಿದರೆ ಏನು ತಿನ್ನುತ್ತಿಯಾ? ಏನು ಕುಡಿತೀಯಾ? ಅನ್ನುವಷ್ಟು ದಾರಾಳಿ" ಅಂತಿದ್ದರು.
  ಅವರಿಗೆ ದೊಡ್ಡ ದೊಡ್ಡ ಜನರ ಗೆಳೆತನ,ಅದರಲ್ಲೂ ಮೇಲು ಜಾತಿಯವರು ನಂದ್ಯಣ್ಣರ ನಾಟಿ ಕೋಳಿ ಖಾದ್ಯ ಅದರ ಜೊತೆ ಅವರಿಷ್ಟದ ಮಧ್ಯದ ಸಮಾರಾಧನೆಗೆ ನಂದ್ಯಣ್ಣ ಎಷ್ಟಾದರೂ ಖರ್ಚು ಮಾಡುವುದರಿಂದ ನಂದ್ಯಣ್ಣ ಅವರಿಗೆಲ್ಲ ಅಚ್ಚುಮೆಚ್ಚು.
  ಇಷ್ಟೆಲ್ಲ ಆದರೂ ನಂದ್ಯಣ್ಣ ಕುಟುಂಬದ ಜೊತೆ ಸಂಬಂದ ಆಗಿರಲಿಲ್ಲ ಕೆಲ ವರ್ಷದ ಹಿಂದೆ ನನ್ನ ಅಕ್ಕನ ಮಗಳಿಗೆ ಇವರ ಮಗನ ಜೊತೆ ವಿವಾಹ ಸಂಬಂದವಾಗಿ ನಂದ್ಯಣ್ಣ ನೆಂಟರೂ ಆದರು.
  ಅವರಿಗೆ ಈಗ ಬೀಗರಾದ ನನ್ನ ಅಕ್ಕನ ಗಂಡ ಕಿಟ್ಟುಗೆ ನಮ್ಮ ತಂಬಾಕು ಕೃಷಿ ಕಾಲದಲ್ಲಿ (1976) ತಂಬಾಕು ಹದ ಮಾಡುವ ಬ್ಯಾರನ್ ಗೆ ಕಟ್ಟಿಗೆ ತರುವಾಗ ಹಾವು ಕಚ್ಟಿದ ಗಂಡಾಂತರ ಸಮಯದಲ್ಲಿ ನಂದ್ಯಣ್ಣ ಜೊತೆಗೆ ಇದ್ದರು.
  2019 ರಲ್ಲಿ ನನ್ನ ಮಗಳ ವಿವಾಹ ವಿಚಾರದಲ್ಲಿ ನನ್ನ ಬೀಗರ ಮನೆ ಹುಬ್ಬಳ್ಳಿಗೆ ನಮ್ಮ ಜೊತೆ ಬಂದಿದ್ದರು ಅವತ್ತು ವಾಪಾಸಾಗುವಾಗ ಶಿಶುನಾಳ ಶರೀಫರ ಗದ್ದುಗೆಗೆ ಹೋಗಿ ನಮಸ್ಕರಿಸಿ ಬಂದಿದ್ದೆವು.
   ನಿನ್ನೆ ರಾತ್ರಿ ನಂದ್ಯಣ್ಣ ಇಹ ಲೋಕ ತ್ಯಜಿಸಿದ ಸುದ್ದಿ ಆ ಕ್ಷಣ ಅವರ ಮನೆಯಲ್ಲಿದ್ದ ಪತ್ರಕರ್ತ ಬಿ.ಡಿ. ರವಿ ತಿಳಿಸಿದರು.
  ನಮ್ಮ ಕುಟುಂಬದ ಅತ್ಯಾಪ್ತ ನಂದ್ಯಣ್ಣ 82 ನೇ ವಯಸ್ಸಲ್ಲಿ ಇಹಲೋಕ ತ್ಯಜಿಸಿದ್ದಾರೆ ಅವರಿಗೆ ಸದ್ಗತಿ ಸ್ವರ್ಗ ಪ್ರಾಪ್ತಿಗಾಗಿ ದೇವರಲ್ಲಿ ಪ್ರಾರ್ಥಿಸುತ್ತಾ ನಂದ್ಯಣ್ಣರ ನೆನಪುಗಳು ಪುನರಾವರ್ತನೆ ಮಾಡಿಕೊಂಡೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

ಶರಾವತಿ ನದಿ ಉಗಮ ಸ್ಥಾನ ಅಂಬುತೀಥ೯.

ಇಡೀ ರಾಜ್ಯಕ್ಕೆ ವಿದ್ಯುತ್ ನೀಡುವ ಶರಾವತಿ ನದಿಯ ಉಗಮ ಸ್ಥಾನ ಅಂಬುತೀಥ೯, ಆರಗ ಸಮೀಪದ ತೀಥ೯ಳ್ಳಿ ತಾಲ್ಲೂಕಿನಲ್ಲಿದೆ( ಶಿವಮೊಗ್ಗ ಜಿಲ್ಲೆ)    ಅಂಬು ತೀಥ೯ದಲ್ಲಿ ಶ್ರೀ ರಾಮ ವನವಾಸದಲ್ಲಿದ್ದಾಗ ಸೀತಾ ಮಾತೆಗೆ ಪೂಜೆಗೆ ನೀರು ಸಿಗದಿದ್ದಾಗ ರಾಮ ತನ್ನ ಅಂಬಿನಿಂದ (ಬಿಲ್ಲಿನ ಬಾಣದಿಂದ) ನೆಲ ಸೀಳಿ ನೀರು ತಂದರೆ೦ದು ರಾಮಾಯಣದಲ್ಲಿ ಉಲ್ಲೇಖವಿದೆ, ಹಾಗಾಗಿ ಈ ಸ್ಥಳಕ್ಕೆ ಅಂಬುತೀಥ೯ ಎಂಬ ಹೆಸರು ಬ೦ತು ಎಂಬುದು ಸ್ಥಳ ಪುರಾಣ.    ಇಲ್ಲಿ ಸಣ್ಣ ತೊರೆಯಾಗಿ ಹುಟ್ಟುವ ನದಿ ಬಾಣದಿಂದ ಹುಟ್ಟಿದ್ದರಿಂದ ಶರಾವತಿ ಎ೦ಬ ಹೆಸರು ಪಡೆದು ಪೂವ೯ಕ್ಕೆ ಹರಿದು ನಂತರ ಪಶ್ಚಿಮ ಮುಖವಾಗಿ ತಿರುಗಿ ಹೊಸನಗರ ತಾಲ್ಲೂಕನ್ನ ದಾಟಿ ಸಾಗರ ತಾಲ್ಲೂಕಿನ ಜೋಗದಲ್ಲಿ ಜಲಪಾತವಾಗಿ ದಟ್ಟ ಕಾನನದ ಕಣಿವೆ ಮುಖಾಂತರ ಹರಿದು ಹೊನ್ನಾವರದಲ್ಲಿ ಅರಬ್ಬಿ ಸಮುದ್ರ ಸೇರುತ್ತದೆ.   ಈ ನದಿಗೆ ಮೊದಲಿಗೆ ಹೀರೇ ಬಾಸ್ಕರ ಎಂಬಲ್ಲಿ ನಂತರ ಲಿಂಗನಮಕ್ಕಿಯಲ್ಲಿ ಆಣೆಕಟ್ಟು ಕಟ್ಟಿ ರಾಜ್ಯಕ್ಕೆ ಜಲ ವಿದ್ಯುತ್ ನೀಡುತ್ತಿರುವುದರಿಂದ ಲಕ್ಷಾಂತರ ಎಕರೆ ಕಾಡು, ಜಮೀನು ಅನೇಕ ಊರು ಮುಳುಗಡೆ ಆಯಿತು ಸಾವಿರಾರು ಕುಟುಂಬಗಳು ಸಂತ್ರಸ್ಥರಾದದ್ದು ಇತಿಹಾಸ.    ಈ ನದಿ ಜೋಗದಲ್ಲಿ ದುಮುಕುವ ಜಲಪಾತ ವಿಶ್ವದ ಸುಂದರ ಜಲಪಾತದಲ್ಲಿ ಒಂದಾಗಿದೆ.    ಹಾಗಾಗಿ ಶರಾವತಿ ನದಿಯ ಉಗಮ ಸ್ಥಾನಕ್ಕೆ ಮಹತ್ವವಿದೆ, ಒಮ್ಮೆಯಾದರೂ ಈ ನದಿ ಮೂಲ ಸಂದಶಿ೯ಸಬೇಕು ಆದರೆ ಇಲ್ಲಿ ಶರಾವತಿ ವ...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...