Blog number 1932. ಆಡಳಿತದಲ್ಲಿರುವ ರಾಜಕಾರಣಿಗಳು ತಮ್ಮ ಎದುರಾಳಿ ತಮಗೆ ಸ್ವರ್ದೆ ನೀಡುತ್ತಾನೆಂದರೆ ಅವನನ್ನು ರಾಜಕೀಯವಾಗಿ ಮುಗಿಸಲು ಮಾಡುವ ತಂತ್ರಗಾರಿಕೆ ರವಡಿ ಲೀಸ್ಟ್ ಗೆ ಸೇರಿಸುವುದು.
#ಬಹು_ದಶಕದ_ಬೇಡಿಕೆ.
#ಜಿಲ್ಲೆಯ_ROWDY_ಲಿಸ್ಟ್_ಪರಿಷ್ಕರಣೆ
#ಈಡೇರಿ_ಎರೆಡು_ವರ್ಷಗಳಾಯಿತು
#ಸಾಗರ_ವಿಧಾನಸಭಾ_ಕ್ಷೇತ್ರದ_ಅಭಿವೃದ್ಧಿಗಾಗಿ_ಪ್ರಾಮಾಣಿಕ_ಸೇವೆ_ಮಾಡಿದ್ದಕ್ಕೆ
#ನನಗೂ_ಈ_ಪಟ್ಟಿಯಲ್ಲಿ_ಸ್ಥಾನ_ಕಲ್ಪಿಸಿದ್ದರು.
#ಪರಿಷ್ಕರಣೆಯಲ್ಲಿ_ಪಟ್ಟಿಯಿಂದ_ಒಂದು_ಸಾವಿರದ_ನಾಲ್ಕುನೂರ_ಇಪ್ಪತ್ತು_ಜನ_ಹೊರಗೆ.
#ಇನ್ನೊಮ್ಮೆ_ಅಭಿನಂದನೆಗಳು_ಆಗಿನ_ಜಿಲ್ಲಾ_ಕ್ಷಣಾಧಿಕಾರಿ_ಲಕ್ಷ್ಮೀಪ್ರಸಾದ್_ಗೃಹ_ಸಚಿವಗಿದ್ದ_ಆರಗಜ್ಞಾನೇಂದ್ರರಿಗೆ
ROWDY LIST ಅನ್ನೋದು ಸಮಾಜವನ್ನು ಕ್ರಿಮಿನಲ್ ಗಳ ಕಿರುಕುಳದಿಂದ ತಪ್ಪಿಸಲು ಮತ್ತು ಕ್ರಿಮಿನಲ್ ಗಳ ಮೇಲೆ ಕಣ್ಣಿಡಲು ಪೋಲಿಸ್ ಇಲಾಖೆಯ ಕಾನೂನು ಸುವ್ಯವಸ್ಥೆಯ ಆಚರಣೆಯ ಅಂಗವಾಗಿದೆ.
ಸಂವಿದಾನದಲ್ಲಿ ನ್ಯಾಯಾಂಗ ವ್ಯವಸ್ಥೆ ಇರುವಾಗ ಕಾರ್ಯಾಂಗದಲ್ಲಿ ಈ ವ್ಯವಸ್ಥೆ ಬೇಕಾ ಅಥವ ಬೇಡವೇ ಅನ್ನುವ ಚರ್ಚೆ ಇದೆ ಆದರೆ ಪೋಲಿಸರಿಗಿಂತ ಇದನ್ನು ದುರ್ಬಳಕೆ ಮಾಡುತ್ತಿರುವುದು ಮಾತ್ರ ಆಡಳಿತರೂಢ ರಾಜಕಾರಣಿಗಳು.
ಎರೆಡು ವರ್ಷದ ಹಿಂದೆ ನಮ್ಮ ಜಿಲ್ಲೆಯವರೇ ಆದ ಗೃಹ ಮಂತ್ರಿ ಆರಗ ಜ್ಞಾನೇಂದ್ರ ಅವರ ಆದೇಶದಂತೆ ಅಂದಿನ ಶಿವಮೊಗ್ಗ ಜಿಲ್ಲಾ ರಕ್ಷಣಾಧಿಕಾರಿಗಳು ಶಿವಮೊಗ್ಗ ಜಿಲ್ಲೆ ಯ Rowdy list ಪರಿಷ್ಕರಣೆ ಮಾಡಿ 1420 ಜನರನ್ನು ಈ ಪಟ್ಟಿಯಿಂದ ಹೊರ ಹಾಕಲಾಗಿದೆ ಎಂಬ ಪ್ರಕಟನೆ ಘೋಷಿಸಿದ್ದರು.
ಬಹುಶಃ ರಾಜ್ಯದ ಪೋಲಿಸ್ ಇಲಾಖೆಯಲ್ಲಿಯೇ ಇಷ್ಟು ದೊಡ್ಡ ಪ್ರಮಾಣದ ರವಡಿ ಪಟ್ಟಿ ಪರಿಷ್ಕರಣೆ ಇದೆ ಮೊದಲಾಗಿರಬಹುದು ಮತ್ತು ಜಿಲ್ಲಾ ರಕ್ಷಣಾಧಿಕಾರಿಗಳಾದ ಬಿ.ಎಂ.ಲಕ್ಷ್ಮೀ ಪ್ರಸಾದರ ಸರ್ವಿಸ್ ನಲ್ಲಿ ಇದು ಸರ್ವಕಾಲಿಕ ದಾಖಲೆ ಆಗಿ ಉಳಿಯಲಿದೆ.
ಪೋಲಿಸ್ ಇಲಾಖೆಯಲ್ಲಿರುವವರಿಗೆ ಗೊತ್ತೇ ಇದೆ ನಿಜ ಕ್ರಿಮಿನಲ್ ಗಳು ಯಾವಾಗಲೂ ಈ ಪಟ್ಟಿಯಲ್ಲಿರುವುದಿಲ್ಲ ಮತ್ತು ರಾಜಕೀಯ ದ್ವೇಷಕ್ಕಾಗಿ ಉದ್ದೇಶ ಪೂವ೯ಕವಾಗಿ ಸೇರಿಸಿದವರು, ಸಣ್ಣ ಕ್ರೈಂ ಗಳಾದ ಮಟಕ -ಕಳ್ಳಬಟ್ಟಿಯವರು ಹೆಚ್ಚು ಇರುತ್ತಾರೆ ಮತ್ತು ಸುಮಾರು 15-20 ವರ್ಷದಿಂದ ಈ ಪಟ್ಟಿ ಪರಿಷ್ಕರಣೆ ಆಗಿಲ್ಲ ಅಂತ.
ಪ್ರತಿ ವರ್ಷ ಎಲ್ಲಾ ಠಾಣೆಗಳು ಈ ಪಟ್ಟಿಯಿಂದ ಕೈ ಬಿಡಬಹುದಾದ ದೀರ್ಘ ಕಾಲದಿಂದ ಇರುವ ಹಾಲಿ ಯಾವುದೇ ಕ್ರಿಮಿನಲ್ ಚಟುವಟಿಕೆ ಇಲ್ಲದವರ ಹೆಸರು ಮೇಲಾಧಿಕಾರಿಗಳಿಗೆ ಕಳಿಸುತ್ತಾರಾದರು ಅವರಾರು ರಿಸ್ಕ್ ಯಾಕೆ ಅಂತ ಕೈ ಬಿಡುವುದಿಲ್ಲ.
ಠಾಣೆಗೆ ಹೊಸ ಅಧಿಕಾರಿ ಬಂದಾಗ, ಚುನಾವಣೆ ಬಂದಾಗೆಲ್ಲ Rowdy ಪೆರೇಡ್ ನಡೆಸುತ್ತಾರೆ ಅಲ್ಲಿ ಕೆಲ ಅಧಿಕಾರಿಗಳು ಸಾರ್ವಜನಿಕವಾಗಿ ಅವಮಾನಿಸುವ ಕೆಲಸ ಕೆ ಮಾಡುತ್ತಾರೆ ಅಂತಹ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡುವುದು ಈಗ ಸಾಮಾನ್ಯವಾಗಿದೆ ಇದು ರವಡಿ ಪಟ್ಟಿಯಲ್ಲಿ ರಾಜಕೀಯ ದ್ವೇಷಕ್ಕಾಗಿ ಸೇರಿಸಿದ ನಿರಪರಾದಿಗಳ ಆತ್ಮವಿಶ್ವಾಸ ಕುಂದಿಸುವ ಕೆಲಸ ಮಾತ್ರ ಆಗುತ್ತದೆ, ಇದಕ್ಕಾಗಿ ಇಲಾಖಾ ಸಿಬ್ಬಂದಿಗಳಿಗೆ ಅನಾವಶ್ಯಕ ಹೆಚ್ಚುವರಿ ಕೆಲಸ ಬೇರೆ.
ಗೃಹ ಸಚಿವರಾಗಿ ಆರಗ ಜ್ಞಾನೇ೦ದ್ರ ಆಯ್ಕೆ ಆದಾಗ ಅವರಿಗೆ ಅಭಿನಂದನೆ ಜೊತೆ Rowdy ಪಟ್ಟಿ ಪರಿಷ್ಕರಣೆಗೆ ಒತ್ತಾಯಿಸಿದ್ದೆ ಅದನ್ನು ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದ ಬಹುದು
https://arunprasadhombuja.blogspot.com/2022/01/roudy.html
ಮಲೆನಾಡಿನ ಒಂಟಿ ಮನೆಗಳ ರಕ್ಷಣೆಗೆ ಸರಳವಾಗಿ ಬಂದೂಕು ಲೈಸೆನ್ಸ್, ಗ್ರಾಮೀಣ ಬಾಗದ ರಸ್ತೆ ವೃತ್ತಗಳಲ್ಲಿ ಸಿಸಿಟಿವಿ ಅಳವಡಿಕೆ, ಪ್ರತಿ ಮನೆಗಳಲ್ಲೂ ಸಿಸಿ ಟೀವಿ ಮತ್ತು ಸಾಕು ನಾಯಿ ಸಾಕುವಂತೆ ಸ್ಥಳಿಯ ಗ್ರಾಮ ಪಂಚಾಯತಿ ಮತ್ತು ಪೋಲಿಸ್ ಇಲಾಖೆ ಜಂಟಿ ಆಗಿ ಜನಜಾಗೃತಿ ಮಾಡುವುದು, ಪೋಲಿಸ್ ಇಲಾಖೆ ಆಂತರಿಕ ಮಾಹಿತಿಗಾಗಿ ಸ್ಥಳಿಯರ ಬಳಸಿಕೊಳ್ಳುವ ಬಗ್ಗೆ ಸಾರ್ವಜನಿಕವಾಗಿ ವಿನಂತಿ ಕೂಡ ಮಾಡಿದ್ದೆ.
ಈ ಸಂದರ್ಭದಲ್ಲಿ 1999 ನೇ ಇಸವಿಯಿಂದ 2017ರ ವರೆಗೆ ಸುಮಾರು 18 ವರ್ಷ ನಾನು Rowdy list ನಲ್ಲಿದ್ದೆ ಇದೇ ರೀತಿ ಶಿವಮೊಗ್ಗದ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷರಾಗಿದ್ದ ತೀ.ನಾ. ಶ್ರೀನಿವಾಸ್ ರ ಹೆಸರು ಇತ್ತು, ಈಗಿನ ಬಿಜೆಪಿ ಜಿಲ್ಲಾ ಅಧ್ಯಕ್ಷರಾದ ಟಿ.ಡಿ.ಮೇಘರಾಜರ ಹೆಸರು ಇತ್ತು.(ಆಯಾ ಕಾಲದಲ್ಲಿ ಅವರ ಸರ್ಕಾರಗಳಿದ್ದಾಗ ಕೈ ಬಿಡುವ ಶಿಪಾರಸ್ಸಿಂದ ಹೆಸರು ತೆಗೆಸಿರುತ್ತಾರೆ).
ಶಿವಮೊಗ್ಗ ಜಿಲ್ಲೆಯಲ್ಲಿ ಮುಖ್ಯ ಮಂತ್ರಿ ಆಗಿದ್ದ ಬಂಗಾರಪ್ಪ ಜೆ.ಹೆಚ್ ಪಟೇಲರ ಹೊರತು ಪಡಿಸಿ ಎಲ್ಲಾ ರಾಜಕಾರಣಿಗಳು ತಮ್ಮ ರಾಜಕಾರಣದ ವಿರೋದಿಗಳನ್ನು ಬಗ್ಗು ಬಡಿಯಲು ಈ ಅಸ್ತ್ರ ಬಳಸಿಕೊಂಡವರೆ!...
ಯಾರು ರಾಜಕಾರಣದಲ್ಲಿ ತನಗೆ ಎದುರಾಳಿ ಆಗುತ್ತಾನೆ ಎಂಬ ಅನುಮಾನ ಉಂಟಾದಾಗ ಆಡಳಿತಾರೂಡ ರಾಜಕಾರಣಿಗಳ ಬಗಲಿಗಳು (ಪರಿವಾರದವರು) ಸತತ ಸುಳ್ಳು ಕೇಸು ದಾಖಲಿಸಲು ಪ್ರಾರಂಬಿಸಿ 10-20 ಕೇಸ್ ಆದ ಮೇಲೆ ಪೋಲಿಸ್ ಇಲಾಖೆ ಮೇಲೆ ಪ್ರಬಾವ ಬೀರಿ ರವಡಿ ಲೀಸ್ಟ್ ಗೆ ಸೇರಿಸಿ ಬಿಡುತ್ತಾರೆ ಈ ಮೂಲಕ ನಾಗರೀಕ ಸಮಾಜದಲ್ಲಿ ನಿಕೃಷ್ಟನಾಗಿಸಿ ಸದೆಬಡೆಯುವ ಮುರಾ ಮೋಸದ ತಂತ್ರ ಇದು.
ನನ್ನನ್ನು ಈ ಪಟ್ಟಿಯಲ್ಲಿ ಸೇರಿಸಲು ಕಾರಣ ನಮ್ಮ ತಾಲ್ಲೂಕಿನಲ್ಲಿ ನಾನು ವಿಧಾನ ಸಭಾ ಚುನಾವಣೆಗೆ ಸ್ಪರ್ದಿಸಿದ್ದು, ಸಂಘಟನೆ ಮತ್ತು ಭಾಷಣದಲ್ಲಿ ಯಾರೇ ಮುಂದಾಗಿದ್ದರೆ ಅವರ ಕಾಲು ಎಳೆಯುವ ಕೆಲಸ ಆಡಳಿತರೂಡರ ಅರ್ಹತೆ ಇಲ್ಲದ ಬೆಂಬಲಿಗರ ಕೆಲಸ ಇದು.
ಕಾಲ ಬೆರಳಿಂದ ತಲೆ ಕೂದಲವರೆಗೆ ಅಪ್ಪಟ ಚಿನ್ನ ಆಗಿರುತ್ತಿದ್ದ ನಾಯಕರ ಕಿವಿ ಮಾತ್ರ ಹಿತ್ತಾಳೆ ಎಂಬ ಗಾದೆಯಂತೆ ಅವರ ವಿರುದ್ಧ ಚುನಾವಣೆಗೆ ಸ್ಪರ್ದಿಸಿದ್ದರಿಂದ ಅಧಿಕಾರ ಉಳ್ಳ ಮಂತ್ರಿಗಳಾಗಿದ್ದ ನಾಯಕರ ಒಂದು ಇಷಾರೆ ಸಾಕು ಇಂತಹ ಪಟ್ಟಿಗೆ ಸೇರಿಸಲು ಇದಕ್ಕೆ ತಾಂತ್ರಿಕವಾಗಿ ಒ0ದಿಷ್ಟು ಕೇಸಿನಲ್ಲಿ ಹೆಸರು ಸೇರಿಸುತ್ತಾರೆ.
ನನ್ನ ಮೇಲೆ ಪಟ ಪಟಾಂತ 1999 ರಲ್ಲಿ 23 ಕೇಸುಗಳು ದಾಖಲಾಯಿತು, ಠಾಣೆಯ ಸಜ್ಜನ ಅಧಿಕಾರಿಗಳು ಹೇಳಿದ್ದರು ನಿಮ್ಮ ಮೇಲೆ ಇಂತಹ ಪ್ರಯತ್ನಗಳು ನಡೆಯುತ್ತಿದೆ ನಾಯಕರಿಗೆ ಶರಣಾಗಿ ಅಂತ, ಆಗಿನ ಜಿಲ್ಲಾಧಿಕಾರಿಗಳು ಕೂಡ ನನಗೆ ಅವರೊಡನೆ ರಾಜಿ ಆಗಿ ಅಂದಿದ್ದರು ಆದರೆ ನಾನು ಬಂದದ್ದೆಲ್ಲ ಬರಲಿ ಅಂತ ಅಚಲನಾಗಿ ನಿಂತಿದ್ದು ಮುಂದಿನ 17 ವರ್ಷ ನರಕಯಾತನೆಗೆ ಕಾರಣ ಆಯಿತು.
ಶರಣಪ್ಪ ಎಂಬ ಐಪಿಎಸ್ ಅಧಿಕಾರಿ ಸಾಗರದ ಎಸಿಪಿ ಆಗಿ ಬಂದಾಗ ಇಂತಹ Rowdy ಪೆರೇಡ್ ನಲ್ಲಿ ನನ್ನ ಕೇಸಿನ ಬಗ್ಗೆ ಕೇಳಿದಾಗ ರಾಜಕೀಯ ದ್ವೇಷದಿಂದ ಮತ್ತು ವಿದಾನ ಸಭಾ ಚುನಾವಣೆಗೆ ಸ್ಪರ್ದಿಸಿದ್ದರಿಂದ ಸೇಡು ತೀರಿಸಿಕೊಳ್ಳಲು ನನ್ನನ್ನು 1999ರಿಂದ ಸೇರಿಸಿದ್ದಾರೆ ಎಂದಾಗ... ಅವರು ನಂಬಲಿಲ್ಲ,Rowdy ಗಳೆಲ್ಲ ಕ್ರಿಮಿನಲ್ ಗಳೆಂಬ ನಂಬಿಕೆ ಚಾಲ್ತಿಯಲ್ಲಿತ್ತು.... ಆಗ ಅಲ್ಲಿದ್ದ ಸರ್ಕಲ್ ಇನ್ಸ್ಪೆಕ್ಟರ್ ಗೆ ವಿಚಾರಿಸಿದರು ಅವರು 1999ರ ನಂತರ ಸೇರಿಸಿದ ಬಗ್ಗೆ ಮತ್ತು ನನ್ನ ರಾಜಕೀಯ ಜನಪರ ಹೋರಾಟದ ಬಗ್ಗೆ ವಿವರಿಸಿದರು ಆಗ ಶರಣಪ್ಪನವರು ಪಟ್ಟಿಯಿಂದ ಹೆಸರು ಕೈಬಿಡಲು ಶಿಪಾರಸ್ಸು ಮಾಡುವುದಾಗಿ ತಿಳಿಸಿ ಮುಂದಿನ ಕ್ರಮಕ್ಕಾಗಿ ಕಡತ ಶಿವಮೊಗ್ಗ ರಕ್ಷಣಾಧಿಕಾರಿಗಳ ಕಛೇರಿ ತಲುಪಿತು.
ಅಲ್ಲಿಯೂ ಪರಿಷ್ಕರಣೆ ನಿರಾಕರಿಸಲ್ಪಟ್ಟಿತಂತೆ ಆದರೆ ನನಗೆ ಗೊತ್ತಿಲ್ಲದಂತೆ ನನ್ನ ಕೆಲ ಗೆಳೆಯರು, ಪೋಲಿಸ್ ಅಧಿಕಾರಿಗಳು ಮತ್ತು ಶಿವಮೊಗ್ಗದ ಆಗಿನ ಶಾಸಕರಾಗಿದ್ದ ಪ್ರಸನ್ನ ಕುಮಾರರಿಂದ ನನ್ನ ಹೆಸರನ್ನು ಮಾತ್ರ ಕೈ ಬಿಟ್ಟು ಹಿಂಬರಹ ಕೊಡಿಸಿದ್ದರು.
ಆಗ ಸಾಗರದಲ್ಲಿ ಪೆರೇಡ್ ನಲ್ಲಿ ಇರುತ್ತಿದ್ದವರೆಲ್ಲ ಸಮಾಜ ಘಾತುಕರಾಗಿರಲಿಲ್ಲ, ಮಟಕ ಚೀಟಿ ಬರೆದವರು, ಕಳ್ಳಬಟ್ಟಿ ಮಾರಾಟ ಮಾಡಿದ ಸಣ್ಣ ಅಪರಾದ ಮಾತ್ರ ಮಾಡಿದವರು ಮತ್ತು ರಾಜಕೀಯ ದ್ವೇಷಕ್ಕಾಗಿ ಗ್ರಾಮ ಪಂಚಾಯತನ ಸದಸ್ಯರಾಗಿದ್ದವರ ಜೊತೆ ಏಕೈಕ ಜಿಲ್ಲಾ ಪಂಚಾಯತ್ ಸದಸ್ಯನಾದ ನಾನೂ ಇದ್ದೆ, ನಿಜವಾದ ಸಮಾಜಘಾತುಕರು ಗರಿ ಗರಿ ಖಾಧಿದಾರಿಗಳಾಗಿ ಮಂತ್ರಿ ಮಹೋದಯರ ಸುತ್ತಲೂ ಠೇಂಕರಿಸುತ್ತಿದ್ದರು.
ಈಗಲೂ ಏನೂ ಬದಲಾಗಿಲ್ಲ ಆದರೆ ಶಿವಮೊಗ್ಗ ಪೋಲಿಸ್ ಇಲಾಖೆ ಅಪರಾದ ಮಾಡಿದವರ ಸುಧಾರಣೆ ಮಾಡಲು ಅವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಮುಂದಾಗಿರುವುದು ನಮ್ಮ ಸಂವಿದಾನದ ಆಶಯ ಕೂಡ ಆಗಿದೆ.
Comments
Post a Comment