Skip to main content

Blog number 2248.ದಳವಾಯಿ ಲಿಂಗಣ್ಣನ ಮೊಮ್ಮಗಳು ಅಕ್ಕಮ್ಮನನ್ನ ಮಾಸ್ತಿಯಾಗಿಸಿದ ದುಷ್ಟ ಜಾತಿವಾದಿ ಪಂಚಾಯಿತಿದಾರರು.

#ಬಿದನೂರು_ನಗರದ_ಸುದೀಂದ್ರ_ಭಂಡಾರಕರ್_ಬರೆದ_ಕಾದಂಬರಿ

#ಸಶೇಷ

#ಕೆಳದಿ_ಇತಿಹಾಸದ_ಆಸಕ್ತರು_ಒದಲೇ_ಬೇಕು

#ಇದರಲ್ಲಿನ_ದಳವಾಯಿ_ಅಕ್ಕಮ್ಮ_ಮಾಸ್ತಿಯಾದ_ಕಥೆ

#ಆಗಿನ_ಕಟ್ಟೆ_ಪಂಚಾಯ್ತಿಯ_ಅಮಾನುಷ_ತೀರ್ಪು

#ಲಿಂಗಾಯಿತ_ಅಕ್ಕಮ್ಮ_ದೀವರ_ಮಂಡಾನಿ_ಯುವಕನ_ವಿವಾಹ_ಮಾಡಿಸುತ್ತಾರೆ

#ಮರುಕ್ಷಣದ_ತೀರ್ಪು_ದೀವರ_ಮಂಡಾನಿ_ಯುವಕನಿಗೆ_ನೇಣು

#ಮರಣದಂಡನೆ_ಜಾರಿ_ಮರುಕ್ಷಣದ_ತೀರ್ಪು_ಅಕ್ಕಮ್ಮನ_ಸಹಗಮನ.

ಸಶೇಷ ಕಾದಂಬರಿಯ ಈ ಪುಟಗಳು ಒಮ್ಮೆ ಓದಿ....
    ಶೇಷ...ಹಲವೊಮ್ಮೆ ಇತಿಹಾಸದ ಸಂಗತಿಗಳು ,  ಧಾರ್ಮಿಕ ನಡಾವಳಿಗೆ , ಇಂದಿನ ಆರೂಢಪ್ರಶ್ನೆ ಮುಂತಾದಕ್ಕೆ ಒಳಗಾಗಿ ಬದಲಾಗಿ ಹೋಗಿದೆ .ಪ್ರಶ್ನೆಗಳ ಉತ್ತರ ಸರಿಯಾಗಿ ಬಂದರೂ ಅದನ್ನು ಅರ್ಥೈಸುವ ಶಕ್ತಿ ಸೋತಿದೆ .

ಇದು ನೋಡು ಅಕ್ಕಮ್ಮನಗುಡಿ .ಪಕ್ಕದಲ್ಲೇ ಅಂದಿನ ಸಾಕ್ಷಿ ಮರಗಳು .ಕೂಗಳತೆಯ ದೂರದ ಶಿವಲಿಂಗನ ಗುಡಿ .ಅಕ್ಕಮ್ಮನ ಗುಡಿಯ ಗಡಿಯಲ್ಲಿ ಮಾಸ್ತಿಕಲ್ಲು .

ಅಕ್ಕಮ್ಮ .... ಹಿಂದೆ ಅಳಿದುಹೋದ ದಳವಾಯಿ ಲಿಂಗಪ್ಪನ ವಂಶದವಳು . 
 ಇದೇ ಕರಿಂಗೋಳಿ ಹೊಸವೆ ಮಾರ್ಗದ ದೇವರಸಲ್ಲಿಕೆಗುಡ್ಡ , ಸಿಡಿಕುಣಿಭೂತದಗುಡಿ , ಕುಂಟಿಗೆ ...ವಾರಂಬಳ್ಳಿ ಹೋಗುವ ಮಾರ್ಗದ ವರಕೋಡು - ಕೋಟೆಕಾನು  ಇದೆ .ಆಚೆ ಕೋಟೆಕಾನು ಹಳ್ಳ .

ಅದಾಗ ಟಿಪ್ಪುವಿನ ಅಂತ್ಯವಾಗಿದೆ .ಮೈಸೂರಿನವರ ಆಡಳಿತ ಇದೆ . ಮುಗಿದ ಬಿದನೂರು ಸಾಮ್ರಾಜ್ಯದಲ್ಲಿ ಯಾರು ಬಲಿಷ್ಠರೋ ಆ ಜಮೀನ್ದಾರನದೇ ಸುಬೇದಾರಿಕೆ . ಆ ಗ್ರಾಮ ಹೇಳಿಕೇಳಿ ಬಲಿಷ್ಠ ದೀವರು - ಶೈವ ದಳವಾಯಿಗಳ ಪ್ರದೇಶ . ಅದುವರೆಗೂ ಅನ್ಯೋನ್ಯವಾಗಿದ್ದರು .

ಇಲ್ಲಿದ್ದರು ದಳವಾಯಿ ವಂಶದ ಸೋದರರು.... ಅಣ್ಣ ಶಿವಪ್ಪ ಗೌಡ ..ತಮ್ಮ ವೀರಭದ್ರಪ್ಪ ಗೌಡ .

ಶಿವಪ್ಪ ಸಾಧು , ಸಾತ್ವಿಕ . ಪತ್ನಿ , ಒಂದು ಗಂಡು , ಒಂದು ಹೆಣ್ಣು ಮಗುವಿನ ಸಂಸಾರ .

ಅದೇ ವೀರಭದ್ರಪ್ಪ ಇದಕ್ಕೆ ತದ್ವಿರುದ್ಧ .ದರ್ಪ , ದೌರ್ಜನ್ಯದ ಅಹಂಕಾರಿ .ಕ್ರೂರಿ , ದುಷ್ಟ .ಇಂತಹ ಕಾಲದಲ್ಲಿ ಶಿವಪ್ಪ ತೀರಿಕೊಳ್ಳುತ್ತಾನೆ .ಆತನ ಸಂಸಾರ ಈ ದುಷ್ಟನ ಅಡಿಯಲ್ಲಿ ಬಾಳಬೇಕಾಗುತ್ತದೆ .ಈತನ ದೌರ್ಜನ್ಯ ಅತ್ತಿಗೆಯ ಸಂಸಾರದ ಮೇಲೆ ಪ್ರಾರಂಭ ಆಗುತ್ತದೆ .ಸಣ್ಣ ಬಾಲಕನಾದ , ಅಣ್ಣನ ಮಗನನ್ನು ಕೋಣ ಮೇಯಿಸಲು ಹಾಕುತ್ತಾನೆ .

ಇದೇ ಆಷಾಡದ ಮಳೆ . ಅಗೆಗದ್ದೆ ಅಂಚಿನಲ್ಲಿ ಬಾಲಕ ಕೋಣ ಮೇಯಿಸುತ್ತಿದ್ದ .ಆಟ ಆಡುವ ವಯಸ್ಸು .ಪಾಪ....ಅದು ಯಾವ ಗಳಿಗೆಯಲ್ಲಿ ಕೋಣಗಳು ಗದ್ದೆ ತಿಂದವೋ !?  ಅವನ ಗ್ರಹಚಾರಕ್ಕೆ ವೀರಭದ್ರಪ್ಪನ ಕಣ್ಣಿಗೆ ಬಿತ್ತೋ ?

ಮೊದಲೇ ಕ್ರೂರಿ....ದುಷ್ಟ .ಬಂದವನೇ ಹುಡುಗನ ಕಪಾಳಕ್ಕೆ ಹೊಡೆದೇ ಬಿಟ್ಟ . ಸದ್ದೇ ಮಾಡದೆ ಹುಡುಗ ಕೆಸರಿನ ಗದ್ದೆಗೆ ಉರುಳಿದ .

ಶೇಷ....ಹುಡುಗನ ಉಸಿರೇ ನಿಂತು ಹೋಯಿತು .ಕೆಸರ ಕಂಪದಲ್ಲಿ ಹುಡುಗನ ದೇಹ .ಅತ್ತಿತ್ತ ನೋಡಿದ ಗೌಡ....ಕಾಲೆತ್ತಿ ಅಲ್ಲಿಂದಲ್ಲಿಗೆ ಉಸಿರು ನಿಂತ ಸತ್ತ ಬಾಲಕನ ದೇಹವನ್ನು ಎಡಗಾಲಿನಿಂದ ಮೆಟ್ಟಿ ,ಮೆಟ್ಟಿ ,ಹಾಗೇ ಕೆಸರಿನ ಆಳದಲ್ಲಿ ಅಲ್ಲೆಂದರೆ ಅಲ್ಲೇ  , ಬರಿಗಾಲಲ್ಲೇ ಆಳಕ್ಕೆ ಕಳಿಸಿಯೇ ಬಿಟ್ಟ  . ಮತ್ತೆ ಅತ್ತಿತ್ತ ನೋಡಿದಾಗ ಹಸಲರ ಒಬ್ಬ ಆಳು ಬಿಟ್ಟ ಕಣ್ಣಿಂದ ಇದನ್ನು ನೋಡಿ ಬಿಟ್ಟಿದ್ದಾನೆ .ಹೆಗಲ ಮೇಲಿನ ಮೀನಿನ ಗಾಣ ಮರೆತೇ ಹೋಗಿದೆ .ಗೌಡ ಅವನನ್ನು ಬೆದರಿಸಿ ,ದಿನವಹಿ ಹೆಂಡದ ಆಸೆ ತೋರಿಸಿ ಬಾಯಿ ಮುಚ್ಚಿಸುತ್ತಾನೆ .

 ದಳವಾಯಿ ಲಿಂಗಪ್ಪನ ಮರಿಮರಿಮಗ ಕೆಸರಿನಲ್ಲೇ ಅಂತ್ಯಕಂಡರೆ ....ಅಕ್ಕಮ್ಮನ  ಕಥೆ  , ದುರ್ದೇಶೆ ಇಲ್ಲೇ ಪ್ರಾರಂಭವಾಗುತ್ತದೆ ....

ಅಕ್ಕಮ್ಮ ...ಮಾಸ್ತಿಯಾದ ಕತೆ , ಬಿಚ್ಚಿಕೊಳ್ಳುತ್ತದೆ.
ಶೇಷ.....ಸಂಜೆಗೆ ಕೋಣಗಳು ಕೊಟ್ಟಿಗೆಯಲ್ಲಿವೆ , ಆದರೆ ಹುಡುಗನಿಲ್ಲ .ತಾಯಿ ಕೇಳಿದರೆ ಗೌಡ ಏನೂ ಅರಿಯದಂತೆ ಅಜ್ಜಿಮನೆಗೆ ಹೋಗಿರಬೇಕು ಎಂದ !

ಬೆಳಗಾಯಿತು...ಅಜ್ಜಿ ಮನೆಯಲ್ಲೂ ಇಲ್ಲ . ಊರೆಲ್ಲಾ ಹುಡುಕುವ ನಾಟಕ ನಡೆಯಿತು . ಹೆದರಿ ಅಡಗಿದನೇ ಎಂದಾಯಿತು .ಹಸಲರವ ಬಾಯಿ ಮುಚ್ಚಿಕೊಂಡಿದ್ದ .ಸಂಜೆಗೆ ಅವನಿಗೆ ಶೇಂದಿ ಖಾಯಂ ಆಯಿತು .

ಗೌಡ ಹೊಸ ಸುದ್ದಿ ಕಟ್ಟುತ್ತಾನೆ .ಹುಡುಗನನ್ನು ಕಾಡುಕುರಕ ಹೊತ್ತು ಒಯ್ಯಿತು ಎಂದು .ಅದರೂ ಅಕ್ಕಮ್ಮನೆಂಬ ಹನ್ನೊಂದರ ಹುಡುಗಿಯ ಕಟ್ಟಿಕೊಂಡು ತಾಯಿ ಊರೆಲ್ಲಾ ಹುಡುಕುತ್ತಾ ಆ ಹಸಲರ ಮನೆಯ ಹಿಂದೆ ಬರುತ್ತಿರುವಾಗ , ಕುಡಿದ ಮತ್ತಿನ ಆತ ತನ್ನ ಮಗನಿಗೆ ಬೈಯುತ್ತಾ ಇದ್ದಾನೆ ! 

" ಗೌಡರು , ಹುಡುಗನ್ನ ಕೊಂದ ಹಾಗೆ ನಿನ್ನ ಕೊಲ್ತೀನಿ , ಕಾಣು " !!!

ಅಕ್ಕಮ್ಮನ ತಾಯಿ ದಂಗಾಗುತ್ತಾಳೆ .ಮನೆಗೆ ಬಂದು ಗೌಡರ ಕೇಳಿದರೆ ಆತನದು ಅದೇ ನಾಟಕ .ಹಸಲರವ ಬಾಯಿ ಬಿಡಲ್ಲ . ಜಾತಿಯವರು ನಿಷ್ಠುರವಾಗಲ್ಲ .ಊರೆಲ್ಲ ಕೇಳಿಕೊಂಡರೂ ಒಬ್ಬರೂ ಮುಂದೆ ಬರಲ್ಲ!ಈಗ ಬೇಸಾಯದ ಸಮಯ .ಮುಂದೆ ಈ ವಿಚಾರ ನೋಡೋಣ ಎನ್ನುವ ಉತ್ತರ .

ಈಕೆ ನೇರ ತಲುಪಿದ್ದೇ ಮಂಡಾನಿಯ ದೀವರ ದೊಡ್ಡಮನೆಗೆ . ಯಜಮಾನರು ಇವಳ ಅಹವಾಲು ಕೇಳಿಕೊಂಡು ವಿಚಾರ ಪಡೆದು ಕೆಲಸ ನಿಮಿತ್ತ ಒಳ ಹೋದರೆ , ಅವರ ಮಗ ...ಚಿಗುರುಮೀಸೆಯ ಮಗ...ಕೋವಿ ಸ್ವಚ್ಛ ಮಾಡುತ್ತಾ , ನೇರಾನೇರ ಕೇಳುತ್ತಾನೆ .

" ಆ ಗೌಡನ ಕೊಂದರೆ ಏನು ಕೊಡ್ತೀ ? "

" ನಾನೇನು ಕೊಡಲಿ .ನನ್ನ ಆಸ್ತಿಯೆಂದರೆ ಈ ಒಬ್ಬ ಮಗಳೇ .ಮತ್ತೇನಿದೆ... ಭೂಮಿ, ಆಸ್ತಿ ಎಲ್ಲಾ ಗೌಡರ ಪಾಲಾಗಿದೆ ...ಈ ನನ್ನ ಮಗಳನ್ನೇ ನಿನಗೆ ಧರ್ಮಧಾರೆ ಎರೆಯುವೆ "

" ಸರೀ...ಇದೇ ರಣವೀಳ್ಯ "

ಏನೂ ಅರಿಯದ ಅಕ್ಕಮ್ಮನ ಹೆಸರಲ್ಲಿ ರಣವೀಳ್ಯ ಪಡೆದ ಮಂಡಾಣಿಯ ಯುವಕ ಮುಂದೇನಾಗ ಬಹುದೆಂಬ ಯೋಚನೆ ಮಾಡಲಿಲ್ಲ .

ಅಕ್ಕಮ್ಮನ ತಾಯಿ ಕೂಡ !

ಮರುದಿನ ಗೌಡರ ಐವತ್ತು ಆಳಿನ ನೆಟ್ಟಿ . ಹಾಳಿಯ ಮೇಲೆ ಗೌಡರು ...ಇತ್ತ ಕೋವಿ ಹಿಡಿದ ಮಂಡಾಣಿಕುಡಿ.

" ಗೌಡರೇ...ಇದೆಂತಾ ಕಂಪದಗದ್ದೆ !  ಇಡೀ ಹೆಣಹುಗಿದರೂ ಗೊತ್ತಾಗಲ್ಲ "

ಗೌಡರು ಸಾವರಿಸಿಕೊಂಡು ಕೇಳುತ್ತಾರೆ " ತಮ್ಮ,  ಎತ್ತ ಹೊಂಟಿಯೋ ? "

" ಅದೇ...ಇಲ್ಲೆಲ್ಲೋ ಕಾಡುಕುರಕ ಇದೆಯಂತೆ .ನೀವೇ ಹೇಳಿದರಂತೆ !  ಅದ ಶಿಕಾರಿ ಮಾಡಲು ಹೊಂಟೆ " ಎಂದು ಮೀಸೆಯಲ್ಲೇ ನಕ್ಕ .

ಗೌಡರ ಮುಖ ಕಪ್ಪಿಟ್ಟಿತು .ಮಾತು ಮುಂದುವರಿಸಲಿಲ್ಲ .ತಗ್ಗಿಸಿದ ತಲೆ ಮೇಲೆತ್ತುವಷ್ಟರಲ್ಲಿ ಮಂಡಾಣಿಕುಡಿ , ಗೌಡರೆದೆಗೆ ಕೋವಿ ಈಡು ಢಂ ಎನಿಸಿ ಆಗಿತ್ತು . 

ಕಂಪದಗದ್ದೆಯ ಕೆಸರು ...ಕೆಂಪಾಯಿತು .ರಣವೀಳ್ಯ ....ಪೂರೈಸಿತು .

ದೀವರ ಹುಡುಗ , ಲಿಂಗಾಯತ ಗೌಡರ ಕೊಲೆ ಮಾಡಿದಯೆಂಬ ವಿಚಾರದಲ್ಲಿ ದೊಡ್ಡ ಗಲಾಟೆ ಆಯಿತು .ಆದರೇನು...ಬೇಸಾಯದ ಸಮಯ . ಕೊಲೆ ಮಾಡಿದ್ದು ಮಂಡಾಣಿ ಹುಡುಗ  . ಕಾರ್ತಿಕಮಾಸದಲ್ಲಿ ಈ ಬಗ್ಗೆ ಪಂಚಾಯತಿ ಮಾಡೋಣ ಎಂಬ ತೀರ್ಮಾನ ಆಯಿತು .

ಶೇಷ... ಇಲ್ಲಿ ಗೌಡರ ಸಾವಿಗಿಂತ ಜಾತಿಯ ವಿಷಬೀಜ ಚಿಗುರುತ್ತದೆ .ಇಡೀ ಮೂರು ತಿಂಗಳು ಎರಡೂ ಜಾತಿಗಳ ನಡುವೆ ಚರ್ಚೆ ನಡೆಯುತ್ತದೆ .

ಕಾರ್ತಿಕ ಬಂತು . ದಶಮಿಯ ದಿನ .ಊರಿನ ಶಿವನ ಸನ್ನಿಧಿಯಲ್ಲಿ ಪಂಚಾಯತಿಗೆ ಊರೆಲ್ಲಾ ನೆರೆದಿದೆ .

ಅಕ್ಕಮ್ಮನನ್ನು ಕಂಕುಳಲ್ಲಿ ಹಿಡಿದ ತಾಯಿ , ತಾನು ರಣವೀಳ್ಯ ಕೊಟ್ಟ ವಿಚಾರ , ಗೌಡನು ತನ್ನ ಮಗನಕೊಂದ ವಿಚಾರ ಕಟ್ಟೆಗೆ ತಿಳಿಸಿದಳು .

ಮಂಡಾಣಿಕುಡಿಯೂ ಒಪ್ಪುತ್ತಾನೆ .ಬೇರೆ ದುರುದ್ದೇಶ ಇಲ್ಲದೆ ಹುಡುಗ  ಗೌಡರ ಜೀವ ತೆಗೆದ , ಎಂದಿತು ಕಟ್ಟೆ !

ಹುಡುಗಿಯ ಆಮೀಷ ತೋರಿದ್ದರಿಂದ ನಮ್ಮ ಹುಡುಗ ಕೊಲೆ ಮಾಡಿದ ಎಂದಿತು , ದೀವರ ಗುಂಪು

ಸರಿ , ಮಾತಿನಂತೆ ಅಕ್ಕಮ್ಮನ ಜೊತೆ ಹುಡುಗನ ಮದುವೆಯಾಗಲಿ ಎಂದಿತು , ಪಂಚಾಯತಿ !

ಹಾರ , ಅರಶಿನಕೊಂಬು ತಂದು ಕಟ್ಟಿಸಿಯೇ ಬಿಡುತ್ತಾರೆ .ಕಕ್ಕಾಬಿಕ್ಕಿಯಾಗುತ್ತಾಳೆ , ಅಕ್ಕಮ್ಮ!

ಏನೆಂದು ತಿಳಿಯದ ಆಕೆ ಕಣ್ಣೀರಾಗುತ್ತಾಳೆ .ಹನ್ನೊಂದರ ಹುಡುಗಿ ತಾಯಿ ಮಾಡಿದ ವಾಗ್ದಾನಕ್ಕೆ ತುತ್ತಾಗುತ್ತಾಳೆ .

ಶಿವಲಿಂಗದ ಮುಂದಿನ ಬಸವ ತಣ್ಣಗೆ ಕುಳಿತಿದ್ದಾನೆ .ಮುಂದಾಗುವುದೇ ಘೋರ .

ಪಂಚಾಯತಿ ಮತ್ತೊಂದು ತೀರ್ಪು ನೀಡುತ್ತದೆ .

" ಕೊಲೆಗಾರ ಮಂಡಾಣಿಯ ಹುಡುಗನನ್ನು ನೇಣಿಗೆ ಹಾಕುವುದು  "

ಸರ್ವರೂ ನೋಡು ನೋಡುತ್ತಲೇ , ಅತ್ತಲಿನ ಮಾವಿನಮರಕ್ಕೆ ಒಯ್ದು ಹುಡುಗನಿಗೆ ನೇಣು ಹಾಕಿಯೇ ಬಿಟ್ಟರು !

ಕುಡಿಮೀಸೆಯ ಯುವಕ , ಹೆಣವಾದ !

ಅಮಾಯಕ ಅಕ್ಕಮ್ಮ , ವಿಧವೆ !

ಸಮೂಹ ಸನ್ನಿ ಇಲ್ಲಿಗೇ ಮುಗಿಯಲಿಲ್ಲ , ಶೇಷ ...ಅಂದು ಹದಿನೇಳರ ಚೆನ್ನಮ್ಮನು ಯಾವುದನ್ನು ವಿರೋಧಿಸಿ  , ಸಾವನ್ನು  , ಜನರ ಮನವನ್ನೂ ಗೆದ್ದಿದ್ದಳೋ ...ಆ  ಸಹಗಮನಕ್ಕೆ ಇಲ್ಲಿ ನಡೆಯಿತು . ತಮ್ಮ ಹುಡುಗ ನೇಣಾದ ಬಗ್ಗೆ ಕನಲಿದ ದೀವರು , ನಿಮ್ಮ ವಿಧವೆ ಹುಡುಗಿ ಸಹಗಮನ ಮಾಡಲಿ ಎಂದು ಲಿಂಗಾಯತರಿಗೆ ಒತ್ತಾಯಿಸಿತು.

ಪತಿ ಮಂಡಾಣಿಯ ದೀವರ ಹುಡುಗನ ಜೊತೆ , ಅಕ್ಕಮ್ಮನೂ ಸಹಗಮನ ಮಾಡಲಿ ಎಂದಿತು , ಶಿವನದೇವಾಲಯದ ಮುಂದಿನ ಪಂಚಾಯತಿ ಯ ದೀವರು ..

ಆಗ ಅಕ್ಕಮ್ಮನಲ್ಲಿ ಕೊನೆಯ ಕೊಸರಾಟ ಜಾಗೃತವಾಗುತ್ತದೆ .ವಿರೋಧಿಸುತ್ತಾಳೆ .ಪ್ರತಿಭಟಿಸುತ್ತಾಳೆ .ಶಾಪ ಹಾಕುತ್ತಾಳೆ ," ಯಾರನ್ನೂ ಕಾಯದ ಈ ದೇವರು , ಮಠ  ಸರ್ವನಾಶವಾಗಲಿ "

ಏನೂ ಅರಿಯದ ಮುಗ್ಧ ಜೀವವೊಂದು ...ಕ್ಷಣದ ಹಿಂದೆ ತಾಳಿ ಕಟ್ಟಿದ ಪತಿಯೆಂಬಾತನೊಡನೆ ಜೀವಂತವಾಗಿ ಮರಕ್ಕೆ ಕಟ್ಟಲ್ಪಟ್ಟು  ದೀವರ ಪದ್ದತಿಯಂತೆ ಸುಡಲ್ಪಡುತ್ತಾಳೆ.. ....ಶೇಷ .

ಆಕೆಯ ಶಾಪ ಮುಂದೆ ಕ್ಯಾಪ್ಟನ್ ಸ್ಮೋಕ್ಸ ರೂಪ ತಾಳುತ್ತೋ ಏನೋ...ಶೇಷ.

ಮಂಡಾಣಿಯ ಸುತ್ತಮುತ್ತಲಿನ ದೀವರು ಮುಂದೆ ಅಕ್ಕಮ್ಮನಿಗೆ ಜಕಣಿ ಕೂರಿಸುವ ಕಾರ್ಯ ಮಾಡಿ ಸ್ಥಾನ ಕೊಡುತ್ತಾರೆ  .ಅಕ್ಕಮ್ಮ ಮಾಸ್ತಿಯಾಗುತ್ತಾಳೆ ....ಹುಡುಗನಿಗೆ ಒಂದು ಕಲ್ಲು ಹುಗಿದು ಸ್ಥಾನ ಕೊಡುತ್ತಾರೆ .

ಇತಿಹಾಸ ನಂತರ ಅನೇಕ ತಿರುವು ಪಡೆದು , ಹೊರಳಿ ...ಮರಳಿ ಅಕ್ಕಮ್ಮನಿಗೆ ಒಂದು ಗುಡಿಯಾಗುತ್ತದೆ .ಈ ಘಟನೆಗೆ ಬೇರೆ ಬೇರೆ ಆಯಾಮಗಳು ಬೆರೆತು , ಕತೆ ಹರಿದಾಡುತ್ತದೆ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...