Skip to main content

ಹಾಸ್ಯ ನಟ ಬಾಲಕೃಷ್ಣ

ಇಂದು ಕನ್ನಡ ಚಿತ್ರರಂಗದ ಮಹಾನ್ ಕಲಾವಿದರಾದ ಟಿ.ಎನ್.ಬಾಲಕೃಷ್ಣ ಅವರ ಜನ್ಮದಿನ.ಆ ನಿಮಿತ್ತ ಬಾಲಣ್ಣ ಅವರ ಕುರಿತ ನನ್ನ ಲೇಖನ.

ಜನ್ಮದಿನ- ೧೯೧೧,ನವೆಂಬರ್ ೨, ಗುರುವಾರ.
ನಿಧನ - ೧೯೯೫, ಜುಲೈ ೧೯, ಬುಧವಾರ.

ಕನ್ನಡಕ್ಕೊಬ್ಬರೇ ಬಾಲಣ್ಣ.

ಆಂ,"ಏನ್ ಸರಸ್ವತಮ್ನೋರೆ,ಜ್ಞಾಪಕ ಇದ್ಯೇ,ಆ ಹಾವಿಗೆ12ವರ್ಷ ದ್ವೇಷವಾದರೆ,ಈ ವೆಂಕಟಪ್ಪ ನಾಯಕನಿಗೆ24ವರ್ಷ,24ವರ್ಷ ದ್ವೇಷ....."ಏನ್ ರೇಂಜ್ ಸಾಹೇಬ್ರೇ,ಇದುವರ್ಗೂ ನಡೆದ ಗಂಡಾಂತರದಿಂದ ನೀವು ತಪ್ಪಿಸ್ಕೊಂಡುಬಿಟ್ರಿ,ಆದರೆ ಈಗ.."

ಹೀಗೆ ಖದರ್ ಆಗಿ ಗರ್ಜಿಸುವ ವೆಂಕಟಪ್ಪ ನಾಯಕ, ನಾಯಕನ ಕುರುಡುತನದ ಲಾಭ ಪಡೆದು ಮಜಾ ಉಡಾಯಿಸುವ  ಕಣ್ತೆರೆದು ನೋಡು ಚಿತ್ರದ ಮಸಾಲೆದೋಸೆ ದಾಸಣ್ಣ,ಮುರಿಯದ ಮನೆಯನ್ನು ಮುರಿಯುವ ಕುತಂತ್ರಿ ಬೊಂಬಾಯಿ ಬೋರ,ಬಂಗಾರದ ಪಂಜರ ಚಿತ್ರದ ವಾತ್ಸಲ್ಯಮಯೀ ಹಿರಿಯ,ನಮ್ಮ ಸಂಸಾರದ ಕುಟುಂಬದ ಸಂಭಾವಿತ ಲಕ್ಷ್ಮೀಪತಿ,ಸಂಪತ್ತಿಗೆ ಸವಾಲ್ ನ  ಒಕ್ಕಣ್ಣಾವತಾರಿ ಪುಟ್ಟಯ್ಯ, ಚಂದವಳ್ಳಿಯ ತೋಟದ ಮನೆಮುರುಕ ಕರಿಯಣ್ಣ,ಸಾಕ್ಷಾತ್ಕಾರದ ವಕೀಲ ಲಟಾಪಟಿ ಲಕ್ಷ್ಮಯ್ಯ , ಮಗಳ ಪ್ರೀತಿಗೆ ಅಳಿಯ ಅಡ್ಡಬಂದನೆಂದು ಇಬ್ಬರಮೇಲೂ ಸಿಡುಕುತ್ತಾ ಕೊನೆಗೆ ಅಳಿಯನ ಒಳ್ಳೆಯ ಮನಸ್ಸು ಕಂಡು ಕೊರಗಿ,ಕರಗಿ ನೇಣು ಹಾಕಿಕೊಂಡು ಸಾಯುವ ಸ್ವಕೇಂದ್ರಿತ ವಾತ್ಸಲ್ಯದ ಅಪ್ಪ,ಬಂಗಾರದ ಮನುಷ್ಯದ ರಾಚೂಟಪ್ಪ, ಕವಿರತ್ನ ಕಾಳಿದಾಸದ ಸ್ವಾರ್ಥಲಾಲಸೆಯ ಮಂತ್ರಿ... ಎಲ್ಲವನ್ನೂ ತನ್ನೊಳಗಿನ ಕಲಾಶ್ರೀಮಂತಿಕೆಯಿಂದ, ಧೀಮಂತಿಕೆಯಿಂದ ಬೆಳಗಿದ ಟಿ.ಎನ್ ಬಾಲಕೃಷ್ಣ ಕಿವುಡುತನದ ಸಮಸ್ಯೆ ಇದ್ದು ಹೀಗೆ ಅವರೇ ಹೇಳಿದಂತೆ "ಶವದ ಪಾತ್ರದಿಂದ ಹಿಡಿದು ಶಿವನ ಪಾತ್ರದವರೆಗೂ ತೋರಿರುವ ಅವರ ಪಾತ್ರಗಳ ವೈವಿಧ್ಯಕ್ಕೆ ಈಗ ಉಲ್ಲೇಖಿಸುವ  ಮಾತುಗಳು ಬಾಲಕೃಷ್ಣ ಅವರ ಪಾತ್ರಗಳ  ಬ್ರಹ್ಮಾಂಡ ಸಾಮರ್ಥ್ಯಕ್ಕೆ ಸಾಕ್ಷಿ ಕನ್ನಡಿಯಾಗಬಲ್ಲದು.

" ಚಿತ್ರ ಕೆಟ್ಟಿದೆ ಎಂದು ಯಾರಾದರೂ ಹೇಳಬಹುದಿತ್ತು,  ಆದರೆ ಬಾಲಣ್ಣನವರ ಪಾತ್ರ ಕೆಟ್ಟಿದೆ ಎಂದು ಹೇಳಲು ಯಾರಿಗೂ ಸಾಧ್ಯವಾಗುತ್ತಿರಲಿಲ್ಲ"-
ಅನಂತನಾಗ್.

ಗಂಡನ ಅನಾರೋಗ್ಯದ ಕಾರಣ- ತಾನೇ ಹೆತ್ತ ಮಗನನ್ನು ಬೇರೊಬ್ಬರಿಗೆ ೮ ರೂಪಾಯಿಗೆ ಮಾರಿದ ತಾಯಿ,ಅವಳ ಮತ್ತು ಅಪ್ಪನ ಹೆಸರು ಗೊತ್ತಿಲ್ಲದೇ ಬೆಳೆದ ಬಾಲಕೃಷ್ಣ ಮುಂದೆ ಕಿವುಡುತನಕ್ಕೆ ಒಳಗಾಗಿ,ಕೇವಲ ಇತರ ಪಾತ್ರಧಾರಿಗಳ ತುಟಿಚಲನೆಯನ್ನು ಗಮನಿಸಿ 1943ರ ರಾಧಾರಮಣ ದಿಂದ ಯಮಕಿಂಕರ ಚಿತ್ರದತನಕ 500 ಕ್ಕೂ ಅಧಿಕ ಪಾತ್ರಗಳಲ್ಲಿ ಮಿನುಗಿದವರು ಟಿ.ಎನ್.ಬಾಲಕೃಷ್ಣ.
ಕಿತ್ತುತಿನ್ನುತ್ತಿದ್ದ ಕಡುಬಡತನದಲ್ಲೇ ಬದುಕು ಅರಸಿದ ಅರಸೀಕೆರೆಯ ಬಾಲಣ್ಣ ನಾಟಕಕಂಪೆನಿಗಳ ಗೇಟ್ ಕೀಪರ್,ಬೋರ್ಡ್ ಬರೆಯುವ ಕೆಲಸ,ಇವೆಲ್ಲವನ್ನೂ ಉದರಂಭರಣಕ್ಕಾಗಿ ಮಾಡುತ್ತಲೇ ಗುಬ್ಬಿವೀರಣ್ಣ, ಪಂತುಲು ಅವರ ಕಣ್ಣಿಗೆ ಬಿದ್ದರು.ಕಾಲಚಕ್ರ ಎಂಬ ನಾಟಕದ ಸಾಹಿತ್ಯದ ಲ್ಲೂ ಕ್ಯೆಯಾಡಿಸಿದ್ದ ಬಾಲಣ್ಣನವರ ಶಾಲಾ ಜೀವನ-ಶಿಕ್ಷಣ ಅತಿ ಅಲ್ಪ.

ಗುಬ್ಬಿವೀರಣ್ಣನವರ ಕಂಪೆನಿಯ ಸ್ವತ್ತಾದ ಬಾಲಣ್ಣ ಅವರ ಸಾಹಿತ್ಯ ಸೃಜನಶೀಲತೆ ಅನೇಕ ನಾಟಕದ ಪಾತ್ರಗಳನ್ನು ಮಾಡಿಸಿತ್ತು.ಚಿತ್ರರಂಗಕ್ಕೂ ಹೊನ್ನಪ್ಪ ಭಾಗವತರ್ ಅವರು ನಾಯಕರಾಗಿದ್ದ ಪಂಚರತ್ನ ಚಿತ್ರಕ್ಕೆ ಚಿತ್ರಕಥೆ ಸಂಭಾಷಣೆ, ಗೀತೆ ಬರೆದು ಮಹಿರಾವಣ ದಲ್ಲೂ ಅದನ್ನು ಮುಂದುವರೆಸಿ ದ್ದರು.ಕಲಿತರೂ ಹೆಣ್ಣೇ ಎಂಬ ಚಿತ್ರ ನಿರ್ಮಾಪಕರಾಗಿದ್ದ ಬಾಲಣ್ಣ ಅವರು ಕಟ್ಟಿದ ಅಭಿಮಾನ್ ಸ್ಟುಡಿಯೊ ಇವೆಲ್ಲವೂ ಒಬ್ಬರ ಸಾಧನೆ ಎಂದರೆ ಅದೊಂದು ವಿಸ್ಮಯ, ಆದರೆ ಸತ್ಯಸ್ಯ ಸತ್ಯ.

ಶಾಲೆಯಲ್ಲಿ  ಹೆಚ್ಚು ಕಲಿಯದೆ ಹೋದ ಬಾಲಣ್ಣ ಬಾಲಕ  ಮುತ್ತುರಾಜನಿಗೆ (ರಾಜಕುಮಾರ್) ಅಕ್ಷರ ಕಲಿಸಿದ ಗುರು.
ಒಮ್ಮೆ ಬಾಲಕ ಮುತ್ತುರಾಜನಿಗೆ ಬಾಲಣ್ಣ" ಬಾಳೆಯ ತೋಟವನ್ನು ನೋಡು"ಎಂದು ಬರೆಯಲು ಕೊಟ್ಟರೆ ಚಿಕ್ಕ ಹುಡುಗ ಮುತ್ತುರಾಜ "ಇಬಳಯ ತಟವನು ನಡು ಅಂತ ಬರೆದ,ಸರಿ ಒತ್ತಕ್ಷರ ಇರದ ಪದಗಳನ್ನು ಕೊಟ್ಟರೆ ಹುಡುಗ ಬರೆಯಬಹುದು ಎಂದುಕೊಂಡ ಬಾಲಣ್ಣ ಮುತ್ತುಗೆ ಮತ್ತೊಂದು ಸಲ. ಗಾಬರಿಯಾಗಿದೆ..ಅನ್ನುವ ಪದ ಕೊಟ್ಟರು. ಮುತ್ತ ಗಬರಿಯಗದ್ದೆ ಅಂತ ಬರೆದ.ಕೋಪದಿಂದ ಬಾಲಣ್ಣ. ಮುತ್ತು ಕೆನ್ನೆಗೆ ಏಟು ಕೊಟ್ಟಾಗ ಅಲ್ಲಿಗೆ ಬಂದ ಮುತ್ತುರಾಜನ ಅಪ್ಪ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ನನ್ನ ಮಗನಿಗೆ ಹೊಡೀತೀರಾ ನೋಡ್ತಾ ಇರಿ ಅವನು ಭಾರೀ ಹೆಸರುಮಾಡ್ತಾನೆ ಅಂದಿದ್ದರು.ಮುತ್ತುರಾಜ ರಾಜಕುಮಾರ್  ಆಗಿ ಮಾಡಿದ ಸಾಧನೆ ನಮ್ಮ ಕಣ್ಣು ಮುಂದಿರುವ ಸತ್ಯ
ಗುಬ್ಬಿ ವೀರಣ್ಣ ಅವರು ತೀರಿಕೊಂಡಾಗ ಬರೆದ ತಿಂಗಳಾ ಬೆಳಕಾಗಿ,ದೇವಸುಂದರಿ ಚಿತ್ರಕ್ಕೆ ನರಸಿಂಹರಾಜು ಅವರ ಮೇಲೆ ಚಿತ್ರೀಕರಿಸಲಾದ ಕಾವಿತೊಟ್ಟವರೆಲ್ಲ ಅನ್ನುವ ರಾಜ್  ಗಾಯನತ್ವದ ಆರಂಭಿಕ ದಿನಗಳಗೀತೆ ಬರೆದಿದ್ದರು.

ಕನ್ನಡದ ಐತಿಹಾಸಿಕ ಚಿತ್ರ,ಮತ್ತು ಕನ್ನಡವಾಕ್ಚಿತ್ರ ಪ್ರಪಂಚದ _ನೂರನೇ ಚಿತ್ರವಾದ ರಣಧೀರ ಕಂಠೀರವ ಚಿತ್ರವನ್ನು ಅಯ್ಯರ್,ರಾಜ್,ನರಸಿಂಹರಾಜು ಜೊತೆ ನಿರ್ಮಿಸಿದವರು. ಒಮ್ಮೆ ಅನಕೃ-ತರಾಸು ಅವರಲ್ಲಿ ಉಂಟಾಗಿದ್ದ  ವ್ಯೆಮನಸ್ಸ ನ್ನು  ಶಮನಗೊಳಿಸಿದ್ದವರು ಬಾಲಣ್ಣ.ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಬಾಲಣ್ಣ ಭಾಜನರಾದಾಗ ಅವರು ನಿರ್ದೇಶಕರಲ್ಲ, ಅವರಿಗೆ ಪ್ರಶಸ್ತಿ ನೀಡುವುದೆಷ್ಟು ಸರಿ ಎಂಬ ವಿವಾದವೂ ಇತ್ತು.ಇಮ್ಮಡಿ ಪುಲಿಕೇಶಿ ಬಾಲಣ್ಣರನೂರನೇನೇ ಚಿತ್ರ.

ಬಾಲಣ್ಣ-ನರಸಿಂಹರಾಜು ಕಾಲ್ ಶೀಟ್ ಪಡೆದು ನಿರ್ಮಾಪಕರು ಆಮೇಲೆ ರಾಜಕುಮಾರ್ ಕಾಲ್ ಶೀಟ್
 ಪಡೆಯುತ್ತಿದ್ದರು.ಕಾಲು ಕಳೆದುಕೊಂಡಿದ್ದ ಅದ್ಭುತ ನೃತ್ಯಗಾತಿ  ಸುಧಾಚಂದ್ರನ್ ನಿರ್ಮಿಸಿದ ಬಾಲಣ್ಣನವರ ಜೀವನಾಧಾರಿತ, ಚಿತ್ರಜೀವನಾಧಾರಿತ ಕಲಾಭಿಮಾನಿಯನ್ನು ಬಾಲಣ್ಣ ಅವರ ಮಗ ಶ್ರೀನಿವಾಸ ನಿರ್ದೇಶಿಸಿದರು.ಆದರೆ ಚಿತ್ರ- ಸಾಕ್ಷ್ಯಚಿತ್ರ ಆಗದೆ ಇದ್ದಿದ್ದರೆ ಅದು ಯಶ ಕಾಣುತ್ತಿತ್ತೇನೋ. ಇತ್ತೀಚೆಗೆ ಶ್ರೀನಿವಾಸ್ ತೀರಿಹೋದರು.

ಜೀವನದ ಕೊನೆಯಲ್ಲಿ ಅಭಿಮಾನ್ ಸ್ಟುಡಿಯೊ ಸಾಲ ಮನ್ನಾ ಮಾಡಿ ಎಂದು ದಯನೀಯವಾಗಿ ಕೋರಿಕೊಂಡ ಬಾಲಣ್ಣ ಪಾತ್ರಗಳ ವರ್ಣರಂಜಿತ ಅಧ್ಯಾಯಕ್ಕೆ ಪುಟಗಳು ಸಾಲವು..ಅಪರಾಧಿ ಚಿತ್ರದ ಖಳ,ಬ್ರಹ್ಮಾಸ್ತ್ರ ಸಿನಿಮಾದ ನಾಯಕನ ಬೆಂಬಲಿಗ ವಕೀಲ,ಕಲಿಯುಗ ಚಿತ್ರದ ನಿಸ್ಸಹಾಯಕ ಮುದುಕ,ಇಬ್ಬನಿ ಕರಗಿತು ಸಿನಿಮಾದ ಆರ್ದ್ರ ಮುದುಕ, ಸ್ವಾಭಿಮಾನದ ಹಿರಿಯ ಆಳು, ನಾನಿನ್ನ ಮರೆಯಲಾರೆ ಚಿತ್ರದ ಸ್ವಾಭಿಮಾನೀ ಟೈಲರ್, ಆಟೋರಾಜದಲ್ಲಿ ಖೂಳರ ಗುಂಪಿನ ಜೊತೆಯಲ್ಲಿದ್ದು ಮಸಲತ್ತುಮಾಡುವ ವ್ಯೆದ್ಯ,ಬೆಟ್ಟದ ಹೂವು ಚಿತ್ರದ ಪಟ್ಟೆ ಹುಲಿ ಬಲುಕೆಟ್ಟ ಹುಲಿ..ಹಾಡಿನ ಅಜ್ಜ ಮೂಗನ ಸೇಡಿನ ನಾಯಕಿಯ ಅಪ್ಪ,  ಧ್ರುವತಾರೆಯ ಕೆಡುಕ ಸೋದರಮಾವ ಕಾಳಿಂಗ,ಪ್ರೀತಿಮಾಡು ತಮಾಷೆ ನೋಡು ಚಿತ್ರದ ಹಿರಿಯ, ಇಲ್ಲಿ ಬಾಲಕೃಷ್ಣನ ಬಾಯಲ್ಲಿ ಬ್ರಹ್ಮಾಂಡ ಕಂಡಂತೆ ಅವರು ಅಭಿನಯದಲ್ಲಿ ವಿರಾಟ್ ಸ್ವರೂಪ ತೋರಿಸಿದವರು.

ಬಾಲಣ್ಣ  ಅವರಿಗೊಂದು ಪರಿಪೂರ್ಣವಾದ ಬಿರುದು, ಡಾಕ್ಟರೇಟ್ ಪದವಿಯೂ ಬರಲಿಲ್ಲ. ದಾದಾಸಾಹೇಬ್ ಫಾಲ್ಕೆ ಸಿಗಲಿಲ್ಲ,ಇವೆಲ್ಲ ಬಾಲಣ್ಣ ಅವರಿಗೆ ಸಂದಿದ್ದರೆ ಆ ಪ್ರಶಸ್ತಿಗಳು ಗೌರವಗಳನ್ನು ಹೆಚ್ಚಿಸಿಕೊಳ್ಳುತ್ತಿದ್ದವು.ಆದರೆ ಬಾಲಣ್ಣ ತೀರಿಹೋಗಿ ೨೬ವರ್ಷ ಆಗಿದ್ದರೂಅವರಿಗೆ ಅವರ ಪಾತ್ರಗಳಿಗೆ ಸರಿಸಾಟಿ ಯಾರಿದ್ದಾರೆ ,ಬಾಲಣ್ಣನವರಿಗೆ ಸರಿಸಾಟಿಯಾಗಿ ನಿಲ್ಲುವವರು ಬಾಲಣ್ಣನವರು ಮಾತ್ರ. ನಿಸ್ಸಂದೇಹವಾಗಿ ಬಾಲಣ್ಣ ಕನ್ನಡ ಮಾತ್ರವಲ್ಲದೆ, ಭಾರತೀಯ ಚಿತ್ರರಂಗದ ಚಿರಸ್ಥಾಯೀ ಕಲಾವಿದರಲ್ಲವೇ
ಗೆಳೆಯರೆ.

 ಡಾ.ಶ್ರೀನಿವಾಸ ಪ್ರಸಾದ್ ಡಿ.ಎಸ್.
ಕೋಲಾರ.

Comments

Popular posts from this blog

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್...

HISTORICAL SAGAR MARIKAMBA JATRA.ಐತಿಹಾಸಿಕ ಸಾಗರದ ಮಾರಿಕಾಂಬಾ ಜಾತ್ರೆ

     ಸಾಗರದ ಮಾರಿಕಾಂಬಾ ಜಾತ್ರೆ ಐತಿಹಾಸಿಕ ಚರಿತ್ರೆಯಲ್ಲಿ ದಾಖಲೆ.        ಕನಾ೯ಟಕ ರಾಜ್ಯದಲ್ಲಿ ಎರೆಡು ಮಾರಿಕಾಂಬಾ ಜಾತ್ರೆಗಳು ಪ್ರಸಿದ್ಧಿ ಪಡೆದಿದೆ ಅದು ಉತ್ತರ ಕನ್ನಡ ಜಿಲ್ಲೆಯ ಸಿಸಿ೯ಯದ್ದು ಮತ್ತು ಶಿವಮೊಗ್ಗ ಜಿಲ್ಲೆಯ ಸಾಗರದ್ದು.    ಪ್ರತಿ ಮೂರು ವಷ೯ಕೆ ಈ ಜಾತ್ರೆ ಆಚರಿಸಲಾಗುತ್ತೆ ಶೂದ್ರ ವಗ೯ದವರು ಭಯ ಮತ್ತು ಭಕ್ತಿಯಿಂದ ಕುರಿ ಕೋಳಿ ಬಲಿ ನೀಡುವ ಪರಂಪರೆ ಇದೆ.ಮಂಗಳವಾರ ಮೇಲು ಜಾತಿಯ ಜನರ ಪೂಜೆ ದೇವಿಯ ತವರು ಮನೆಯಲ್ಲಿ ನಡೆಯುತ್ತದೆ ನಂತರ ರಾತ್ರಿ ಗಂಡನ ಸೇರುವ ಮಾರಿಗೆ ಶೂದ್ರರ ಪೂಜೆ, ಬಲಿ ಮೀಸಲು.    ಮೊದಲೆಲ್ಲ ಮಾರಿಯಮ್ಮನಿಗೆ ಕೊಣನ ಬಲಿ ನೀಡುತ್ತಿದ್ದರು ಈಗ ಇದು ಕಾನೂನು ಪ್ರಕಾರ ನಿಷಿದ್ಧ ಆದರೆ ಈ ಆಚಾರಣೆ ಗುಪ್ತವಾಗಿ ಬೇರೆ ಕಡೆ ನಡೆಸಲಾಗುತ್ತೆ ಅನ್ನುತ್ತಾರೆ.    ಸಾಗರದ ಮಾರಿಕಾ0ಬಾ ಜಾತ್ರೆ ಜಾತ್ರೆಯಿ೦ದ ಜಾತ್ರೆಗೆ ಅದೂರಿಯಾಗಿ ನಡೆಯುತ್ತದೆ, ಕೋಟ್ಯಾoತರ ಹಣದ ವಹಿವಾಟು ಕೂಡ, ಮೊದಲೆಲ್ಲ ಹಣದ ಅಪರಾ ತಪರ ಆಗುತ್ತಿದೆ ಎಂಬ ಗುಲ್ಲು ಇತ್ತು ಆದರೆ ಈಗೆಲ್ಲ ಪಾರದಶ೯ಕವಾಗಿದೆ ಆದರೂ ಈ ಬಾರಿಯ 2017ರ ಜಾತ್ರೆಯಲ್ಲಿ ಅವ್ಯವಹಾರದ ಆರೋಪ ಮಾಡಲಾಗಿದೆ ಈ ವಿಚಾರ ಇಲ್ಲಿ ಅಪ್ರಸ್ತುತ ಆದರೂ ಈ ಬಗ್ಗೆ ಬರೆಯಲು ಕಾರಣ ಕೆಳದಿ ಅರಸರ ಕಾಲದಲ್ಲಿ ಅಂದರೆ 350 ವಷ೯ದ ಹಿಂದೆಯೂ ರಾಜರಿಗೆ ಸಾಗರದ ಮಾರಿಕಾಂಬಾ ಜಾತ್ರೆಯಲ್ಲಿ ಸಾವ೯ಜನಿಕರಿಂದ ಸಂಗ್ರಹಿಸಿದ ಜಾತ...

ರಿಪ್ಪನ್ ಪೇಟೆ ( ಶಿವಮೊಗ್ಗ ಜಿಲ್ಲೆ) ಹೆಸರು ಬಂದಿದ್ದಾದರು ಹೇಗೆ?

#  ರಿಪ್ಪನ್ ಪೇಟೆ ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲ್ಲೂಕಿನ ಪ್ರಮುಖ ಹೋಬಳಿ ಕೇಂದ್ರ ಈ ಆಂಗ್ಲ ಅಧಿಕಾರಿಯ ಹೆಸರು ಇಡಲು ಕಾರಣವಾದ ಘಟನೆ ತುಂಬಾ ಕುತೂಹಲಕಾರಿ# ಸ್ವಲ್ಪ ಕಾಲ ನೀವು ಈ ಲೇಖನ ಓದಿದರೆ ಕಾರಣ ಗೊತ್ತಾಗುತ್ತೆ.    ಆಗ ಬ್ರಿಟಿಷ್ ಸಕಾ೯ರರಕ್ಕೆ ಆಡಳಿತ ಸುಗುಮಕ್ಕೆ ರೈಲು ಮಾಗ೯ ಅತ್ಯಗತ್ಯ ಎಂಬ ಸಕಾರಣ ಮನವರಿಕೆ ಆದ ಕಾಲ ಏಕೆಂದರೆ ಬ್ರಿಟಿಷರು ಅಮೆರಿಕಾ ವಲಸೆಯಲ್ಲಿ ಇದನ್ನ ಮನಗOಡಿದ್ದರು, ಬೆಂಗಳೂಳಿ ರಿಂದ ಶಿವಮೊಗ್ಗ ತಲುಪುವ ರೈಲು ಮಾಗ೯ ತಾಳಗುಪ್ಪಾ ತಲುಪಿದರೆ ಜೋಗ ಜಲಪಾತ ವೀಕ್ಷಣೆಗೆ ಅನುಕೂಲ ಎಂಬುದು ಹಾಗೆ ಮತ್ತೊಂದು ಮ್ಯಸೂರು ಸಕಾ೯ರ ಶರಾವತಿ ನದಿಗೆ ಆಣೆಕಟ್ಟು ಕಟ್ಟಿ.ಜಲ ವಿದ್ಯುತ್ ತಯಾರಿಸಲು ಸಾಮಗ್ರಿ ಸಾಗಾಣಿಕೆಗೆ ಅನುಕೂಲ ಎಂಬ ಕಾರಣದಿಂದ ಶಿವಮೊಗ್ಗದಿಂದ ತಾಳಗುಪ್ಪ ರೈಲು ಮಾಗ೯ ಯೋಜನೆ ಮಾಡಲಾಯಿತು.    ಆಗ ಪ್ಲೇಗ್ ಮಾರಿಯ ಕಾಲ, ಎಲ್ಲೆಲ್ಲೂ ಜನ ಸಾಯುತ್ತಿದ್ದರು ಆಗಲೇ ಈ ರೈಲು ಮಾಗ೯ ಶಿವಮೊಗ್ಗ ಆರಸಾಳಿOದ ದೊಡ್ಡಿನ ಕೊಪ್ಪ (ಈಗಿನ ರಿಪ್ಪನ್ ಪೇಟೆ) ಆನಂದಪುರಂ ಮಾಗ೯ ನಿಗದಿ ಆಗಿತ್ತು ಆದರೆ ಈ ಭಾಗದಲ್ಲಿ ಒಂದು  ವದಂತಿ ಈ ಬಾಗದಲ್ಲಿ ಹರಡಿತ್ತು ಅದೇನೆಂದರೆ ರೈಲು ಬಂದರೆ ಪ್ಲೇ ಗು ಬರುತ್ತೆ  ಅಂತ.    ಹಾಗಾಗಿ ಈ ಭಾಗದಲ್ಲಿನ ಜಾಗೃತ ಜನ ನಾಯಕರುಗಳು ಹೇಗಾದರು ಮಾಡಿ ರೈಲು ಬರದಂತೆ ಮಾಡಲು ಎಲ್ಲಾ ರೀತಿಯ ಪ್ರಯತ್ನ ಮಾಡಲು ಪ್ರಾರಂಭಿಸಿದರು.     ಇದೇ ಸಂದಭ೯ದಲ್ಲ...