Skip to main content

3514. ವಕೀಲ್ ನಾಗೇಶನ್

#ಅಪರೂಪದಲ್ಲಿ_ಅಪರೂಪದ_ಆ_ಘಟನೆ

#25_ವರ್ಷದ_ಹಿಂದಿನ_ಬೂರೇ_ಹಬ್ಬದ_ನೆನಪು

#ಅವತ್ತು_ತರಾತರಿಯಲ್ಲಿ_ಎಣ್ಣೆ_ಸ್ನಾನ_ಮಾಡಿ_ನಾನು_ನಮ್ಮಣ್ಣ

#ಶಿವಮೊಗ್ಗದ_ನ್ಯಾಯಾಧೀಶರ_ಮನೆ_ತಲುಪಿದ್ದೆವು

#ಡಿಸಿಸಿ_ಬ್ಯಾಂಕ್_ಅಧ್ಯಕ್ಷರಾದ_ಮಂಜುನಾಥ್_ಗೌಡರ_ತಮ್ಮ 

#ವಕೀಲ_ನಾಗೇಶನ್_ನಮ್ಮನ್ನು_ಕಾಯುತ್ತಿದ್ದರು.




#Deepavali #burehabba #abyanjana #jogfalls #arrack #venders #bail #judge.

   ಇದು 25 ವರ್ಷದ ಹಿಂದಿನ ಘಟನೆ ಅವತ್ತು ರಾತ್ರಿ ಬೂರೇ ನೀರು ತುಂಬಿದ ದಿನ ಆಗ ಪೋನ್ ಲ್ಯಾಂಡ್ ಲೈನ್ ಮಾತ್ರ ಇತ್ತು..

   ಅವತ್ತು ರಾತ್ರಿ ಸುಮಾರು ಹತ್ತರ ಸಮಯ ಅನೇಕ ಬಾರಿ ಫೋನ್ ರಿಂಗ್ ಆಗುವುದು ನಂತರ ಡಿಸ್ ಕನೆಕ್ಟ್ ಆಗುವುದು ಆಗುತ್ತಿತ್ತು, ಮಾತು ಕೇಳುತ್ತಿರಲಿಲ್ಲ.

    ನಂತರ ಸಂಪರ್ಕ ಸುಗಮವಾಗಿ ತಿಳಿದ ವಿಚಾರ ಸಾಗರದ ಸರಾಯಿ ಗುತ್ತಿಗೆದಾರರು ಜೋಗ್ ಫಾಲ್ಸ್ ಊರಿನ #ರಾಮಿ ಅಲಿಯಾಸ್ ರಾಮಚಂದ್ರ ಇವರನ್ನ ಬಂದಿಸಿದ್ದಾರೆ ಅಂತ ಸಾಗರದ ಆಗಿನ ಕೆಇಬಿ ವಿದ್ಯುತ್ ಇಲಾಖೆ ಯೂನಿಯನ್ ಪದಾಧಿಕಾರಿ #ಸೂರ್ಯಕುಮಾರ್ ಪೋನ್ ಮಾಡಿದ್ದರು.

    ಈ ವಿಚಾರ ರಾಮಿ ಅವರ ಸಹೋದರ ಜೋಗ್ ಫಾಲ್ಸ್ #ಸೀನಿ ಅಲಿಯಾಸ್ ಶ್ರೀನಿವಾಸ ಸೂರ್ಯ ಪ್ರಕಾಶ್ ಗೆ ತಿಳಿಸಿ ಅರುಣ್ ಪ್ರಸಾದ್ ಗೆ ಹೇಳಿ ಸಹಾಯ ಮಾಡಲು ಅಂತ ಫೋನ್ ಮಾಡಿದ್ದರಂತೆ.

   ಈ ಸಹೋದರರು ಜೋಗ್ ಫಾಲ್ಸ್ ನಲ್ಲಿ ಪ್ರಸಿದ್ದರೂ ಬಲಾಡ್ಯರು ಆಗಿದ್ದವರು, 1999ರ ನನ್ನ ಪಕ್ಷೇತರ ವಿಧಾನಸಭಾ ಚುನಾವಣೆಯಲ್ಲಿ ನನಗೆ ಬೆಂಬಲಿಸಿದ್ದವರು, ಆ ಋಣ ನನ್ನ ಮೇಲೆ ಇತ್ತು ಅದಕ್ಕಾಗಿನೇ ನನಗೆ ಈ ಸುದ್ದಿ ಶೀನಿ ಕಳಿಸಿರಬೇಕು.

  ಮರುದಿನ ದೀಪಾವಳಿ ಬೂರೆ ಹಬ್ಬ, ಸರ್ಕಾರಿ ರಜಾ ಮತ್ತು ಸಾಗರದಲ್ಲಿನ ನ್ಯಾಯಾದೀಶರು ರಜೆ ಇದ್ದಿದ್ದರಿಂದ ಅಬಕಾರಿ ಇಲಾಖೆ ಅಧಿಕಾರಿಗಳು ಮರುದಿನ ಬೆಳಿಗ್ಗೆಯೇ ರಾಮಿಯನ್ನು ಶಿವಮೊಗ್ಗದ ನ್ಯಾಯಾದೀಶರ ಮನೆಯಲ್ಲಿ ಹಾಜರು ಮಾಡುತ್ತಾರೆ ಎಂಬ ಮಾಹಿತಿ ತಿಳಿಯಿತು.

    ಶೀನಿ ಮತ್ತು ರಾಮಿ ಅವತ್ತಿನ ಸರಾಯಿ ಗುತ್ತಿಗೆದಾರರ ಜೊತೆ ಮಾಡಿಕೊಂಡ ಜಟಾಪಟಿಗೆ ಪ್ರಭಾವಿ ಸರಾಯಿ ಗುತ್ತಿಗೆದಾರರು ಮತ್ತು ಅಬಕಾರಿ ಅಧಿಕಾರಿಗಳು ಜೊತೆ ಸೇರಿಕೊಂಡು ಮಾಡಿದ ಸುಳ್ಳು ಕೇಸ್ ಇದಾಗಿತ್ತು.

    ಆದರೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ರಾಮಿಯನ್ನು ಸ್ಪಿರಿಟ್ ಕ್ಯಾನ್ ಜೊತೆಗೆ ಬಂದಿಸಿದಂತೆ FIR ಮಾಡಿದ್ದರು ಇದರಿಂದ ತಕ್ಷಣ ಜಾಮೀನು ಸಿಗುವುದೇ ಇಲ್ಲವಾಗಿತ್ತು ಆ ದಿನಗಳಲ್ಲಿ.
    
   ತಕ್ಷಣ ಈ ಕೇಸಿನಲ್ಲಿ ಏನು ಮಾಡುವುದು ಎಂದು ಯೋಚಿಸಿದೆ... ರಾಮಿ ಮತ್ತು ಶೀನಿಗೆ ನಾನು ನನ್ನ ಎಂ ಎಲ್ ಎ ಚುನಾವಣೆಗೆ ಮಾಡಿದ ಬೆಂಬಲಕ್ಕೆ ಪ್ರತ್ಯುಪಕಾರ ಮಾಡಲೇ ಬೇಕು ಎಂದು ತೀರ್ಮಾನಿಸಿದೆ.

   ಆ ತಡ ರಾತ್ರಿ ಆ ಕಾಲದಲ್ಲಿ ನೆನಪಾಗಿದ್ದು ನನ್ನ ಎಲ್ಲಾ ಹೋರಾಟಗಳಲ್ಲಿ ಕಾನೂನು ಸಂಬಂಧಿ ವಿಚಾರಗಳಲ್ಲಿ ಸಹಾಯ ಮಾಡುತ್ತಿದ್ದ ಶಿವಮೊಗ್ಗದ ಖ್ಯಾತ ಯುವ ವಕೀಲರಾದ #ನಾಗೇಶನ್ ಗೆ ಫೋನ್ ಮಾಡಿದ್ದೆ.

    ನಾಗೇಶನ್ ತೀರ್ಥಹಳ್ಳಿ ಮೂಲದವರು ರೈತ ಮತ್ತು ಜನಪರ ಹೋರಾಟಗಾರರು, 80 ರ ದಶಕದಲ್ಲಿ ತೀರ್ಥಹಳ್ಳಿಯ ವೆಂಕಟೇಶ್ವರ ಚಿತ್ರ ಮಂದಿರದಲ್ಲಿ #ಪ್ರೋ_ನಂಜುಂಡಸ್ವಾಮಿ ಅವರನ್ನು ಕರೆಸಿ ಯುವ ರೈತ ಸಂಘದ ಉದ್ಘಾಟನೆ ಮಾಡಿಸಿದ ಕಾರ್ಯಕ್ರಮ ನಾನು ಸ್ವತಃ ನೋಡಿದ್ದೆ.

   ಅವತ್ತು ನಾಗೇಶನ್ ಬಾಷಣ "ಇಡೀ ರಾಜ್ಯವೇ ಮಲಗಿದ್ದಾಗ ತೀರ್ಥಹಳ್ಳಿ ಎಚ್ಚರವಿರುತ್ತದೆ" ಅಂತ.

     ಇನ್ನೂ ಇವರ ಪರಿಚಯ ಹೇಳ ಬೇಕೆಂದರೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿರುವ #ಮಂಜುನಾಥಗೌಡರು ಮತ್ತು ತೀರ್ಥಹಳ್ಳಿಯ ಸಾಹಿತ್ಯ ಪರಿಷತ್ ನ #ಧರ್ಮಕುಮಾರರ ಕಿರಿಯ ಸಹೋದರ.

    ಫೋನ್ ನಲ್ಲಿ ವಿಚಾರ ತಿಳಿದ ವಕೀಲರಾದ ನಾಗೇಶನ್ "FIR ಇಲ್ಲದೆ, ವಕಾಲತ್ ಸಹಿ ಇಲ್ಲದೆ, ಜಾಮೀನುದಾರರು ಇಲ್ಲದೆ ನೀವು ಹೇಳಿದ ವ್ಯಕ್ತಿಗೆ ಹೇಗೆ ಸಹಾಯ ಮಾಡಲು ಸಾಧ್ಯ" ಅಂತ ಕೇಳಿದರು.

   ಅವರ ಅಭಿಪ್ರಾಯ ಮತ್ತು ಪ್ರಶ್ನೆ ಸರಿಯಾಗಿತ್ತು ಅದೂ ದೀಪಾವಳಿ ಹಬ್ಬದ ರಜಾ ದಿನದ ಬೆಳ್ಳಂಬೆಳಗ್ಗೆ ನ್ಯಾಯಾದೀಶರ ಮನೆಗೆ ರಾಮಿಯನ್ನ ಸ್ಪಿರಿಟ್ ಕ್ಯಾನ್ ಸಮೇತ ಹಾಜರು ಮಾಡಿ ಜೈಲಿಗೆ ಕಳಿಸಲೇ ಬೇಕೆಂಬ ಹುನ್ನಾರ ಸರಾಯಿ ಗುತ್ತಿಗೆದಾರರು ಮಾಡಿ ಆಗಿತ್ತು.

    ವಕೀಲ ನಾಗೇಶರಿಗೆ ನಾನು ಒಂದು ಮನವಿ ಮಾಡಿದೆ ಅದೇನೆಂದರೆ "ಈ ಸಂದಿಗ್ದ ಪರಿಸ್ಥಿತಿಯಲ್ಲಿ ನೀವು ನ್ಯಾಯಾದೀಶರ ಮನೆ ಕಛೇರಿಗೆ ಹೋಗಿ ಅಬಕಾರಿ ಇಲಾಖೆ ಅಧಿಕಾರಿಗಳು ಕರೆದುಕೊಂಡು ಬರುವ ರಾಮಿಯನ್ನ ಬೇಟಿ ಮಾಡಿ ಅರುಣ್ ಪ್ರಸಾದ್ ಕಳಿಸಿದ್ದಾರೆ" ಅಂತ ಹೇಳಿ ಸಾಕು ನಂತರ ಒಂದರೆಡು ದಿನದಲ್ಲಿ ಜಾಮೀನು ಮಾಡಿಸಲು ಪ್ರಯತ್ನಿಸೋಣ ಅಂತ.

  ಮರುದಿನ ಬೆಳಿಗ್ಗೆ ಬೂರೆ ನೀರು ಸ್ನಾನಕ್ಕೆ ತಯಾರಾಗುವಾಗ ನಮ್ಮ ಲ್ಯಾಂಡ್ ಫೋನ್ ರಿಂಗ್ ಆಯಿತು.

   ಲೈನ್ ನಲ್ಲಿ ವಕೀಲ ನಾಗೇಶರ ಧ್ವನಿ "ಅರುಣ್ ಪ್ರಸಾದ್ ನಿಮ್ಮ ದೋಸ್ತ್ ಗೆ ಲಾಟರಿ ಟಿಕೇಟ್ ತಗೊಳ್ಳೋಕೆ ಹೇಳಿ ಬಂಪರ್ ಬಹುಮಾನ ಗ್ಯಾರಂಟಿ " ಅಂದಾಗ ನನಗೆ ಅರ್ಥವೇ ಆಗಲಿಲ್ಲ.
   
   ವಕೀಲರು ರಾತ್ರಿ ಹೇಳಿದ ಮಾತು, ನನ್ನ ಅನುಭವಗಳು ಮತ್ತು ಸರಾಯಿ ಗುತ್ತಿಗೆದಾರರ ಕರಾಮತ್ತಿನಿಂದ ಜೋಗ್ ಪಾಲ್ಸ್ ರಾಮಿ ಜೈಲಿಗೆ ಹೋಗಲೇ ಬೇಕಿತ್ತು.

   ನಂತರ ವಕೀಲರಾದ ನಾಗೇಶರು ವಿವರಿಸಿದಾಗ ತಿಳಿದದ್ದು ಏನೆಂದರೆ ನನ್ನ ವಿನಂತಿ ಮೇರೆಗೆ ನಾಗೇಶ್ ತಮ್ಮ ಮನೆಯಲ್ಲಿನ ಹಬ್ಬ ತ್ಯಜಿಸಿ ತಮ್ಮ ಸ್ಕೂಟರ್ ನಲ್ಲಿ ನ್ಯಾಯಾದೀಶರ ಮನೆ ತಲುಪಿದ್ದಾರೆ.

      ನ್ಯಾಯಾದೀಶರ ಮನೆ ಗೇಟಿನಲ್ಲಿ ರಾಮಿಯನ್ನು ಕರೆತರುವ ಅಬಕಾರಿ ಜೀಪಿಗೆ ಕಾಯುತ್ತಾ ನಿಂತಾಗಲೇ ವಾಕಿಂಗ್ ಮಾಡುತ್ತಿದ್ದ ನ್ಯಾಯಾದೀಶರು ಇವರನ್ನ ನೋಡಿ ಗೇಟಿನ ಹೊರಬಂದು ನಾಗೇಶರನ್ನ ವಿಚಾರಿಸಿದ್ದಾರೆ.

    ಅದೇ ಸಮಯಕ್ಕೆ ಸಾಗರದ ಅಬಕಾರಿ ಜೀಪ್ ಅಲ್ಲಿಗೆ ತಲುಪಿದೆ ಬೇಡಿ ಹಾಕಿದ್ದ ರಾಮಿಯನ್ನ ಜೀಪಿಂದ ಇಳಿಸಿದಾಗ ವಕೀಲರಾದ ನಾಗೇಶ್ ರಾಮಿಗೆ ಸ್ವಯಂ ಪರಿಚಯ ಮಾಡಿಕೊಂಡು  ನಾನು ವಕೀಲರಾದ ಅವರನ್ನು ಕಳಿಸಿದ್ದು ಎಂದಿದ್ದಾರೆ.

   ನ್ಯಾಯಾದೀಶರ ಗೃಹ ಕಛೇರಿಗೆ ಅಪರಾದಿ ರಾಮಿಯನ್ನು ಹಾಜರು ಮಾಡಿದಾಗ ನ್ಯಾಯಾದೀಶರು ವಕೀಲ ನಾಗೇಶರಿಗೆ ಕರೆದಿದ್ದಾರೆ, ನಾಗೇಶರು ಇದು ದುರುದ್ದೇಶದ ಪ್ಯಾಬ್ರಿಕೇಟೆಡ್ ಕೇಸ್ ಎಂದು ವಿವರಿಸಿದಾಗ ನ್ಯಾಯಾದೀಶರು ರಾಮಿಗೆ ಜಾಮೀನು ಮಂಜೂರು ಮಾಡಿ ಬಿಡುಗಡೆ ಆದೇಶ ಮಾಡಿದಾಗ ಅಬಕಾರಿ ಅಧಿಕಾರಿಗಳು ಮಾತ್ರವಲ್ಲ  ಅಪರಾದಿ ರಾಮಿ ಮತ್ತು ನನ್ನ ವಕೀಲ ಮಿತ್ರ ನಾಗೇಶ್ ಕೂಡ ಕಕ್ಕಾಬಿಕ್ಕಿ ಆಗಿದ್ದಾರೆ ಇದು ಅನಿರೀಕ್ಷಿತ.

   ಹಿಂದಿನ ದಿನ ಅಷ್ಟೆಲ್ಲ ಶ್ರಮ ಹಾಕಿದ್ದ ಅಬಕಾರಿ ಅಧಿಕಾರಿಗಳು ಒಲ್ಲದ ಮನಸ್ಸಿನಿಂದಲೇ ತಾವು ತಂದಿದ್ದ ಬೇಡಿ ಸರಪಳಿ ಸಮೇತ ಅವರ ಜೀಪಿನಲ್ಲಿ ವಾಪಾಸಾಗಿದ್ದಾರೆ.

   ನ್ಯಾಯಾದೀಶರು ಜಾಮೀನುದಾರರು ಯಾರು ಅಂದಾಗ ನಾಗೇಶ್ ಪರಿಸ್ಥಿತಿ ವಿವರಿಸಿ ಸ್ವಲ್ಪ ಸಮಯ ಕಾಲಾವಕಾಶ ಕೋರಿದ್ದಾರೆ.

    ಆಗ ನ್ಯಾಯಾದೀಶರು ರಾಮಿಯನ್ನ ನಾಗೇಶರಿಗೆ ಹಸ್ತಾಂತರಿಸಿ ಜಾಮೀನು ಪ್ರಕ್ರಿಯೆ ಪೂರೈಸಲು ಹೇಳಿ ಇನ್ನೊಂದು ಮಾತು ಹೇಳಿದರಂತೆ "ಈ ರೀತಿ ಸ್ಪಿರಿಟ್ ತಂದು ಬಡವರ ಕರಳು ಸುಡುವ ಇಂತವರ ಪರ ಯಾಕೆ ಬರುತ್ತೀರಿ? ವಕೀಲರೇ? " ಅಂದರಂತೆ ಆ ರೀತಿ FIR ಅಧಿಕಾರಿಗಳು ಹೊಸೆದಿದ್ದರು.

   ನಾಗೇಶ್ ರಾಮಿಗೆ ಟಿಪನ್ ಮಾಡಿಸಲು ಹೋಟೆಲ್ ಗೆ ಕರೆದೊಯ್ಯುವುದಾಗಿ ಆದಷ್ಟು ಬೇಗ ಜಾಮೀನುದಾರರನ್ನ ಕಳಿಸಿ ಎಂದಾಗ ನಾನು ರಾಮಿ ತಮ್ಮ ಶೀನಿಗೆ ಫೋನಾಯಿಸಿದೆ.

   ನಾನು ಹೇಳಿದ ಮಾತು ಶೀನಿ ನಂಬಲು ತಯಾರೇ ಇಲ್ಲ ಯಾಕೆಂದರೆ ಸಾಗರದ ಅವರ ವಕೀಲರು ಈ ಬಗ್ಗೆ ಏನಾಗ ಬಹುದು ಎಂದು ಮೊದಲೇ ತಿಳಿಸಿದ್ದರು.

  ಎರಡೆರೆಡು ಬಾರಿ ವಿವರಿಸಿ ಜಾಮೀನುದಾರನ ತಕ್ಷಣ ಕರೆದು ಕೊಂಡು ಬರಲು ಹೇಳಿದರೆ ಶೀನಿ ತಕರಾರು... ಏನೆಂದರೆ ಇವತ್ತು ದೀಪಾವಳಿ ರಜಾ...ಪಹಣಿ ಸಿಗೊಲ್ಲ ... ಜಾಮೀನುದಾರರು ಹಬ್ಬದ ದಿನ ಬರೊಲ್ಲ .... ಇತ್ಯಾದಿ.

   ಏನೇ ಆದರೂ ನಾನು ವಕೀಲ ಮಿತ್ರ ನಾಗೇಶರು ನ್ಯಾಯದೀಶರಿಗೆ ನೀಡಿದ ಅಶ್ವಾಸನೆ ಈಡೇರಿಸಲೇ ಬೇಕಾದ್ದರಿಂದ ನನ್ನಣ್ಣ ಮತ್ತು ಅವರ ಜಮೀನು ಪಹಣಿ ಜೊತೆ ಕ್ಷಿಣಾರ್ಧದಲ್ಲಿ ಎಣ್ಣೆ ಹೆಚ್ಚುವ ಶಾಸ್ತ್ರ ಮಾಡಿ ಬೂರೆ ನೀರಿನ ಸ್ನಾನ ಮಾಡಿ  ಶಿವಮೊಗ್ಗಕ್ಕೆ ತಲುಪಿ ಜಾಮೀನು ನೀಡಿ ಜೋಗ್ ಫಾಲ್ಸ್ ರಾಮಿಯನ್ನು ಕರೆದುಕೊಂಡು ಬಂದೆವು.

   ಪ್ರತಿ ವರ್ಷ ದೀಪಾವಳಿ ಬೂರೆ ಹಬ್ಬದ ದಿನ ಇದು ತಪ್ಪದೇ ನೆನಪಾಗುತ್ತದೆ.

   ವಕೀಲರಾದ ನಾಗೇಶನ್, ಜೋಗ್ ಫಾಲ್ಸ್ ರಾಮಿ ಅವರ ಚಿತ್ರ ಕೂಡ ನೆನಪಿನ ಪರದೆಯಲ್ಲಿ ಮೂಡುತ್ತದೆ.

   ನನ್ನ ಕಥಾ ಸಂಕಲನ #ಬಿಲಾಲಿ_ಬಿಲ್ಲಿ_ಅಭ್ಯಂಜನ" ಪುಸ್ತಕದಲ್ಲಿನ ಕಥೆ ಒಂದರಲ್ಲಿ ಶೀನಿ -ರಾಮಿ ಕಥಾ ನಾಯಕರಾಗಿ ದಾಖಲಾಗಿದ್ದಾರೆ.

     ವಕೀಲರಾದ ನಾಗೇಶನ್ ಕಛೇರಿ ಮತ್ತು ಸಂಪರ್ಕ ವಿವರ ಕಾಮೆಂಟ್ ನಲ್ಲಿದೆ ನೋಡಿ.

Comments