Skip to main content

ಮಂಗಳೂರಿನ ನಾಲ್ಕು ದಶಕಗಳ ಕಾಲ ಪ್ರಸಿದ್ದವಾಗಿದ್ದ ಅತ್ರಿ ಬುಕ್ ಸೆಂಟರ್ ( ಎ.ಬಿ.ಸಿ.) ಮಾಲಿಕ ದಂಪತಿಗಳಿಂದ ಚಂಪಕ ಸರಸ್ಸು ದರ್ಶನ

#ಕ್ರಿಯಾಶೀಲ_ಸಾಧಕರು_ಆತ್ರಿ_ಬುಕ್_ಸೆಂಟರ್_ಎನ್_ಅಶೋಕವದ೯ನ್
#ನಮ್ಮ_ಊರಿನ_ಚಂಪಕ_ಸರಸ್ಸು_ಬೇಟಿ

 ಮಂಗಳೂರಿನ ABC ಅಂದ್ರೆ ಅತ್ರಿ ಬುಕ್ ಸೆಂಟರ್ ಮಾಲಿಕರಾದ ಎನ್.ಅಶೋಕವದ೯ನರು 2012ರಲ್ಲಿಯೇ ತಮ್ಮ ಬುಕ್ ಸೆಂಟರ್ ನ್ನು ಕನ್ನಡ ಪುಸ್ತಕ ಓದುವ ಕೊಳ್ಳುವ ಹವ್ಯಾಸ ಜನರಲ್ಲಿ ಕಡಿಮೆ ಆದ್ದರಿಂದ ಮುಚ್ಚಿದ್ದಾರೆ.
  ಇವರ ಹವ್ಯಾಸ ಪ್ರವಾಸ - ಡ್ರೈವಿಂಗ್ - ಓದು -ಪೋಟೋಗ್ರಪಿ ಜೊತೆಗೆ ಖಾಸಾಗಿ ವನ್ಯ ಸಂರಕ್ಷಣೆ ಕೂಡ, ಇದಕ್ಕಾಗಿ ಬಿಸಲೆ ಸಮೀಪ ಇವರ ಖಾಸಾಗಿ ಜಮೀನಿನ ವನ್ಯ ಸಂರಕ್ಷಣೆಗಾಗಿ ಇವರ ಅಶೋಕ ವನ ಮಾಡಿದ್ದಾರೆ.
  ಇವರ ಬ್ಲಾಗ್ ಗಳು ಆಕಷ೯ಕ ಬರವಣಿಗೆ ಮತ್ತು ಚಿತ್ರಗಳಿಂದ ಎಲ್ಲರಿಗೂ ಆಕಷಿ೯ಸುತ್ತದೆ ಅದರಲ್ಲಿ ಇವರ ಅಶೋಕವನದಲ್ಲಿ ನಿರ್ಮಿಸಿದ #ಕಪ್ಪೆಗೂಡಿನ ಬಗ್ಗೆ ಬರೆದಿರುವ ಲೇಖನ ನನಗೆ ತುಂಬಾ ಇಷ್ಟ, ಇವರ ಪುತ್ರ ಚಲನ ಚಿತ್ರ ನಿದೇ೯ಶಕ ವೃತ್ತಿ ಮಾಡುತ್ತಿದ್ದಾರೆ.
  ಅನೇಕ ಪುಸ್ತಕ ಕೂಡ ಬರೆದು ಪ್ರಕಟಿಸಿದ್ದಾರೆ, ಮೊನ್ನೆ ಹೆಗ್ಗೋಡಿನ ನಿನಾಸಂಗೆ ಬೈಕ್ ನಲ್ಲಿ #ಅಶೋಕವರ್ಧನ್ ದಂಪತಿ ಬಂದಾಗ ಗೆಳೆಯ #ಶೈಲೇಂದ್ರಬಂದಗದ್ದೆ ಚಂಪಕ ಸರಸ್ಸುವಿನ ಬಗ್ಗೆ ಹೇಳಿದ್ದರಿಂದ ದಂಪತಿಗಳು ನಮ್ಮ ಊರಿನ ನಾನೂರು ವರ್ಷದ ಸ್ಮಾರಕ ಚಂಪಕ ಸರಸ್ಸು ಸಂದರ್ಶಿಸಿ ಅವರ FB ಯಲ್ಲಿ ಬರೆದ ಲೇಖನ ಇಲ್ಲಿ ಶೇರ್ ಮಾಡಿದ್ದೇನೆ ಮತ್ತು ಅವರಿಗೆ ನನ್ನ ಕಾದಂಬರಿ " ಬೆಸ್ತರ ರಾಣಿ ಚಂಪಕಾ " ಅಂಚೆಯಲ್ಲಿ ಗೌರವ ಪ್ರತಿಯಾಗಿ ಕಳಿಸಿದ್ದೇನೆ ಮತ್ತು ಸ್ಮಾರಕ ಸಂದರ್ಶಿಸಿದ ಅವರಿಗೆ ಕಾದಂಬರಿ ಓದಿ ವಿಮರ್ಶೆ ಬರೆಯಲು ವಿನ೦ತಿಸಿದ್ದೇನೆ.

ಚಂಪಕ ಸರಸಿ ಉರುಫ್ ಮೇರ್ತಿಮಠ 
ರಂಗಪುರುಷನ ಸಾಕ್ಷಾತ್ಕಾರ ನೋಡುವ ನೆಪದಲ್ಲಿ - ೯

"ನಾನು ಶೈಲೇಂದ್ರ ಬಂದಗದ್ದೇಂತ...." ನಾವು ಮಳ್ಳ ಗಿಂಪೆಲ್ಲನ್ನು ಕಾದಿದ್ದಾಗ, ಪಕ್ಕದಲ್ಲಿ ಬಂದು ಕುಳಿತ ಮಹನೀಯರು ಹೀಗೆ ಪರಿಚಯಿಸಿಕೊಂಡರು. ಪುಣ್ಯಾತ್ಮ ಹಿಂದೆ ಸಂಸ್ಕೃತಿ ಶಿಬಿರದಲ್ಲೂ ಪರಿಚಯಿಸಿಕೊಂಡಿದ್ದರಂತೆ, ನನ್ನ ಮರೆವಿಗೆ ಮದ್ದಿಲ್ಲ! ಅವರು ಕೆಳದಿ ಸಮೀಪದವರು. ನಮ್ಮ ಓಡಾಟ ತಿಳಿದ ಮೇಲೆ, ಆ ಬೆಳಿಗ್ಗೆ ತಮ್ಮಲ್ಲಿಗೇ ಬರಬೇಕಿತ್ತು ಎಂದೂ ಆಶಿಸಿದರು. ಅದಕ್ಕೂ ಮುಖ್ಯವಾಗಿ ನಮ್ಮ ತಿರುಗಾಡಿತನಕ್ಕೆ ಹೊಸತೊಂದು ಎರೆ ಕೊಟ್ಟರು - ಚಂಪಕ ಸರಸಿ (ಅಥವಾ ಎಂದು ಇನ್ನೇನೋ ಒಂದು ಮಠದ ಹೆಸರೂ ಹೇಳಿದ್ದರು). "ಹಿಂದಿರುಗುವ ದಾರಿಯಲ್ಲಿ ಬಟ್ಟೆಮಲ್ಲಪ್ಪದಿಂದ ನೇರ ಆನಂದಪುರಕ್ಕೆ ಹೋಗಿ. ಅಲ್ಲಿಂದ ಒಂದು ಕಿಮೀ ಅಂತರದಲ್ಲಿದೆ ಈ ಕೆರೆ ದೇವಳ..." ಎಂದು ಸಾಕಷ್ಟು ಸೂಚನೆಗಳನ್ನು ಕೊಟ್ಟದ್ದಲ್ಲದೆ, ಅವರ ಚರವಾಣಿಯಲ್ಲಿದ್ದ ಆಕರ್ಷಕ ಒಂದೆರಡು ಚಿತ್ರಗಳನ್ನೂ ತೋರಿಸಿದ್ದಕ್ಕೆ ನಮ್ಮ ದಿಕ್ಕು ನಿಶ್ಚಿತವಾಗಿತ್ತು.

ನಾವು ರಾತ್ರಿಯೇ ಅಕ್ಷರ ಶಿಶಿರಾದಿಗಳಿಂದ ಬೀಳ್ಕೊಂಡಿದ್ದೆವು. "ಎರಡು ಕಾಫಿಯಲ್ಲೊಂದು ಚಪ್ಪೆಗೂ ನಿಲ್ಲಲ್ಲ" ಅಂತ ನಾಗಾಭರಣರಿಗೆ ಖಾತ್ರಿ ಪಡಿಸಿದ್ದೆವು. ಎಲ್ಲಕ್ಕೂ ಮುಖ್ಯವಾಗಿ ವಠಾರದ ಉಸ್ತುವಾರಿ ಮುಖ್ಯರಾದ ಪ್ರಭಾ ಹಾಗೂ ಕೃಷ್ಣಮೂರ್ತಿಗಳಿಗೂ ತಿಳಿಸಿದ್ದಂತೆ, ಆರು ಗಂಟೆಗೇ ಕೋಣೆಯ ಬಾಗಿಲೆಳೆದಿಟ್ಟು ಬೈಕ್ ಹೊರಡಿಸಿದ್ದೆವು. ಬೆಳಕು ಅರಳುತ್ತಿದ್ದಂತೆ, ತೆಳು ಮಂಜು ಹರಿದು, ನಸು ಚಳಿಯ ಕುಶಿ ಇಳಿಯುವ ಮೊದಲು ಬಟ್ಟೆಮಲ್ಲಪ್ಪದಲ್ಲಿ ಕಾಫಿಗೆ ನಿಂತೆವು. ಚಟ್ನಿ ಇನ್ನೂ ಕಡೆದಿರಲಿಲ್ಲ. ಬರಿಯ ಸಾಂಬಾರಿನಲ್ಲೇ ಎರಡೆರಡು ತಟ್ಟೆ ಬಿಸಿ ಇಡ್ಲಿ ಏರಿಸಿ, ಆನಂದವಾಗಿ (ಆನಂದ)ಪುರದತ್ತ ಸಾಗಿದೆವು. ಊರ ಪ್ರವೇಶದಲ್ಲೇ ಚಂಪಕ ಸರಸಿ ಹೆಸರಿನ ಬೋರ್ಡೇನೋ ಕಾಣಿಸಿತು, ಕೆರೆ ದೇವಳದ ದಾರಿ ಸಿಕ್ಕಲಿಲ್ಲ. ಅವರಿವರ ಅಂದಾಜಿಗೆ ದಾಸಕೊಪ್ಪದ ದಾರಿಯಲ್ಲಿ ಒಂದು ಕಿಮೀ ಮೇಲೆ ಕೆಳಗೆ ಓಡಾಡಿದ್ದೇ ಬಂತು. ಕೊನೆಗೆ ನಮ್ಮ ಬಹುತರದ ವಿವರಣೆ ಕೇಳಿದ ಯಾರೋ ಪ್ರಾಯದ ಹೆಂಗಸು "ಅಯ್ಯೋ ಮೇರ್ತಿ ಮಠ ಅನ್ನಿ, ಚಂಪ್ಕಾ ಗಿಂಪ್ಕಾ..." ನಗುತ್ತಾ ತೋರಿದ ತೀರಾ ಕಚ್ಚಾ ಮಣ್ಣದಾರಿಗೆ ನುಗ್ಗಿದೆವು. ನೀರುಳ್ಳಿ ಮೂಟೆಗಳ ದಾಸ್ತಾನಿಟ್ಟಿದ್ದ ಹೊಲದ ಪಕ್ಕದಲ್ಲಾಗಿ ಕುರುಚಲು ಕಾಡಿನ ನಡುವೆ ಅಪ್ಪಟ ಸವಕಲು ಜಾಡು. ಆ ಕೊನೆಯಲ್ಲಿ ಐತಿಹಾಸಿಕ  ಪ್ರಾಯದ ಮುರಕಲ್ಲಗೋಡೆಯ ಬಳಿ ಬೈಕಿಳಿದೆವು. ಗೋಡೆಗಿದ್ದ ಓಬವ್ವನ ಕಿಂಡಿಯಲ್ಲಿ ತೂರಿದಾಗ ಈ ಹಳೆಗಾಲದ ಸುಂದರಿ - ಚಂಪಕ ಸರಸಿ, ಅರ್ಥಾತ್ ಸಂಪಿಗೆ ಕೊಳ, ಬೆಳಗ್ಗಿನ ಸೂರ್ಯರಶ್ಮಿಯಲ್ಲಿ ಮಿಂದುಕೊಂಡಿತ್ತು. ಅನಂತರ ಕಂಡಂತೆ ದಾಸಕೊಪ್ಪದ ಮಸೀದಿ ಎದುರಿನಿಂದ, ಇಗರ್ಜಿ ಪಕ್ಕದಿಂದ ಅದಕ್ಕೆ ವಾಹನಯೋಗ್ಯ ಮಣ್ಣದಾರಿಯೂ ಇತ್ತು.

ನಿರ್ಜನ, ನೀರವ, ಹಾಳುಬಿದ್ದ ಸ್ಥಳ ಎನ್ನಲಾಗದಂತೆ, ಶಿವಮೊಗ್ಗದಿಂದ ಬಂದ ಒಂದು ತಂಡ ಅಲ್ಲಿ ಪ್ರಿ-ವೆಡ್ ಶೂಟಿಂಗ್ ನಡೆಸಿತ್ತು. ಭರ್ಜರಿ ಮೂರು ಕಾರಿನಲ್ಲಿ ಆರೆಂಟು ಮಂದಿ ಕ್ಯಾಮರಾ ಡ್ರೋನ್ ಸಜ್ಜಿತರಾಗಿದ್ದರು. ಅವರ ಟಚ್ಚಿಂಗೂ ಪೊಸಿಶನಿಂಗೂ ಲೈಟಿಂಗೂ ಯಾಕ್ಟಿಂಗೂ ಕ್ಯಾಮರಾ ಸೆಟ್ಟಿಂಗೂಗಳು ನಡೆದೇ ಇತ್ತು. ಅವುಗಳ ಎಡೆ ಎಡೆಯಲ್ಲಿ ನಾವು ಸ್ವಲ್ಪ ಎಕ್ಸ್ಕ್ಯೂಸ್ಮಿಗಳನ್ನು ಬಿಟ್ಟು ಕೆರೆಗೆ ಸುತ್ತು ಹಾಕಿ, ಕಲ್ಲ ಸೇತುವಿನಲ್ಲಿ ನಡುಗಡ್ಡೆಯ ಮಂಟಪಕ್ಕೇರಿ, ಅದಕ್ಕೂ ಒಂದು ಪ್ರದಕ್ಷಿಣೆ ಬಂದು, ಶಿವಲಿಂಗದ ದರ್ಶನ ಪಡೆದು, ಕೆರೆಯಿಂದಾಚೆಗಿದ್ದ ಮೂಲ ಲಿಂಗದೇವರನ್ನೂ ಸಂದರ್ಶಿಸಿ ಮುಗಿಸಿಕೊಂಡೆವು. ಹೊರಗೆ ಸುತ್ತಲೂ ಕಾಣುತ್ತಿದ್ದ ಭಣಭಣ ಹೊಲದ ನಡುವೆ, ಮಾರ್ಚ್ ತಿಂಗಳ ಉರಿಯಲ್ಲೂ ಅಷ್ಟು ನೀರ ಸಮೃದ್ಧಿಯ ಕೆರೆ, ಸಣ್ಣ ಜೀರ್ಣೋದ್ಧಾರದಲ್ಲೂ ಅದ್ಭುತ ದೃಶ್ಯಾವಳಿಗಳನ್ನೇ ಕೊಡುವ ರಚನೆ ಕಂಡ ಧನ್ಯತೆಯಲ್ಲಿ ಮತ್ತೆ ‘ಓಬವ್ವನಕಿಂಡಿ’ಗಾಗಿಯೇ ಬೈಕಿಗೆ ಮರಳಿದೆವು.

ಹದಿನೇಳನೇ ಶತಮಾನದ ಇಕ್ಕೇರಿಯರಸ ವೆಂಕಟಪ್ಪ ನಾಯಕನ ಕೊಡುಗೆಯಂತೆ ಈ ಕೆರೆ ದೇವಳ. ಮೊಗಲರ ತಾಜಮಹಲಿನಂತೇ ಇದಕ್ಕೂ ಪ್ರೇಮ ಕತೆಯ ಸ್ಪರ್ಷವಿದೆ. ಸಾಲದೆಂಬಂತೆ ಸವತಿ ಸಂಘರ್ಷದ ರೋಚಕತೆ, ಇಂದಿನ ಲೆಕ್ಕದಲ್ಲಿ ಹೇಳುವುದಿದ್ದರೆ ಧರ್ಮರಾಜಕಾರಣದ ಕಿಡಿಯೂ ಇದೆ. ದೇವಳದ ಜೀರ್ಣೋದ್ಧಾರ ಹಾಗೂ ಇತಿಹಾಸದ ಕುರಿತು ಹೆಚ್ಚಿನ ಕೆಲಸ ಮಾಡಿದ, ಸ್ಥಳೀಯರೇ ಆದ (ಯಡೆಹಳ್ಳಿ) ಅರುಣ್ ಪ್ರಸಾದ್ ಅವರ ಹೆಸರನ್ನು ಶೈಲೇಂದ್ರ ನನಗೆ ತಿಳಿಸಿದ್ದರು. ಅರುಣ್ ಇತಿಹಾಸ, ವದಂತಿಗಳನ್ನು ಹೊಸೆದು ರಮ್ಯ ಪುಸ್ತಕ ರೂಪ ಕೊಟ್ಟಿರುವುದೂ ನನಗೆ ತಿಳಿಯಿತು. ಆದರೆ ನನ್ನ ಶೋಧ ಹಾಗೂ ಸಂಪರ್ಕ ಪ್ರಯತ್ನಗಳು ಇಂದಿನವರೆಗೂ ಫಲಕಾರಿಯಾಗಿಲ್ಲ. ನಿಮಗೇನಾದರೂ ತಿಳಿದಿದ್ದರೆ ಇಲ್ಲೇ ಹಂಚಿಕೊಳ್ಳಿ.

ದೇವಳ ವಠಾರದ ಪೌಳಿಯ ಮಗ್ಗುಲಿನಲ್ಲಿ ಮತ್ತಷ್ಟು ಸವಕಲು ಜಾಡಿನಲ್ಲಿ ಬೈಕ್ ನುಗ್ಗಿಸಿ, ಪ್ರಿ ವೆಡ್ಡಿನವರ ಕಾರುಗಳ ಬಂದಿದ್ದ ನಿಜ ದಾರಿ ಸೇರಿದೆವು. ಭಾರೀ ಲಾರಿ ಓಡಾಟದ ಲಕ್ಷಣವಿದ್ದ ಕೆಮ್ಮಣ್ಣ ದಾರಿ. ಅರ್ಧದಾರಿಯಲ್ಲೇ ಶೈಲೇಂದ್ರರು ಹೇಳಿದ್ದ ಮುರಕಲ್ಲ ಭಾರೀ ಕೋರೆಯನ್ನೂ ಮೇಲೆಂದ ಮೇಲೆ ನೋಡಿಕೊಂಡೆವು. ನಿಜ, ಶೈಲೇಂದ್ರರು ಹೇಳಿದಂತೆ ಅಲ್ಲಿನ ಮುರಕಲ್ಲ ಸೂರೆ ನಿಲ್ಲದೇ ಚಂಪಕಸರಸಿಯ ಅಭಿವೃದ್ಧಿಗೆ ಅರ್ಥ ಬರುವುದಿಲ್ಲ. ಶೈಥಿಲ್ಯ ಕಳೆದು, ಸುಂದರೀಕರಣ ಪೂರೈಸುವ ಕಾಲಕ್ಕೆ ಕೆರೆಯಲ್ಲಿ ನೀರಿಲ್ಲವಾಗುವ ಅಪಾಯಗಳು ಸ್ಪಷ್ಟವಿವೆ. (ಚಂಪಕ ಸರಸಿ ಕುರಿತ ಯೂಟ್ಯೂಬ್ ಕೃಪೆ: https://www.youtube.com/watch?v=k5Rf4N_RmxA)

(ಮುಂದುವರಿಯಲಿದೆ)

Comments

Popular posts from this blog

Blog number 1782. ಅರಳಸುರಳಿಯ ರಾಘವೇಂದ್ರ ಕೇಕೋಡರ ಕುಟುಂಬದ ತಪ್ಪು ನಿರ್ದಾರದ ದುರಂತ.

#ತೀರ್ಥಹಳ್ಳಿಯ_ಅರಳಸುರಳಿಯ_ಒಂದೇ_ಕುಟುಂಬದ_ನಾಲ್ವರು_ಮೃತರಾದ_ರಹಸ್ಯವೇನು? #ಈ_ಬಗ್ಗೆ_ಆ_ಊರಿನ_ಸಮೀಪದ_ಈ_ಕುಟುಂಬದ_ಪರಿಚಯ_ಇರುವವರಿಗೆ_ವಿಚಾರಿಸಿದ್ದೆ. #ಅವರು_ಈ_ಘಟನೆ_ಬಗ್ಗೆ_ಸವಿಸ್ತಾರವಾಗಿ_ಲಿಖಿತ_ಲೇಖನ_ಬರೆದಿದ್ದಾರೆ. #ಅವರ_ವಿನಂತಿ_ಅವರ_ಹೆಸರು_ಬಹಿರಂಗಗೊಳಿಸ_ಬಾರದು. #ಆದ್ದರಿಂದ_ಈ_ಲೇಖನ_ಪೋಸ್ಟ್_ಮಾಡಬಾರದೆಂದಿದ್ದೆ_ಆದರೆ_ಇದು_ಮಲೆನಾಡಿಗರ_ಮನೆ_ಮನೆಯ_ಕಥೆ #ಆದ್ದರಿಂದ_ಇಲ್ಲಿ_ಪೋಸ್ಟ್_ಮಾಡಿದೆ.    ಇಲ್ಲಿ ತಪ್ಪು ಯಾರದ್ದೂ ಇಲ್ಲ... ಪಶ್ಚಾತ್ತಾಪದ ಪ್ರಾಯಶ್ಚಿತ ಕೇಳಲು ಅವರಾರು ಇಲ್ಲ .....ಆದರೆ ಈ ರೀತಿ ಜೀವ ತ್ಯಾಗ ಮಾಡುವ ಆತುರದ ಕೆಟ್ಟ ನಿರ್ದಾರ ಮಾತ್ರ ಸರಿ ಅಲ್ಲ.     ಇವರ ಅಣ್ಣ ಆರ್.ಎಸ್.ಎಸ್. ಪ್ರಚಾರಕರಾಗಿ ದೆಹಲಿಯಲ್ಲಿ ಏಳು ವಷ೯ ಮೋದಿ ಜೊತೆ ಒಂದೇ ಕೋಣೆ ಹಂಚಿಕೊಂಡವರು, ಇನ್ನೊಬ್ಬ ಸಹೋದರ ಮೂಳೆ ತಜ್ಞರಾಗಿ ಶಿವಮೊಗ್ಗದಲ್ಲಿ ಆಸ್ಪತ್ರೆ ಮಾಡಿಕೊಂಡಿದ್ದಾರೆ.   #ದೀರ್ಘವಾದರೂ_ಪೂರ್ಣ_ಲೇಖನ_ಓದಿ   #ಹೀಗೊಂದು_ಸುಕುಟುಂಬ_ಆತ್ಮಾಘಾತ_ಮತ್ತು_ತದನಂತರದ_ಸಹಾಗಮನ.... ಮೂಡಣದಲ್ಲಿ ರವಿ ಮೂಡಲು ಅಣಿ ಯಾಗುತ್ತಿಧ್ದ .. ಹಾದಿಗಣಪತಿ ದೇವರು ಗರ್ಭಗುಡಿಯ ನಂದಾದೀಪದ ಮಂದ ಬೆಳಕಿನಲ್ಲಿ ತನ್ನ ಗುಡಿಯ ಎದುರಿನ ತಗ್ಗಿನಲ್ಲಿದ್ದ  ರಾಘವೇಂದ್ರ ಕೇಕೋಡರ ಮನೆಯನ್ನು ಎವೆಯಕ್ಕದೇ ನೋಡುತ್ತಲಿದ್ದ... ಊರ ಎಲ್ಲಾ ಮನೆಯಂತೆ ಆ ಮನೆಯಲ್ಲೂ ಆ ಬೆಳಗಿನಲ್ಲಿ ಮನೆಯೊಡತಿ ನಾಗರತ್ನಕ್ಕ ಆ ಸಮಯದಲ್ಲಿ ದೇವರಿಗೆ ದೀಪ ಹಚ್ಚಿ ಹೊಸ್ತಿಲು ಪೂಜೆ ಮಾಡ

Blog number 1037. ರಾಜಕುಮಾರಿ ಶಾಂತವ್ವ ಮತ್ತು ದಲಿತ ಯುವಕ ಸಿದ್ದೇಶ್ವರರ ಅಮರ ಪ್ರೇಮದ ಸ್ಮಾರಕ, ಅನ್ಯ ಜಾತಿ ವಿವಾಹವಾದ್ದರಿಂದ ರಾಜಕುಮಾರಿಗೆ ಸೂಳೆ ಪಟ್ಟ ನೀಡಿದ ಸಮಾಜ. ಸಮಾಜದ ಒಳಿತಿಗಾಗಿ ಶಾಂತವ್ವ ಕಟ್ಟಿಸಿದ ಬೃಹತ್ ಕೆರೆಗೆ ಜನ ಕರೆದದ್ದು ಸೂಳೆ ಕಟ್ಟಿಸಿದ ಕೆರೆ ಅದೇ ಸೂಳೆಕೆರೆ / ಶಾಂತಿ ಸಾಗರ

# ಸೂಳೆಕೆರೆ (ಶಾಂತಿ ಸಾಗರ) ಅಂತರ್ ಜಾತಿ ಪ್ರೇಮ ವಿವಾಹದ ದುರOತ ಕಥೆ. #ಅಕ್ಟೋಬರ್ 2019 ರಲ್ಲಿ ತುಂಬಿ ತುಳುಕಿತ್ತು.  ಚಿತ್ರದುಗ೯, ದಾವಣಗೆರೆ ಬಳ್ಳಾರಿ ಮುಂತಾದ ಮಳೆ ಕಡಿಮೆ ಆಗುತ್ತಿದ್ದ ಜಿಲ್ಲೆಗಳಲ್ಲಿ ಅದೂ ಅಕ್ಟೋಬರ್ ತಿಂಗಳ 2019 ರಲ್ಲಿ  ಬಂದಿದ್ದ ಬಾರಿ ಮಳೆ ಎಲ್ಲಾ ಕೆರೆ, ಹೊಂಡಗಳು ತುಂಬಿ ತುಳುಕಿದೆ, ಸಾಮಾಜಿಕ ಜಾಲ ತಾಣದಲ್ಲಿ 40 ವಷ೯ದಲ್ಲಿ ಇಂತ ಮಳೆ ಬಂದಿಲ್ಲ ಅಂತ ಸುದ್ದಿ ಹರಿದಾಡುತ್ತಿತ್ತು ಮತ್ತು  ಸೂಳೆಕೆರೆ ತುಂಬಿ ಕೋಡಿ ಬಿದ್ದಿದೆ ಅಂತೆಲ್ಲ Post ನೋಡಿ ಬೆಂಗಳೂರಿಂದ ಬರುವಾಗ ಚಿತ್ರದುಗ೯ ಮಾಗ೯ವಾಗಿ ಚನ್ನಗಿರಿ ತಲುಪಿ ಸೂಳೆಕೆರೆ ನೋಡಲು ಹೋಗಿದ್ದೆ.  11ನೇ ಶತಮಾನದಲ್ಲಿ (1128ರಲ್ಲಿ)ಕೇವಲ 3 ವಷ೯ದಲ್ಲಿ ಈ ಕೆರೆ ನಿಮಾ೯ಣ ಮಾಡಿಸಿದ್ದು ಶಾಂತವ್ವ ಎಂಬ ರಾಜ ಕುಮಾರಿ ಅವಳು ಸ್ವಣ೯ವತಿ ಪಟ್ಟಣದ ದೊರೆ ವಿಕ್ರಮ ರಾಜನ ಮಗಳು, ಸಿದ್ದೇಶ್ವರ ಎಂಬ ಅನ್ಯ ಜಾತಿಯ ಯುವಕನೊ೦ದಿಗೆ ಗಾಂದವ೯ ವಿವಾಹ ಆಗುತ್ತಾಳೆ ಇದನ್ನ ಸಹಿಸದ ಮತ್ತು ಒಪ್ಪದ ಜನತೆ ಸೂಳೆ ಎಂದು ಮೂದಲಿಸುತ್ತಾರOತೆ ಈ ರೀತಿ ತನಗೆ ಬಂದ ಕಳಂಕ ಕಳೆಯಲು ಈ ಬೃಹತ್ ಕೆರೆ ತನ್ನ ಪತಿ ಸಿದ್ದೇಶ್ವರನ ಜೊತೆ ಸೇರಿ ನಿಮಿ೯ಸಿ ಕೆರೆಗೆ ಹಾರವಾದಳೆoಬ ಇತಿಹಾಸ ಇದೆ ಇದರಿಂದ ನೊಂದ ಪತಿ ಸಿದ್ಧೇಶ್ವರ ಕೂಡ ಎದುರಿನ ಗುಡ್ಡದಲ್ಲಿ ಜೀವ ತ್ಯಾಗ ಮಾಡುತ್ತಾನೆ ಈಗ ಅಲ್ಲಿ ಸಿದ್ದೇಶ್ವರ ದೇವಸ್ಥಾನವಿದೆ.   ಈ ಕೆರೆ ಈಗಲೂ ಸೂಳೆಕೆರೆ ಎಂದೆ ಹೆಸರಾಗಿದೆ ಈ

# ಜುಟ್ಟು ಕಾಳಿಂಗ ಸಪ೯ದ ಆಸ್ತಿತ್ವದ ಮಲೆನಾಡಿನ ಮಿಥ್ಯೆ#

  # ಕಾಳಿ೦ಗ ಸಪ೯ದಲ್ಲಿ ಜುಟ್ಟು ಕಾಳಿಂಗ ಸಪ೯ ಅಂತ ಇದೇ ಅನ್ನುವ ಯಾರು ನೋಡದ ಸಪ೯ದ ಅಸ್ತಿತ್ವ#    ಮಲೆನಾಡಿನ ಹಳ್ಳಿಗಳಲ್ಲಿ, ಅದು ಕಾಳಿ೦ಗ ಸಪ೯ದ ವಾಸಸ್ಥಳದ ಪರಿಸರದಲ್ಲಿ ಜುಟ್ಟು ಕಾಳಿಂಗ ಸಪ೯ ಇದೆ ಅನ್ನುವ ಮಾತು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ ಆ ರೀತಿಯ ಹಾವು ಇಲ್ಲ ಎಂದು ಹಾವಿನ ಬಗ್ಗೆ ಸಂಶೋದನೆ ಮಾಡುವವರು, ಅರಣ್ಯ ಇಲಾಖೆಯವರು, ಹಾವು ಹಿಡಿಯುವವರು ಖಡಾಖಂಡಿತವಾಗಿ ಹೇಳುತ್ತಾರಾದರು, ಈ ವದಂತಿ ಹೇಗೆ ಹರಡಿದೆ?.    ಇದು ಒಂದು ಊರು ಹಳ್ಳಿಯಲ್ಲ ನಾನು ನೋಡಿದಂತೆ ಮಹಾರಾಷ್ಟ್ರದ ರತ್ನಗಿರಿಯಿ೦ದ ಕೇರಳದ ಕಾಸರಗೋಡಿನ ತನಕ ಜುಟ್ಟು ಕಾಳಿಂಗದ ಅನೇಕ ರೋಚಕ ಕಥೆ ಕೇಳಿದ್ದೇನೆ.   ಪ್ರತ್ಯಕ್ಷ ನೋಡಿದವರು ತಾವು ಎನ್ನುವ ಅನೇಕರಲ್ಲಿ ಮಾತಾಡಿದ್ದೇನೆ ಆದರೆ ಅದು ನಂಬಲಹ೯ ಮಾಹಿತಿ ಅನಿಸಲಿಲ್ಲ, ಒಂದು ರೀತಿ ಕಾಲ್ಪನಿಕ ತ್ರಿಲ್ಲರ್ ಕಥೆ ಅಷ್ಟೇ ಅನ್ನಬಹುದು.    ಜಡೆ ಕಾಳಿಂಗ ಸಪ೯ಕ್ಕೆ ರೋಷ ಜಾಸ್ತಿ, ಹೆಡೆ ಮೇಲೆ ಕೂದಲಿನ ಜುಟ್ಟು ಇರುತ್ತೆ, ಮನುಷ್ಯರನ್ನ ಕಂಡರೆ ಓಡಿಸಿಕೊಂಡು ಬರುತ್ತೆ, ಅದರಿಂದ ತಪ್ಪಿಸಿಕೊಳ್ಳಲು ಒಂದೇ ದಾರಿ ಅದೇನೆಂದರೆ ತಗ್ಗಿನ ಪ್ರದೇಶದಲ್ಲಿ ಓಡುವುದು.     ಯಾಕೆ೦ದರೆ ಓಡಿಸಿಕೊಂಡು ಬರುವ ಜುಟ್ಟು ಕಾಳಿಂಗದ ಜುಟ್ಟು, ಇಳಿಜಾರಿನಲ್ಲಿ ಅದರ ತಲೆಯಿ೦ದ ಇಳಿಜಾರಿಗೆ ಸರಿಯುವುದರಿಂದ  ಕಣ್ಣಿನ ಮೇಲೆ ಕೂದಲ ಜುಟ್ಟು ಮುಚ್ಚುವುದರಿಂದ ಕಣ್ಣು ಕಾಣುವುದಿಲ್ಲ, ಆಗಲೇ ತಪ್ಪಿಸಿಕೊಳ್ಳಬೇಕು ಅಂತ ಬಿದನೂರು ನಗರ ಸಮೀಪದ ದೇವಗಂಗೆ ಎಂಬ ಕೆಳದಿ